ಒಂದೇ ದಿನದಲ್ಲಿ ನಿರ್ಧಾರ ಬದಲಿಸಿದ ಜೇಡ್ರಳ್ಳಿ ಕೃಷ್ಣಪ್ಪ, ಡಿಕೆಶಿ ಕೈವಾಡ ಶಂಕೆ
ರಾಮನಗರ, ಮಾರ್ಚ್ 24: ಶುಕ್ರವಾರ ಜೆಡಿಎಸ್ ಪಾಳಯದಲ್ಲಿ ಕಾಣಿಸಿಕೊಂಡು ಜೆಡಿಎಸ್ ಶಾಲು ಹಾಕಿಕೊಂಡು ಪೋಟೋಗಳಿಗಳಿಗೆ ಪೋಸು ನೀಡಿದ್ದ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕರದ ನಿರ್ದೇಶಕ ಹೆಚ್.ಎಂ.ಕೃಷ್ಣಮೂರ್ತಿ (ಜೇಡ್ರಳ್ಳಿ ಕೃಷ್ಣಪ್ಪ) ಒಂದೇ ದಿನದಲ್ಲಿ ತಮ್ಮ ವರಸೆ ಬದಲಿಸಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಶುಕ್ರವಾರ ಮಾಗಡಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎ.ಮಂಜು ನೇತೃತ್ವದಲ್ಲಿ ಮನೆ ಮನೆ ಕುಮಾರಣ್ಣ ಕಾರ್ಯಕ್ರಮದ ಪ್ರಚಾರವನ್ನು 13 ನೇ ವಾರ್ಡಿನಲ್ಲಿ ನಡೆಯುತ್ತಿದ್ದ ಸಂದರ್ಭದಲ್ಲಿ ಧೀಡಿರ್ ಪ್ರತ್ಯಕ್ಷವಾದ ಜೇಡರಹಳ್ಳಿ ಕೃಷ್ಣಪ್ಪ ಅವರು ಪುರಸಭೆ ಸದಸ್ಯರಾದ ಶಿವಕುಮಾರ್ ಮನೆಯಲ್ಲಿ ಸಭೆ ನಡೆಸಿ ನಂತರ ಜೆಡಿಎಸ್ ಶಾಲು ಹಾಕಿಸಿಕೊಂಡರು.
'ಕೈ' ಬಿಟ್ಟ ಜೇಡ್ರಳ್ಳಿ ಕೃಷ್ಣಪ್ಪ ಜೆಡಿಎಸ್ ಗೆ, ಮಾಗಡೀಲಿ ಇದೇನಿದು?
ಇದೇ ಸಂದರ್ಭದಲ್ಲಿ ಒಕ್ಕಲಿಗರ ಸಂಘದ ನಿದೇಶಕ ಪೂಜಾರಿ ಪಾಳ್ಯ ಕೃಷ್ಣಮೂರ್ತಿ ಸೇರಿದಂತೆ ಸಾವಿರಾರು ಕಾರ್ಯಕರ್ತರ ಸಭೆಯಲ್ಲಿ ಜೆಡಿಎಸ್ ಸೇರುವುದಾಗಿ ಹೇಳಿ ಜೆಡಿಎಸ್ ಮುಖಂಡರೊಂದಿಗೆ ಪೋಟೋ ಸಹ ತೆಗೆಸಿಕೊಂಡು ಇವೆಲ್ಲಾ ಮಾಧ್ಯಮದಲ್ಲಿ ವರದಿಯೂ ಆಗಿತ್ತು.
ಆದರೆ ಶನಿವಾರ ಯೂಟರ್ನ್ ಹೊಡೆದಿರುವ ಜೆಡ್ರಹಳ್ಳಿ ಕೃಷ್ಣಪ್ಪ, ಯಾವುದೋ ಮೂಲೆಯಲ್ಲಿ ಕುಳಿತು ಈ ರೀತಿಯ ನಿರ್ಣಯ ತೆಗೆದುಕೊಳ್ಳುವುದಿಲ್ಲ, ಕೇವಲ ಸ್ನೇಹ ಪೂರ್ವಕವಾಗಿ ಎ.ಮಂಜು ಅವರನ್ನು ಭೇಟಿಯಾಗಿದ್ದನ್ನೇ ಪಕ್ಷ ಸೇರ್ಪಡೆ ಎಂಬುದಾಗಿ ಬಿಂಬಿಸಿದ್ದು ತಪ್ಪು, ನಾನು ಕಾರ್ಯಕರ್ತರ ಮತ್ತು ಬೆಂಬಲಿಗರ ಸಭೆ ಕರೆದು ಮಾಗಡಿ ಕೆಂಪೇಗೌಡ ಪ್ರತಿಮೆ ಎದುರು ನನ್ನ ನಿರ್ಧಾರ ತಿಳಿಸುತ್ತೇನೆ ಎಂದು ಹೆಚ್.ಎಂ.ಕೃಷ್ಣಮೂರ್ತಿ ಅವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಜೆಡ್ರಹಳ್ಳಿ ಕೃಷ್ಣಪ್ಪ ರಾತ್ರೋರಾತ್ರಿ ತಮ್ಮ ನಿರ್ಧಾರ ಬದಲಿಸಿರುವುದರ ಹಿಂದೆ ಡಿ.ಕೆ.ಶಿವಕುಮಾರ್ ಅವರ ಕೈವಾಡ ಇರಬಹುದು ಎಂಬ ಶಂಕೆ ಮಾಗಡಿ ಕ್ಷೇತ್ರದ ಜನರಲ್ಲಿ ವ್ಯಕ್ತವಾಗಿದೆ. ಮಾಗಡಿಯಲ್ಲಿ ಮಾರ್ಚ್ 25ಕ್ಕೆ ನಿಗದಿಯಾಗಿರುವ ವಿಕಾಸ ಪರ್ವ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಪಟ್ಟಣದಾದ್ಯಂತ ಬ್ಯಾನರ್ಗಳನ್ನು ಹಾಕಲಾಗಿದ್ದು, ಬಹುತೇಕ ಬ್ಯಾನರ್ಗಳಲ್ಲಿ ಜೇಡ್ರಳ್ಳಿ ಕೃಷ್ಣಪ್ಪ ಅವರ ಚಿತ್ರಗಳು ರಾರಾಜಿಸುತ್ತಿವೆ. ಆದರೆ ನಿನ್ನೆ ಜೆಡಿಎಸ್ ಸೇರಿದ್ದ ಕೃಷ್ಣಪ್ಪ ಇಂದು ಉಲ್ಟಾ ಹೊಡೆದಿರುವುದು ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಅತೀವ ಗೊಂದಲ ಮೂಡಿಸಿದೆ.
ಇದಕ್ಕೆ ಸಂಬಂದಿಸಿದಂತೆ ಸ್ಪಷ್ಟನೆ ನೀಡಿರುವ ಜೆಡಿಎಸ್ ಅಭ್ಯರ್ಥಿ ಎ.ಮಂಜು, 'ನಮ್ಮೊಂದಿಗೆ ಮತ್ತು ನಮ್ಮ ಪಕ್ಷದ ವರಿಷ್ಠರೊಂದಿ ಇಗಾಗಲೇ ಹೆಚ್.ಎಂ.ಕೃಷ್ಣಮೂರ್ತಿರವರು ಮಾತುಕತೆ ನಡೆಸಿದ್ದಾರೆ. ನಾನು ಮತ್ತು ನನ್ನ ಬೆಂಬಲಿಗರು ಜೆಡಿಎಸ್ ಪಕ್ಷವನ್ನು ಬೆಂಬಲಿಸುತ್ತವೆ ಎಂದು ತಿಳಿಸಿದ್ದಾರೆ' ಎಂದು ಸ್ಪಷ್ಟನೆ ನೀಡಿದರು.