ರಾಮನಗರದಲ್ಲಿ ಮತ್ತೇ ಕಾಣಿಸಿಕೊಂಡ ಕಾಲುಬಾಯಿ ಜ್ವರ: 26 ರಾಸುಗಳು ಸಾವು
ರಾಮನಗರ, ಜೂನ್. 15: ಕಾಲುಬಾಯಿ ಜ್ವರ ರಾಜ್ಯದಲ್ಲೇ ಮೊದಲು ಕಾಣಿಸಿಕೊಂಡಿದ್ದು ರಾಮನಗರ ಜಿಲ್ಲೆಯಲ್ಲಿ 2013 ರಲ್ಲಿ. ಜಿಲ್ಲೆಯಲ್ಲಿ ಕಾಣಿಸಿಕೊಂಡ ಕಾಲುಬಾಯಿ ಜ್ವರಕ್ಕೆ ರಾಮನಗರ ಜಿಲ್ಲೆಯಲ್ಲಿಯೇ 2543 ರಾಸುಗಳು ಸಾವನ್ನಪ್ಪಿದ್ದರೆ, ರಾಜ್ಯದಲ್ಲಿ 10 ಸಾವಿರಕ್ಕೂ ಹೆಚ್ಚು ರಾಸುಗಳು ಮಹಾಮಾರಿಗೆ ಬಲಿಯಾಗಿದ್ದವು.
ಇದೀಗ ಮತ್ತೆ ರೇಷ್ಮೆನಗರಿ ರಾಮನಗರ ಜಿಲ್ಲೆಯಲ್ಲಿಯೇ ಕಾಲುಬಾಯಿ ಜ್ವರ ಕಾಣಿಸಿಕೊಂಡಿದೆ. ರೇಷ್ಮೆನಗರಿ ರಾಮನಗರ ಜಿಲ್ಲೆಯಲ್ಲಿ ಹೈನುಗಾರಿಕೆ ನಂಬಿಕೊಂಡಿರುವ ರೈತರಿಗೆ ಇದೀಗ ಬರಸಿಡಿಲು ಬಡಿದಂತಾಗಿದೆ.
ವಿಷ ಆಹಾರ ಸೇವನೆಯಿಂದ 50 ಕ್ಕೂ ಅಧಿಕ ಜಾನುವಾರುಗಳ ಸಾವು..!?
ಜಿಲ್ಲೆಗೆ 5 ವರ್ಷಗಳ ಬಳಿಕ ಮಹಾಮಾರಿ ಕಾಲುಬಾಯಿ ಜ್ವರ ಮತ್ತೆ ಕಾಲಿಟ್ಟಿದ್ದು, ಮೂರು ತಿಂಗಳಲ್ಲೇ 26 ರಾಸುಗಳನ್ನು ಬಲಿತೆಗೆದುಕೊಂಡಿದೆ. ರೈತರ ನಿರ್ಲಕ್ಷ್ಯ ಹಾಗೂ ಪಶು ಇಲಾಖೆಯ ಬೇಜವಬ್ದಾರಿತನಕ್ಕೆ ಇದೀಗ ಮೂಕ ಪ್ರಾಣಿಗಳು ಸಾವನ್ನಪ್ಪುತ್ತಿವೆ. ನೂರಾರು ಹಸುಗಳು ಸೋಂಕಿನಿಂದ ಬಳಲುತ್ತಿವೆ.
ತಾಲೂಕಿನ ಕೂಟಗಲ್, ಹೊಸೂರು, ಜೋಗಿದೊಡ್ಡಿ, ಅರೇಹಳ್ಳಿ, ಕ್ಯಾಸಾಪುರ ಸೇರಿದಂತೆ ನಾನಾ ಗ್ರಾಮಗಳಲ್ಲಿ ಕಾಲುಬಾಯಿ ಜ್ವರ ಆವರಿಸಿದೆ. ಸತತ ಬರದ ನಡುವೆ ಹಾಲಿನ ದರ ಇಳಿಕೆ, ಪ್ರೋತ್ಸಾಹ ಧನ ಕಡಿತ ಸೇರಿದಂತೆ ರೈತರು ನಾನಾ ಬವಣೆಗಳ ನಡುವೆಯೇ ಹೈನೋದ್ಯಮ ಅವಲಂಬಿಸಿದ್ದಾರೆ.
ಬ್ಯಾಕ್ಟೀರಿಯದಿಂದ ಹರಡುವ ರೋಗವಾದ ಎಚ್ಎಸ್ ಸಾಮಾನ್ಯವಾಗಿ ಮಳೆಗಾಲದಲ್ಲಿ ಕಾಡುತ್ತದೆ. ಅದರೊಟ್ಟಿಗೆ ವೈರಾಣುಗಳಿಂದ ಬರುವ ಕಾಲುಬಾಯಿ ಜ್ವರವೂ ಆವರಿಸಿಕೊಂಡರೆ, ನಿಯಂತ್ರಣಕ್ಕೆ ತರುವುದು ಕಷ್ಟಸಾಧ್ಯ.
ಕಳೆದ ಮಾರ್ಚ್ ತಿಂಗಳಿನಿಂದಲೇ ಕಾಲುಬಾಯಿ ರೋಗ ಕಾಣಿಸಿಕೊಂಡಿದ್ದರೂ ಸಹ ರೈತರಲ್ಲಿ ಜಾಗೃತಿ ಮೂಡಿಸುವಲ್ಲಿ ಪಶು ಸಂಗೋಪನಾ ಇಲಾಖೆ ಹಾಗೂ ಬಮೂಲ್ ಆಡಳಿತ ವಿಫಲವಾಗಿದೆ.
ರೈತರು ಹಸುವಿಗೆ ವ್ಯಾಕ್ಸಿನೇಷನ್ ಹಾಕಿಸುವುದರಿಂದ ಹಾಲಿನಲ್ಲಿ ಇಳಿಕೆಯಾಗುವುದರಿಂದ ರೈತರು ಸರಿಯಾಗಿ ಚಿಕಿತ್ಸೆ ಕೊಡಿಸದೇ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಸ್ಥಳೀಯ ಪಶು ವೈದ್ಯಾಧಿಕಾರಿ ತಿಳಿಸಿದ್ದಾರೆ.
ಇನ್ನಾದರೂ ಪಶು ಇಲಾಖೆ ಅಧಿಕಾರಿಗಳು ಮೃತ ರಾಸುಗಳ ಮಾಲೀಕರಿಗೆ ಪರಿಹಾರ, ಕಾಲುಬಾಯಿ ಜ್ವರಬಾಧೆ ನಿಯಂತ್ರಣ ಮತ್ತು ಲಸಿಕೆ ನೀಡುವ ಕಾರ್ಯಕ್ರಮದ ಪರಿಣಾಮಕಾರಿ ಅನುಷ್ಠಾನಕ್ಕೆ ಮುಂದಾಗಬೇಕಿದೆ.