ನಿಖಿಲ್ ಕುಮಾರಸ್ವಾಮಿ ಭಾಷಣಕ್ಕೆ ಅಡ್ಡಿ: ಅಸಲಿಗೆ ಅಲ್ಲಿ ನಡೆದಿದ್ದೇನು?
ರಾಮನಗರ, ಮಾರ್ಚ್ 26: ಜಿಲ್ಲಾ ವ್ಯಾಪ್ತಿಯ, ಕನಕಪುರ ತಾಲೂಕಿನ ಚೇಲೂರು ಗ್ರಾಮದಲ್ಲಿ ಮಾರ್ಚ್ 23ರಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿಯವರ ಭಾಷಣ ಮಾಡುತ್ತಿದ್ದ ವೇಳೆ ಕೆಲವರು ಅಡ್ಡಿಪಡಿಸಿದ ಘಟನೆ ನಡೆದಿತ್ತು. ಈ ವಿಚಾರ ಜೆಡಿಎಸ್ - ಕಾಂಗ್ರೆಸ್ ಬೆಂಬಲಿಗರ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.
ಈ ವಿಚಾರದ ಬಗ್ಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, "ನಿಖಿಲ್ ಕುಮಾರಸ್ವಾಮಿ ಇನ್ನೂ ಹುಡುಗ, ಅವರ ಮಾತಿಗೆಲ್ಲಾ ಪ್ರತಿಕ್ರಿಯೆ ನೀಡುವುದಕ್ಕೆ ಆಗುತ್ತಾ. ನಾನು ರಾಮನಗರ ಜಿಲ್ಲೆಗೆ ಏನು ಮಾಡಿದ್ದೇನೆ ಎನ್ನುವುದು ಜನರಿಗೆ ತಿಳಿದಿದೆ" ಎಂದು ಪ್ರತಿಕ್ರಿಯಿಸಿದ್ದರು.
ನಿಖಿಲ್ ಕುಮಾರಸ್ವಾಮಿ ಇನ್ನೂ ಹುಡುಗ, ನಾನ್ಯಾಕೆ ಪ್ರತಿಕ್ರಿಯೆ ನೀಡಲಿ: ಡಿಕೆಶಿ
ಅಸಲಿಗೆ ಅಲ್ಲಿ ನಡೆದಿದ್ದೇನು?: ಮರಳವಾಡಿ ಹೋಬಳಿಯ, ಚೇಲೂರು ಗ್ರಾಮದಲ್ಲಿ ಪೌರಾಣಿಕ ನಾಟಕವನ್ನು ಗ್ರಾಮಸ್ಥರು ಆಯೋಜಿಸಿದ್ದರು. ಆ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ನಿಖಿಲ್ ಆಗಮಿಸಿದ್ದರು.
ಬಸವೇಶ್ವರಸ್ವಾಮಿ ಮತ್ತು ಚಾಮುಂಡೇಶ್ವರಿ ಕೃಪಾ ಪೋಷಿತ ನಾಟಕ ಮಂಡಳಿಯ, ಕೌಂಢಲಿಕ ವಧೆ ಅಥವಾ ದ್ರೌಪದಿಯ ಸತ್ಯ ಪರೀಕ್ಷೆ ನಾಟಕಕ್ಕೆ ನಿಖಿಲ್ ಚಾಲನೆ ನೀಡಿದ್ದರು. ಆ ವೇಳೆ, ನಿಖಿಲ್ ಭಾಷಣ ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ನಿಖಿಲ್ ತಮ್ಮ ಭಾಷಣದ ವೇಳೆ ರಾಮನಗರ ಜಿಲ್ಲೆಗೆ ಗೌಡ್ರ ಕುಟುಂಬದ ಕೊಡುಗೆಯ ಬಗ್ಗೆ ವಿವರಿಸುತ್ತಿದ್ದರು. "2018ರ ಚುನಾವಣೆಯ ವೇಳೆ ಕುಮಾರಣ್ಣ ಅವರು ರೈತರ ಸಾಲಮನ್ನಾ ಮಾಡುವ ಬಗ್ಗೆ ಪ್ರಸ್ತಾವನೆ ಮಾಡುತ್ತಾರೆ. ಜನರು ನಿರೀಕ್ಷೆ ಇಟ್ಟುಕೊಂಡು ಕುಮಾರಣ್ಣನವರನ್ನು ಸಿಎಂ ಮಾಡುತ್ತಾರೆ"ಎಂದು ನಿಖಿಲ್ ತಮ್ಮ ಭಾಷಣದಲ್ಲಿ ಹೇಳುತ್ತಿದ್ದರು.
ಆಗ, ಕೆಲವರು ರಾಜಕೀಯ ಭಾಷಣ ಮಾಡಬೇಡಿ ಎಂದು ಅಡ್ಡಿ ಪಡಿಸುತ್ತಾರೆ. ಇದರಿಂದ ಸಿಟ್ಟಾದ ನಿಖಿಲ್, "ನೀವೇನೂ ಇಲ್ಲಿಗೆ ಬಂದು ಭಾಷಣ ಮಾಡಬೇಕಾಗಿಲ್ಲ. ನಾನು ಇಲ್ಲಿ ಸಂಬಂಧ ಬೆಳೆಸಲು ಬಂದಿರುವುದು. ತಾಕತ್ತಿದ್ದರೆ, ನೀವೇನು ಕಿತ್ತಾಗಿದ್ದೀರಾ ಹೇಳಿ. ನಮ್ಮ ಕುಟುಂಬ ಜಿಲ್ಲೆಯೊಂದಿಗೆ ಉತ್ತಮ ಸಂಬಂಧವನ್ನು ಇಟ್ಟುಕೊಂಡಿದೆ"ಎಂದು ತಿರುಗೇಟು ನೀಡುತ್ತಾರೆ.
"ಯುವ ರಕ್ತದ ಹುಡುಗ, ಸಿಟ್ಟಾಗಿದ್ದಕ್ಕೆ ಕ್ಷಮೆ ಕೋರುತ್ತೇನೆ"ಎಂದು ನಿಖಿಲ್ ಗ್ರಾಮಸ್ಥರ ಕ್ಷಮೆಯಾಚಿಸುತ್ತಾರೆ. ಭಾಷಣಕ್ಕೆ ಅಡ್ಡಿ ಪಡಿಸಿದ್ದು ಕಾಂಗ್ರೆಸ್ ಕಾರ್ಯಕರ್ತರು ಎಂದು ಜೆಡಿಎಸ್ ಅಭಿಮಾನಿಗಳು ನೇರವಾಗಿ ಆಪಾದಿಸಿದ್ದಾರೆ.
Recommended Video
ನಿಖಿಲ್ ಕುಮಾರಸ್ವಾಮಿ ಕೆಟ್ಟ ಪದಗಳನ್ನು ಬಳಸಿದ್ದಾರೆ, ಧಮ್ಕಿ ಹಾಕಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆಂದು ಜೆಡಿಎಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.