ಬಾಟಲಿ ಬಡಿದಾಟ ಪ್ರಕರಣ: ಕಟಕಟೆಯಲ್ಲಿ ಕಂಪ್ಲಿ ಗಣೇಶ್!
ರಾಮನಗರ, ನವೆಂಬರ್.14: ಬಾಟಲಿ ಬಡಿದಾಟ ಪ್ರಕರಣ ಅಂದಾಕ್ಷಣ ಥಟ್ ರಾಜ್ಯದ ಜನರಿಗೆ ಅಂತಾ ನೆನಪಿಗೆ ಬರುವುದೇ ಈಗಲ್ ಟನ್ ರೆಸಾರ್ಟ್. ಅಂದು ಜನರಿಂದ ಜನರಿಗಾಗಿ ಜನರಿಕೋಸ್ಕರ ಆಯ್ಕೆಯಾದ ಜನಪ್ರತಿನಿಧಿಗಳು ಗೂಂಡಾಗಳಂತೆ ಬಾಟಲಿ ಹಿಡಿದು ಬಡಿದಾಡಿಕೊಂಡಿದ್ದರು.
ಈ ಪ್ರಕರಣ ಇಡೀ ರಾಜ್ಯವಷ್ಟೇ ಅಲ್ಲ, ರಾಷ್ಟ್ರ ಮಟ್ಟದಲ್ಲೂ ಸಖತ್ ಸುದ್ದಿಯಾಗಿತ್ತು. ಈ ಇಬ್ಬರು ನಾಯಕರು ಒಂದೇ ಜಿಲ್ಲೆಯವರೇ ಆಗಿದ್ದು, ಒಂದಾನೊಂದು ಕಾಲದಲ್ಲಿ ಕೈ ಕುಲಾಯಿಸುತ್ತಿದ್ದರು. ಆದರೆ, ಅದೊಂದು ರಾತ್ರಿ ಮಾತ್ರ ಕೈ ಕೈ ಮಿಲಾಯಿಸಿ ಬಿಟ್ಟಿದ್ದರು.
ಆನಂದ್ ಸಿಂಗ್ ಮೇಲೆ ಹಲ್ಲೆ ಪ್ರಕರಣ: ಕಂಪ್ಲಿ ಗಣೇಶ್ ಗೆ ಜಾಮೀನು
ಜಾಸ್ತಿ ಹೇಳೋದೇನು ಬೇಡ. ಆ ಇಬ್ಬರು ನಾಯಕರು ಮತ್ಯಾರೂ ಅಲ್ಲ. ಕಂಪ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಗಣೇಶ್ ಹಾಗೂ ವಿಜಯನಗರ ಕ್ಷೇತ್ರದ ಈಗಿನ ಅನರ್ಹ ಶಾಸಕ ಆನಂದ್ ಸಿಂಗ್. ಬಿಡದಿ ಬಳಿಯ ಈಗಲ್ ಟನ್ ರೆಸಾರ್ಟ್ ನಲ್ಲಿ ಇಬ್ಬರು ನಾಯಕರು ಬಾಟಲಿ ಹಿಡಿದು ಬಡಿದಾಡಿಕೊಂಡಿದ್ದರು.
ಕೋರ್ಟ್ ಕಟಕಟೆಯಲ್ಲಿ ಕಂಪ್ಲಿ ಗಣೇಶ್:
ಹೌದು, ಅನರ್ಹ ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿದ ಶಾಸಕ ಕಂಪ್ಲಿ ಗಣೇಶ್ ಇಂದು ಕೋರ್ಟ್ ರಾಮನಗರದ ಸಿಜೆಎಂ ಕೋರ್ಟ್ ಗೆ ಹಾಜರಾಗಿದ್ದರು. ಶಾಸಕರನ್ನು ವಿಚಾರಣೆ ನಡೆಸಿದ ನ್ಯಾಯಾಧೀಶ ಕುಲಕರ್ಣಿ ನರಹರಿ, ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್ ಗೆ ವಿಚಾರಣೆಯನ್ನು ವರ್ಗಾವಣೆಗೊಳಿಸಿದರು.
ಕಳೆದ ಜನವರಿ.19ರಂದು ಬಿಡದಿಯ ಈಗಲ್ ಟನ್ ರೆಸಾರ್ಟ್ ನಲ್ಲಿ ಕ್ಷುಲ್ಲಕ ಕಾರಣಕ್ಕೆ ಇಬ್ಬರು ಶಾಸಕರು ಬಡಿದಾಡಿಕೊಂಡಿದ್ದರು. ಇದರಿಂದ ಆನಂದ್ ಸಿಂಗ್ ಕಣ್ಣಿಗೆ ಗಂಭೀರವಾದ ಗಾಯವಾಗಿತ್ತು. ಅಂದು ತಮ್ಮ ಶಿಷ್ಯ ಕಂಪ್ಲಿ ಗಣೇಶ್ ವಿರುದ್ಧವೇ ಆನಂದ್ ಸಿಂಗ್ ಬಿಡದಿ ಪೊಲೀಸ್ ಠಾಣೆಯಲ್ಲಿ ಕೇಸ್ ಜಡಿದಿದ್ದರು. ಈ ಪ್ರಕರಣವನ್ನು ಇಂದು ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್ ಗೆ ವರ್ಗಾವಣೆಗೊಳಿಸಲಾಗಿದೆ.