ಮಾಜಿ ಸಿಎಂ ಎಚ್ಡಿಕೆ ಆಪ್ತ ಬಿಜೆಪಿಗೆ, ಚನ್ನಪಟ್ಟಣದಲ್ಲಿ ಪಕ್ಷಾಂತರ ಪರ್ವ ಪ್ರಾರಂಭ
ರಾಮನಗರ, ಫೆಬ್ರವರಿ 19: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರ ಕರ್ಮಭೂಮಿಯಾದ ರಾಮನಗರ ಜಿಲ್ಲೆಯಲ್ಲಿ ಪಕ್ಷಾಂತರ ಪರ್ವ ಪ್ರಾರಂಭವಾಗುವ ಲಕ್ಷಣಗಳು ಗೋಚರಿಸುತ್ತಿವೆ, ಮಾಜಿ ಸಿಎಂ ಎಚ್ಡಿಕೆಯವರ ಕಿಚನ್ ಕ್ಯಾಬಿನೆಟ್ ಸದಸ್ಯ ಎಂದೇ ಬಿಂಬಿತನಾಗಿದ್ದ ಜೆಡಿಎಸ್ ಮುಖಂಡ ಬಿಜೆಪಿಯತ್ತ ಮುಖ ಮಾಡಿದ್ದಾರೆ.
ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಯವರ ಸ್ವಕ್ಷೇತ್ರ ಚನ್ನಪಟ್ಟಣದ ಮಾಜಿ ಬಮೂಲ್ ನಿರ್ದೇಶಕ ಲಿಂಗೇಶ್ ಕುಮಾರ್ ಜೆಡಿಎಸ್ ಪಕ್ಷ ತೊರೆದು ಬಿಜೆಪಿ ಸೇರಲಿದ್ದಾರೆ. ಈ ಬಗ್ಗೆ ಚನ್ನಪಟ್ಟಣದ ಖಾಸಗಿ ಹೋಟೆಲ್ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಲಿಂಗೇಶ್ ಕುಮಾರ್ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಬೆಂಗಳೂರು ಜೆಡಿಎಸ್ ಮುಖಂಡರಿಗೆ ಮಹತ್ವದ ಸಂದೇಶ ರವಾನಿಸಿದ ಎಚ್ಡಿಕೆ
ಕಳೆದ 50 ವರ್ಷಗಳಿಂದ ನಮ್ಮ ಕುಟುಂಬ ಜೆಡಿಎಸ್ ಪಕ್ಷದೊಂದಿಗೆ ಗುರುತಿಸಿಕೊಂಡಿತ್ತು. ನಮ್ಮ ತಾತನ ನಂತರ ನಮ್ಮ ಅಪ್ಪ ಹಾಗೂ ಪ್ರಸ್ತುತ ನಾನು ಜೆಡಿಎಸ್ ಪಕ್ಷದ ನಿಷ್ಟಾವಂತ ಕಾರ್ಯಕರ್ತರಾಗಿ ದುಡಿದಿದ್ದೇವೆ. ಇತ್ತೀಚೆಗೆ ಕೆಲ ಬೆಳವಣಿಗೆಗಳಿಂದ ಮನಸ್ಸಿಗೆ ನೋವಾಗಿದೆ ಹಾಗಾಗಿ ಪಕ್ಷ ತೊರೆಯುತ್ತಿದ್ದೇನೆ ಎಂದು ಮಾಜಿ ಬಮೂಲ್ ನಿರ್ದೇಶಕ ಲಿಂಗೇಶ್ ಕುಮಾರ್ ತಿಳಿಸಿದರು.
ಚನ್ನಪಟ್ಟಣ ಕ್ಷೇತ್ರದಲ್ಲಿ ಕುಮಾರಸ್ವಾಮಿಯವರು ಬೆಂಗಳೂರಿನಿಂದ ಬಂದ ಕೆಲವರಿಗೆ ಮಣೆ ಹಾಕುತ್ತಿದ್ದಾರೆ. ಇದರಿಂದಾಗಿ ಹಲವು ವರ್ಷಗಳಿಂದ ಪಕ್ಷದ ಪರ ಕೆಲಸ ಮಾಡಿದ್ದ ನಮ್ಮನ್ನು ಕಡೆಗಣನೆ ಮಾಡುತ್ತಿದ್ದಾರೆ. ಹಾಗಾಗಿ ಪಕ್ಷಾಂತರ ಅನಿವಾರ್ಯ ಎಂದು ಪಕ್ಷ ತೊರೆದ ಮುಖಂಡರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಕುಮಾರಸ್ವಾಮಿ ಆ ಹೇಳಿಕೆ ಸಿ. ಪಿ. ಯೋಗೇಶ್ವರ್ಗೆ ಲಾಭವಾಗುತ್ತಾ?
ಇದು ಆರಂಭ ಅಷ್ಟೇ, ಇನ್ನೂ ಮುಂದಿನ ದಿನಗಳಲ್ಲಿ ತಾಲೂಕಿನ ಸಾಕಷ್ಟು ಜೆಡಿಎಸ್ ಮುಖಂಡರು ಪಕ್ಷ ತೊರೆದು ಬಿಜೆಪಿ ಸೇರುತ್ತಾರೆ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಮಣಿಸಿ ಬಿಜೆಪಿ ಪಕ್ಷವನ್ನು ಗೆಲ್ಲಿಸುವ ನಿಟ್ಟಿನಲ್ಲಿ ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಕೈ ಬಲ ಪಡಿಸುತ್ತೇವೆ ಎಂದರು.
ಜೆಡಿಎಸ್ ತೊರೆದು ಬಿಜೆಪಿ ಸೇರಲು ಮುಂದಾಗಿರುವ ಮಾಜಿ ಬಮೂಲ್ ನಿರ್ದೇಶಕ ಲಿಂಗೇಶ್ ಕುಮಾರ್ ಮೂರು ಬಾರಿ ಬಮೂಲ್ ನಿರ್ದೇಶಕ ಸ್ಥಾನಕ್ಕೆ ಆಯ್ಕೆಯಾಗಿದ್ದರು. ನಂತರದಲ್ಲಿ ಸ್ವಪಕ್ಷೀಯರಿಂದಲೇ ಬಮೂಲ್ ನಿರ್ದೇಶಕ ಸ್ಥಾನ ಕಳೆದುಕೊಂಡ ಲಿಂಗೇಶ್ ಕುಮಾರ್ ಅವರಿಗೆ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಅವರು ರಾಜ್ಯ ಸರ್ಕಾರದಿಂದ ಬಮೂಲ್ಗೆ ನಾಮ ನಿರ್ದೇಶನ ಮಾಡಿಸುವ ಭರವಸೆ ನೀಡಿದ್ದಾರೆ ಎನ್ನಲಾಗುತ್ತಿದೆ.
Recommended Video