ಏಸು ಪ್ರತಿಮೆ ನಿರ್ಮಿಸಲು ಮುಂದಾದ ಡಿಕೆಶಿಗೆ ಬಿಎಸ್ವೈ ಪುತ್ರ ಕೇಳಿದ 3 ಪ್ರಶ್ನೆಗಳು
ಬೆಂಗಳೂರು, ಡಿ 28: ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಕಪಾಲಿ ಬೆಟ್ಟದಲ್ಲಿ, ಮಾಜಿ ಸಚಿವ, ಕ್ಷೇತ್ರದ ಶಾಸಕ ಡಿ.ಕೆ.ಶಿವಕುಮಾರ್, ಕ್ರಿಸ್ಮಸ್ ದಿನದಂದು ಶಿಲಾನ್ಯಾಸ ಮಾಡಿರುವ ಏಸು ಪ್ರತಿಮೆ ನಿರ್ಮಾಣ ವಿಚಾರ, ರಾಜ್ಯಾದ್ಯಂತ ಸಂಚಲನ ಮೂಡಿಸಿದೆ.
ಬಿಜೆಪಿ ಮುಖಂಡರು ಡಿಕೆಶಿ ನಡೆಗೆ ಟೀಕಾಪ್ರಹಾರ ನಡೆಸುತ್ತಿದ್ದರೆ, "ನನ್ನ ಕ್ಷೇತ್ರದಲ್ಲಿ ಎಲ್ಲಾ ಜಾತಿಧರ್ಮದವರಿದ್ದಾರೆ. ಬಿಜೆಪಿಯಿಂದ ಪಾಠ ಕಲಿಯಬೇಕಾಗಿಲ್ಲ" ಎಂದು ಡಿ.ಕೆ.ಶಿವಕುಮಾರ್ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.
ಅಂದು, ಇಂದು: ಡಿ.ಕೆ.ಶಿವಕುಮಾರ್ ಸಹೋದರರ ಡಬಲ್ ಸ್ಟ್ಯಾಂಡರ್ಡ್
ಈ ನಡುವೆ ಬಿಜೆಪಿ ರಾಜ್ಯ ಯುವಮೋರ್ಚಾದ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ, ಏಸು ಪ್ರತಿಮೆ ನಿರ್ಮಾಣ ವಿಚಾರದಲ್ಲಿ ಡಿಕೆಶಿಗೆ ಮೂರು ಪ್ರಶ್ನೆಯನ್ನು ಟ್ವಿಟ್ಟರ್ ಮೂಲಕ ಕೇಳಿದ್ದಾರೆ. ಅದು ಹೀಗಿದೆ:
1. ಶ್ರೀ. @DKShivakumar ರವರೇ, ಕಾಂಗ್ರೆಸ್ ಹೈಕಮಾಂಡ್ ಓಲೈಕೆ ಅಸ್ತ್ರವಾಗಿ ಏಸುವನ್ನು ಬಳಸಿಕೊಳ್ಳುತ್ತಿರುವ ನಿಮ್ಮ ನಡೆ, ನಾಡಿನ ಸಂಸ್ಕೃತಿ, ಇತಿಹಾಸಕ್ಕೆ ಬಗೆಯುತ್ತಿರುವ ಐತಿಹಾಸಿಕ ಅಪಚಾರವಾಗಿದೆ. ಸ್ಥಳ ಮಹಿಮೆಯ ಹಿನ್ನಲೆಯಲ್ಲಿ ಪ್ರತಿಮೆ, ಸ್ಮಾರಕಗಳ ನಿರ್ಮಾಣವಾಗುತ್ತದೆ. ಏಷ್ಯಾದಲ್ಲೇ ಎತ್ತರದ ಏಸು ಪ್ರತಿಮೆ ನಿರ್ಮಾಣದ ಸ್ಥಳ ಮಹಿಮೆ ಹಿನ್ನಲೆ ಏನು?
2. ಶ್ರೀ. @DKShivakumar ರವರೇ, ಕೆಪಿಸಿಸಿ ಅಧ್ಯಕ್ಷ ಪಟ್ಟದಲ್ಲಿ ಕುಳಿತುಕೊಳ್ಳಲು ಈ ಪರಿಯಲ್ಲಿ ನಿಮ್ಮ ಹೈಕಮಾಂಡ್ ಓಲೈಸಬೇಕೇ?
3. ಕೆಂಪೇಗೌಡರ ನೆಲದ ಹೆಗ್ಗಳಿಕೆಯ ಇತಿಹಾಸದ ಮೇಲೆ ಅಟ್ಟಹಾಸ ಮೆರೆದು ಕನ್ನಡನಾಡಿನ ವೈಭವದ ಸಂಸ್ಕೃತಿಗೆ ಧಕ್ಕೆತರುವ ಐತಿಹಾಸಿಕ ಪ್ರಮಾದ ಮಾಡುತ್ತಿದ್ದೀರಿ. ಇದಕ್ಕೆ ರಾಹುಲ್, ಸೋನಿಯಾ ಬೆನ್ನು ತಟ್ಟಬಹುದು, ಜನತೆ ಕ್ಷಮಿಸುವರೇ?