ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರ ಅಪ್ತ ಬಿಜೆಪಿ ತೆಕ್ಕೆಗೆ!
ರಾಮನಗರ, ಆಗಸ್ಟ್ 14: ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರ ಆಪ್ತ, ಕ್ಷೇತ್ರದ ಪ್ರಭಾವಿ ಮುಖಂಡ ಹಾಗೂ ಮಾಜಿ ಎಂಎಲ್ಸಿ ಮರಿಲಿಂಗೇಗೌಡ ಜೆಡಿಎಸ್ ತೊರೆದು ಕೇಂದ್ರ ಸಚಿವ ಡಾ. ಎಸ್. ಜೈಶಂಕರ್ ಸಮ್ಮಖದಲ್ಲಿ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾದರು.
ಕನಕಪುರ ತಾಲೂಕಿನ ಮರಳವಾಡಿಯ ಮರಿಲಿಂಗೇಗೌಡರ ನಿವಾಸಕ್ಕೆ ಭೇಟಿ ನೀಡಿದ್ದ ಕೇಂದ್ರ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಹಾಗೂ ರಾಜ್ಯ ಸರಕಾರದ ಉನ್ನತ ಶಿಕ್ಷಣ, ಐಟಿ-ಬಿಟಿ ವಿಜ್ಣಾನ ಮತ್ತು ತಂತ್ರಜ್ಞಾನ ಕೌಶಲ್ಯಾಭಿವೃಧ್ಧಿ ಜೀವನೋಪಾಯ ಸಚಿವ ಡಾ. ಸಿ. ಎನ್ ಅಶ್ವಥ ನಾರಾಯಣ್, ಮರಿಲಿಂಗೇಗೌಡ ಅವರನ್ನು ಆತ್ಮೀಯವಾಗಿ ಪಕ್ಷಕ್ಕೆ ಬರಮಾಡಿಕೊಂಡರು.
ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ತೀರ್ಮಾನ ಏನಿರಬಹುದು?
ಮರಿಲಿಂಗೇಗೌಡ ಮೂರು ವರ್ಷಗಳಿಂದ ಜೆಡಿಎಸ್ ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದೇ ದೂರವೇ ಉಳಿದಿದ್ದರು. ಇತ್ತೀಚೆಗೆ ಅವರ ಮಗ ಗೌತಮ್ ಗೌಡ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು ಹಾಗೂ ರೇಷ್ಮೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಇದೀಗ ಮರಿಲೀಂಗೇಗೌಡ ತಮ್ಮ ಪುತ್ರ ಗೌತಮ್ ಗೌಡ ಹಾದಿ ತುಳಿದ್ದಿದ್ದಾರೆ.
ಜೆಡಿಎಸ್ನಲ್ಲಿ ಕುಟುಂಬ ರಾಜಕಾರಣ
ಜೆಡಿಎಸ್ ಪಕ್ಷ ತೊರೆದು ಬಿಜೆಪಿ ಸೇರ್ಪಡೆಗೊಂಡು ಬಳಿಕ ಮಾತನಾಡಿದ ಮರಿಲಿಂಗೇಗೌಡ, ಕಳೆದ 18 ವರ್ಷದಿಂದಲೂ ಜೆಡಿಎಸ್ ಪಕ್ಷ ಸಂಘಟನೆಗಾಗಿ ಹಗಲು ರಾತ್ರಿ ಎನ್ನದೇ ದುಡಿಮೆ ಮಾಡಿದ್ದೇನೆ. ಕುಮಾರಸ್ವಾಮಿಯವರು 2 ಬಾರಿ ಮುಖ್ಯಮಂತ್ರಿಯಾದರು. ಆದರೆ ರಾಜ್ಯದ ಯಾವುದೇ ಕಾರ್ಯಕರ್ತನಿಗೆ ಒಂದು ಹುದ್ದೆಯನ್ನು ನೀಡುವ ಮನಸ್ಸು ಮಾಡಲಿಲ್ಲ ಎಂದು ಆರೋಪಿಸಿದರು.
ಪಕ್ಷವನ್ನು ಮುನ್ನಡೆಸುವ ಸಾಮರ್ಥ್ಯ ಇರುವ ವ್ಯಕ್ತಿಗಳು, ಹಿರಿಯರು, ಹಾಗೂ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ವಿಧಾನ ಪರಿಷತ್ಗೆ ಕಳುಹಿಸಬೇಕು. ಆದರೆ ಆ ಕೆಲಸವನ್ನು ಪಕ್ಷದ ವರಿಷ್ಠರು ಮಾಡಲಿಲ್ಲ. ಜೆಡಿಎಸ್ ಕುಟುಂಬ ರಾಜಕಾರಣಕ್ಕೆ ಬೇಸತ್ತು ಕಳೆದ ಮೂರು ವರ್ಷದಿಂದ ರಾಜಕೀಯವಾಗಿ ತಟಸ್ಥವಾಗಿದ್ದೆ ಎಂದರು.
ಚುನಾವಣೆ ಹತ್ತಿರವಾಗುತ್ತಿದ್ದಂತೆ ವೇಗ ಪಡೆದ ರಾಜಕೀಯ ಚಟುವಟಿಕೆಗಳು
ಕಾರ್ಯಕರ್ತರನ್ನು ಬೆಳೆಸುತ್ತಿಲ್ಲ
18 ವರ್ಷಗಳ ಕಾಲ ಜೆಡಿಎಸ್ ಪಕ್ಷಕ್ಕಾಗಿ ದುಡಿದ ನನ್ನಂತಹ ಸಾವಿರಾರು ಕಾರ್ಯಕರ್ತರಿದ್ದಾರೆ. ಆದರೆ ಅಂತಹ ಕಾರ್ಯಕರ್ತರಿಗೆ ಸಣ್ಣಪುಟ್ಟ ಅಧಿಕಾರಗಳನ್ನು ನೀಡಿ ಅವರಿಗೆ ಆತ್ಮಸ್ಥೆರ್ಯ ತುಂಬುವ ಕೆಲಸವನ್ನು ಜೆಡಿಎಸ್ ನಾಯಕರು ಮಾಡಲಿಲ್ಲ. ಜಿಲ್ಲೆಯಲ್ಲಿ ಡಿ. ಕೆ. ಶಿವಕುಮಾರ್, ಸಂಸದ ಡಿ. ಕೆ. ಸುರೇಶ್ ಸೇರಿದಂತೆ ಪ್ರಭಾವಿ ರಾಜಕಾರಣಿಗಳಿದ್ದಾರೆ. ಅಲ್ಲದೇ ನಾಲ್ವರು ಮುಖ್ಯಮಂತ್ರಿಗಳನ್ನು ನೀಡಿದ ಜಿಲ್ಲೆಯಲ್ಲಿ ಯಾವೊಬ್ಬ ಕಾರ್ಯಕರ್ತನನ್ನು ಬೆಳೆಸದ ಕಾರಣ ಮನನೊಂದು ಜೆಡಿಎಸ್ ಪಕ್ಷವನ್ನು ತೊರೆದಿರುವುದಾಗಿ ಮಾಜಿ ವಿಧಾನ ಪರಿಷತ್ ಸದಸ್ಯ ಮರಿಲಿಂಗೇಗೌಡ ತಿಳಿಸಿದರು.
ದೇಶದ ಅಸ್ಮಿತೆ, ಅಸ್ತಿತ್ವ ಉಳಿಸಲು ಮೋದಿ ಹೋರಾಟ
ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಯಾದ ಮಾಜಿ ವಿಧಾನ ಪರಿಷತ್ ಸದಸ್ಯ ಮರಿಲಿಂಗೇಗೌದ, ದೇಶದ ಪ್ರಧಾನಿ ನರೇಂದ್ರ ಮೋದಿಯವರ ಗುಣಗಾನ ಮಾಡಿದರು. ದೇಶದ ಅಸ್ಮಿತೆ, ಅಸ್ತಿತ್ವ ಉಳಿಸಲು ಪ್ರಧಾನಿ ನರೇಂದ್ರ ಮೋದಿ ಹೋರಾಡುತ್ತಿದ್ದಾರೆ. ಮೋದಿ ಹೋರಾಟಕ್ಕೆ ಕೈಜೋಡಿಸುವ ನಿಟ್ಟಿನಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದೇನೆ ಎಂದು ಮರಿಲಿಂಗೇಗೌಡ ತಳಿಸಿದರು.
ಬಿಜೆಪಿಯಲ್ಲಿ ಕಾರ್ಯಕರ್ತರಿಗೆ ಮನ್ನಣೆ
ನನ್ನ ಪುತ್ರ ಗೌತಮ್ ಮರಿಲಿಂಗೇಗೌಡ ಬಿಜೆಪಿ ಸೇರಿದ 3 ತಿಂಗಳುಗಳ ಅಲ್ಪಾವಧಿಯಲ್ಲೇ ಅವರ ಪಕ್ಷ ಸಂಘಟನೆಯ ಕಾರ್ಯ ನೋಡಿ, ಬಿಜೆಪಿ ಪಕ್ಷದ ವರಿಷ್ಠರು ರೇಷ್ಮೆ ನಿಗಮದ ಅಧ್ಯಕ್ಷರನ್ನಾಗಿ ನೇಮಕಮಾಡುವ ಮೂಲಕ ಪಕ್ಷಗಾಗಿ ದುಡಿದವರನ್ನು ಗುರುತಿಸುವ ಗಣಕ್ಕೆ ಸಾಕ್ಷಿಯಾಗಿದೆ.
ನಮ್ಮ ಜೊತೆ ಜೆಡಿಎಸ್ ನಿಷ್ಟಾವಂತ ಕಾರ್ಯಕರ್ತರುಗಳಾದ ಗೋದೂರು ಶಿವಣ್ಣ, ಮರಿಯಪ್ಪ, ಮಲ್ಲಪ್ಪ, ಪೋಲೀಸ್ ಮುನಿಯಪ್ಪ ಸೇರಿದಂತೆ ಇನ್ನಿತರರು ಜೆಡಿಎಸ್ ತೊರೆದು ಬಿಜೆಪಿ ಪಕ್ಷ ಸೇರ್ಪಡೆಗೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಬಿಜೆಪಿ ಪಕ್ಷವನ್ನು ಉತ್ತಮ ರೀತಿಯಲ್ಲಿ ಸಂಘಟಿಸಲು ಶ್ರಮಿಸುವುದಾಗಿ ಮಾಜಿ ವಿಧಾನ ಪರಿಷತ್ ಸದಸ್ಯ ಮರಿಲಿಂಗೇಗೌಡ ತಿಳಿಸಿದರು.