'ಕೈ' ಬಿಟ್ಟ ಜೇಡ್ರಳ್ಳಿ ಕೃಷ್ಣಪ್ಪ ಜೆಡಿಎಸ್ ಗೆ, ಮಾಗಡೀಲಿ ಇದೇನಿದು?
Recommended Video
ರಾಮನಗರ, ಮಾರ್ಚ್ 23: ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ 'ವಿಕಾಸ ಪರ್ವ' ಸಮಾವೇಶಕ್ಕೆ ಎರಡು ದಿನ ಇರುವಂತೆ ಕಾಂಗ್ರೆಸ್ ಮುಖಂಡ ಮತ್ತು ಕೆಂಪೇಗೌಡ ಪ್ರಾಧಿಕಾರದ ನಿರ್ದೇಶಕ ಎಚ್.ಎಂ.ಕೃಷ್ಣಮೂರ್ತಿ (ಜೇಡ್ರಳ್ಳಿ ಕೃಷ್ಣಪ್ಪ) ಜೆಡಿಎಸ್ ಪಾಳಯದಲ್ಲಿ ಕಾಣಿಸಿಕೊಂಡಿದ್ದಾರೆ.
ಮಾಗಡಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎ.ಮಂಜು ನೇತೃತ್ವದಲ್ಲಿ ಶುಕ್ರವಾರ ಮನೆ ಮನೆ ಕುಮಾರಣ್ಣ ಕಾರ್ಯಕ್ರಮದ ಪ್ರಚಾರ ಪಟ್ಟಣದ 13ನೇ ವಾರ್ಡ್ ನಲ್ಲಿ ನಡೆಯುತ್ತಿದ್ದ ಸಂದರ್ಭದಲ್ಲಿ ದಿಢೀರ್ ಪ್ರತ್ಯಕ್ಷರಾದ ಜೇಡ್ರಳ್ಳಿ ಕೃಷ್ಣಪ್ಪ ಜೆಡಿಎಸ್ ಮುಖಂಡರೊಂದಿಗೆ ಪುರಸಭೆ ಸದಸ್ಯರಾದ ಶಿವಕುಮಾರ್ ಮನೆಯಲ್ಲಿ ಮಹತ್ವದ ಸಭೆ ನಡೆಸಿದರು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಜೆಡಿಎಸ್ ಎ.ಮಂಜು, ಒಕ್ಕಲಿಗರ ಸಂಘದ ನಿರ್ದೇಶಕ ಪೂಜಾರಿ ಪಾಳ್ಯ ಕೃಷ್ಣಮೂರ್ತಿ ಸೇರಿ ಹಲವು ಜೆಡಿಎಸ್ ಮುಖಂಡರ ಸಮ್ಮುಖದಲ್ಲಿ ಸಭೆ ನಡೆದಿದ್ದು, ಜೆಡಿಎಸ್ ಸೇರುವುದಾಗಿ ಕೃಷ್ಣಪ್ಪ ಘೋಷಿಸಿದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಬೆಂಬಲಿಸುವ ನಿಟ್ಟಿನಲ್ಲಿ ಜೆಡಿಎಸ್ ಪಕ್ಷವನ್ನು ಸೇರಲು ನಿರ್ಧರಿಸಲಾಗಿದ್ದು, ಶನಿವಾರ ಮಾಗಡಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಪಕ್ಷ ಸೇರ್ಪಡೆ ದಿನಾಂಕವನ್ನು ತಿಳಿಸುವುದಾಗಿ ಜೇಡ್ರಳ್ಳಿ ಕೃಷ್ಣಪ್ಪ ಹೇಳಿದರು.
ಇದೇ ವೇಳೆ ಮಾಗಡಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎ.ಮಂಜು ಅವರು ಕೃಷ್ಣಪ್ಪಗೆ ಶಾಲು ಹಾಕಿ, ಅಭಿನಂದಿಸಿದರು. ಭಾನುವಾರ ಮಾಗಡಿಯಲ್ಲಿ ನಡೆಯುವ ವಿಕಾಸ ಪರ್ವ ಸಮಾವೇಶದಲ್ಲಿ ಜೇಡ್ರಳ್ಳಿ ಕೃಷ್ಣಪ್ಪ ಅಧಿಕೃತವಾಗಿ ಜೆಡಿಎಸ್ ಸೇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.