ಚನ್ನಪಟ್ಟಣ: ಬಿಜೆಪಿ ಸೈನಿಕನ ವೇಗಕ್ಕೆ ಬ್ರೇಕ್ ಹಾಕಲು ಜೆಡಿಎಸ್ ಯುವರಾಜನ ಎಂಟ್ರಿ
ರಾಮನಗರ, ಮಾರ್ಚ್ 25: ಬೊಂಬೆನಾಡು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಚುನಾವಣಾ ಪೂರ್ವ ರಾಜಕೀಯ ರಂಗೇರಿದ್ದು, ಕಳೆದ ಎರಡು ತಿಂಗಳಿನಿಂದ ಕ್ಷೇತ್ರದಲ್ಲೇ ಬಿಡು ಬಿಟ್ಟು ಪಕ್ಷ ಸಂಘಟನೆಗೆ ವೇಗವಾಗಿರುವ 'ಸೈನಿಕ' ಸಿ.ಪಿ. ಯೋಗೇಶ್ವರ್ ವೇಗಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ದಳ ಪಾಳಯ ಯುವರಾಜ ನಿಖಿಲ್ ಕುಮಾರಸ್ವಾಮಿಯನ್ನು ಕಣಕ್ಕಿಳಿಸಿದೆ.
Recommended Video
ವಿಧಾನಸಭಾ ಚುನಾವಣೆ ಇನ್ನೂ ಒಂದು ವರ್ಷ ಇರುವಂತೆಯೇ ಕ್ಷೇತ್ರದಲ್ಲಿ ಟಿಕಾಣಿ ಹೂಡಿರುವ ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್, ಜೆಡಿಎಸ್ ಭಿನ್ನಮತೀಯರನ್ನು ಪಕ್ಷಕ್ಕೆ ಸೆಳೆದು ಕ್ಷೇತ್ರದ ಶಾಸಕ ಹಾಗೂ ಮಾಜಿ ಮುಖ್ಯಂತ್ರಿ ಎಚ್.ಡಿ. ಕುಮಾರಸ್ವಾಮಿಗೆ ಠಕ್ಕರ್ ನೀಡಿದ್ದರು.
ಬಿಜೆಪಿ ಸರ್ಕಾರ ಭಾವನಾತ್ಮಕವಾಗಿ ಜನರ ದಾರಿ ತಪ್ಪಿಸುತ್ತಿದೆ: ಎಚ್.ಡಿ.ಕುಮಾರಸ್ವಾಮಿ
ಅಲ್ಲದೇ ಜೆಡಿಎಸ್ ಮುಖಂಡರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದ ವಿಧಾನ ಪರಿಷತ್ ಸದಸ್ಯ ಸಿಪಿವೈ, ಅವರಿಂದಲೇ ಮಾಜಿ ಸಿಎಂ ಎಚ್ಡಿಕೆ ವಿರುದ್ಧ ಹೇಳಿಕೆ ಕೊಡಿಸುವ ಮೂಲಕ ಜೆಡಿಎಸ್ಗೆ ಮುಜುಗರ ತರುವ ಜೊತೆಗೆ ಸ್ವತಃ ಯೋಗೇಶ್ವರ್ ಅವರು ಕುಮಾರಸ್ವಾಮಿ ವಿರುದ್ಧ ಏಕ ವಚನದಲ್ಲೇ ವಾಗ್ದಾಳಿ ನಡೆಸಿದ್ದರು.
ಸಿ.ಪಿ. ಯೋಗೇಶ್ವರ್ ಹೇಳಿಕೆಗೆ ಸಿಟ್ಟಾದ ಎಚ್.ಡಿ. ಕುಮಾರಸ್ವಾಮಿ ಪ್ರಾರಂಭದಲ್ಲಿ ಮೆಗಾಸಿಟಿ ಹಗರಣ ಸೇರಿದಂತೆ ಕೆಲ ಅಕ್ರಮಗಳ ಬಗ್ಗೆ ಗುಡುಗಿದರು. ನಂತರ ದಿನಗಳಲ್ಲಿ ಆತನ ವಿರುದ್ಧ ಮಾತನಾಡಿ ನಾನೇಕೆ ಅವರಿಗೆ ಪ್ರಚಾರ ನೀಡಬೇಕು, ಅವರು ಏನೂ ಬೇಕಾದರೂ ಮಾತನಾಡಲಿ ಅವರಿಗೆ ಜನರು ಉತ್ತರ ನೀಡುತ್ತಾರೆ ಎನ್ನುವ ಮೂಲಕ ಆರೋಪ ಪ್ರತ್ಯಾರೋಪಗಳಿಗೆ ಇತಿಶ್ರೀ ಹಾಡಿದ್ದರು.
ಇನ್ನು ಕ್ಷೇತ್ರದಲ್ಲಿ ಬಿರುಸಿನ ಸಂಚಾರ ಮಾಡುವ ಮೂಲಕ ಹವಾ ಕ್ರಿಯೇಟ್ ಮಾಡಲು ಮುಂದಾದ ಸಿಪಿವೈಗೆ ಠಕ್ಕರ್ ನೀಡಲು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮೂರು ದಿನಗಳ ಕ್ಷೇತ್ರ ಪ್ರವಾಸ ಹಮ್ಮಿಕೊಂಡಿದ್ದಾರೆ.
ಮೊದಲ ದಿನವಾದ ಇಂದು ಪುರಾಣ ಪ್ರಸಿದ್ಧ ಕೆಂಗಲ್ ಶ್ರೀ ಆಂಜನೇಯ ಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಯುವರಾಜನಿಗೆ ಅದ್ಧೂರಿ ಸ್ವಾಗತ ನೀಡಿ, ತೆರೆದ ವಾಹನದಲ್ಲಿ ನಿಖಿಲ್ ಕುಮಾರಸ್ವಾಮಿಯನ್ನು ಮೆರವಣಿಗೆ ಮಾಡಲಾಯಿತು. ನಂತರ ಬೃಹತ್ ಬೈಕ್ ಜಾಥಾ ಮೂಲಕ ಮೆರವಣಿಗೆ ನಡೆಸಿ ಬೊಂಬೆನಾಡಿಗೆ ನಿಖಿಲ್ ಆಗಮನದಿಂದ ಜೆಡಿಎಸ್ ಕಾರ್ಯಕರ್ತರಲ್ಲಿ ಹೊಸ ಹುರುಪು ಸಿಕ್ಕದಂತಾಯಿತು.
ಕೆಂಗಲ್ನಿಂದ ತಿಟ್ಟಮಾರನಹಳ್ಳಿ ಮೂಲಕ ಬೇವೂರಿನ ತನಕ ಸಾವಿರಾರು ಬೈಕ್ಗಳಲ್ಲಿ ಜಾಥಾ ನಡೆಸಿದ ಜೆಡಿಎಸ್ ಕಾರ್ಯಕರ್ತರ ಪಡೆ ನಿಖಿಲ್ ಕುಮಾರಸ್ವಾಮಿ ಪರ ಘೋಷಣೆಗಳನ್ನು ಕೂಗಿದರು. ಅಲ್ಲದೇ ಎಚ್. ಮೊಗೇನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಜೆಸಿಬಿ ಮೂಲಕ ನಿಖಿಲ್ ಕುಮಾರಸ್ವಾಮಿ ಮೇಲೆ ಪುಷ್ಪವೃಷ್ಟಿ ಸುರಿಸಿದ್ದು ವಿಶೇಷವಾಗಿತ್ತು .
ಕೆಂಗಲ್ನ ಆಂಜನೇಯ ಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಾಧ್ಯಮದ ಜೊತೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, "ಚನ್ನಪಟ್ಟಣದಲ್ಲಿ ಜೆಡಿಎಸ್ ಪಕ್ಷ ಸಧೃಡವಾಗಿದ್ದು, ಕಾರ್ಯಕರ್ತರು ಹಾಗೂ ಮುಖಂಡರಿಗೆ ಬಲ ತುಂಬುವ ಕೆಲಸವಾಗಬೇಕಿದೆ. ಅಲ್ಲದೇ ತಳಮಟ್ಟದಿಂದ ಪಕ್ಷವನ್ನು ಮತ್ತಷ್ಟು ಶಕ್ತಿ ನೀಡುವ ಸಲುವಾಗಿ ಚನ್ನಪಟ್ಟಣ ತಾಲೂಕಿಗೆ ಭೇಟಿ ನೀಡಿದ್ದೇನೆ. ಯಾರೋ ಕೆಲವರು ಪಕ್ಷ ತೊರೆದಿರಬಹುದು ಮುಂದೆ ಹಲವರು ಪಕ್ಷ ಸೇರ್ಪಡೆಗೊಳ್ಳಲಿದ್ದು, ನಮಗೆ ಯಾವುದೇ ಭಯವಿಲ್ಲ. ಕಾರ್ಯಕರ್ತರ ಪಡೆಯೇ ನಮ್ಮ ಶಕ್ತಿ," ಎಂದು ತಿಳಿಸಿದರು.
"ಚನ್ನಪಟ್ಟಣ ಮತ್ತು ರಾಮನಗರ ಕ್ಷೇತ್ರಗಳು ನಮ್ಮ ಎರಡು ಕಣ್ಣುಗಳು ಇದ್ದಂತೆ. ಈ ಎರಡು ತಾಲೂಕಿನ ಜನತೆ ತಮ್ಮ ಕುಟುಂಬದ ಮೇಲೆ ಇಟ್ಟಿರುವ ಪ್ರೀತಿ ವಿಶ್ವಾಸಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಇನ್ನು ಚನ್ನಪಟ್ಟಣ ಕ್ಷೇತ್ರದಲ್ಲೂ ತಾವು ಪ್ರವಾಸ ಮಾಡಲಿದ್ದು, ಪಕ್ಷವನ್ನು ಮತ್ತಷ್ಟು ಬಲಪಡಿಸೋಣ. ಅಲ್ಲದೇ ಮುಂಬರುವ ಜಿಲ್ಲಾ ಹಾಗೂ ತಾಲೂಕು ಪಂಚಾಯತಿ ಚುನಾವಣೆ ಇರಬಹುದು, 2023ರ ಸಾರ್ವತ್ರಿಕ ಚುನಾವಣೆಗೆ ಸಜ್ಜಾಗುವ ನಿಟ್ಟಿನಲ್ಲಿ ನಮ್ಮನ್ನು ತೊಡಗಿಸಿಕೊಳ್ಳೊಣ. ಮುಂದಿನ ದಿನಗಳಲ್ಲಿ ಪಕ್ಷ ಮತ್ತಷ್ಟು ಬಲಿಷ್ಠವಾಗಬೇಕಿದ್ದು, ಈ ನಿಟ್ಟಿನಲ್ಲಿ ನಾವು ಕಾರ್ಯೋನ್ಮುಖರಾಗಬೇಕೆಂದು," ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ಕಾರ್ಯಕರ್ತರನ್ನು ಹುರಿದುಂಬಿಸಿದರು.