ಸಿಪಿ ಯೋಗೇಶ್ವರ್ ಕಾರಿನ ಮೇಲೆ ಮೊಟ್ಟೆ ಎಸೆದ ಜೆಡಿಎಸ್ ಕಾರ್ಯಕರ್ತರು
ರಾಮನಗರ, ಅಕ್ಟೋಬರ್ 1: ಚನ್ನಪಟ್ಟಣ ಶಾಸಕರಾಗಿರುವ ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿಗೆ ಆಹ್ವಾನ ನೀಡದೆ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ ಎಂಬ ಕಾರಣಕ್ಕೆ ಜೆಡಿಎಸ್ ಬೆಂಬಲಿಗರು ಸಿಪಿ ಯೋಗೇಶ್ವರ್ ಕಾರಿಗೆ ಮೊಟ್ಟೆ ಹಾಗೂ ಕಲ್ಲಿನಿಂದ ದಾಳಿ ಮಾಡಿದ ಘಟನೆ ಶನಿವಾರ ನಡೆದಿದೆ.
ಚನ್ನಪಟ್ಟಣದ ರಾಂಪುರದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರ ಸಚಿವ ಅಶ್ವಥ್ ನಾರಾಯಣ ಶಂಕು ಸ್ಥಾಪನೆ ನೆರವೇರಿಸಬೇಕಿತ್ತು. ಅವರು ಗೈರಾದ ಹಿನ್ನಲೆಯಲ್ಲಿ ಸಿಪಿವೈ ಚಾಲನೆ ನೀಡಿದ್ದರು. ಈ ವೇಳೆ ಸ್ಥಳಕ್ಕಾಗಮಿಸಿದ 500ಕ್ಕೂ ಹೆಚ್ಚು ಜೆಡಿಎಸ್ ಕಾರ್ಯಕರ್ತರು ಸಿಪಿವೈ ಕಾರಿಗೆ ಮುತ್ತಿಗೆ ಹಾಕಿ ಕಲ್ಲು ಮತ್ತು ಮೊಟ್ಟೆಯನ್ನು ಎಸೆದಿದ್ದಾರೆ. ಮೊಟ್ಟೆ, ಕಲ್ಲು ಎಸೆದ ಜೆಡಿಎಸ್ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಕಲ್ಲು ತೂರಾಟದ ವೇಳೆ ಪೊಲೀಸರಿಗೆ ಸಣ್ಣ ಗಾಯಗಳಾಗಿವೆ.
ಜೆಡಿಎಸ್ ಕಾರ್ಯಕರ್ತರು ಯೋಗೇಶ್ವರ್, ಅಶ್ವತ್ಥ್ ನಾರಾಯಣ ದಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದ್ದಾರೆ. ಈ ವೇಳೆ ಕೆಲ ಜೆಡಿಎಸ್ ಕಾರ್ಯಕರ್ತರನ್ನ ಪೊಲೀಸರು ವಶಕ್ಕೆ ಪಡೆದರು. ಇನ್ನು ತಮ್ಮನ್ನು ಕಡೆಗಣಿಸಿರುವ ಬಗ್ಗೆ ಹೆಚ್ಡಿ ಕುಮಾರಸ್ವಾಮಿಗೆ ಸಿಎಂ ಬಸವರಾಜ ಬೊಮ್ಮಾಯಿ ಬಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಕುಮಾರಸ್ವಾಮಿ ಹತಾಷರಾಗಿದ್ದಾರೆ
ಘಟನೆ ನಂತರ ತಮ್ಮ ಚನ್ನಪಟ್ಟಣದ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಪಿ ಯೋಗೆಶ್ವರ್ , "ಇವತ್ತು ನಡೆದಂತಹ ಘಟನೆಗಳನ್ನು ನೋಡಿದರೆ, ಕುಮಾರಸ್ವಾಮಿ ಹತಾಶರಾದ ರೀತಿ ಕಾಣುತ್ತಿದೆ. ತಾಲ್ಲೂಕಿನ ಅಭಿವೃದ್ಧಿ ಕೆಲಸದ ವಿಚಾರದಲ್ಲಿ ಕುಮಾರಸ್ವಾಮಿ ಇಷ್ಟೆಲ್ಲಾ ತಲೆಕೆಡಿಸಿಕೊಳ್ಳಿತ್ತಿರಲಿಲ್ಲ. ಜೆಡಿಎಸ್ ನ ಮುಖಂಡರು ಪಕ್ಷ ಬಿಟ್ಟು ಹೊರ ಬರುತ್ತಿರುವುದರಿಂದ ಕುಮಾರಸ್ವಾಮಿ ಅವರಿಗೆ ಮರ್ಮಾಘಾತವಾಗಿದೆ, ತಂಡೋಪ ತಂಡವಾಗಿ ಜೆಡಿಎಸ್ ನಿಂದ ಹೊರಗಡೆ ಬರುತ್ತಿರುವುದರಿಂದ ಹತಾಶರಾಗಿದ್ದಾರೆ" ಎಂದು ಹೇಳಿದರು.
ಕುಮಾರಸ್ವಾಮಿ ಜೈಡಿಎಸ್ ಕಾರ್ಯಕರ್ತರು ಪಕ್ಷ ಬಿಡುತ್ತಿರುವುದನ್ನು ಮರೆಮಾಚಲು ಬೇರೆ ಬೇರೆ ತಾಲ್ಲೂಕಿನ ಜೆಡಿಎಸ್ನ ಗುಂಡಾಗಳನ್ನು ಕರೆಸಿ ದಾಂಧಲೆ ಮಾಡಿದ್ದಾರೆ. ಬೆಂಗಳೂರಿನ ನರಸಿಂಹಮೂರ್ತಿ ಎಂಬಾತ ನಾಲ್ಕೈದು ಗೂಂಡಾಗಳನ್ನು ಕರೆಸಿ ಕಲ್ಲು ಎಸೆಸೆದ್ದಾರೆ. ಇದು ಕುಮಾರಸ್ವಾಮಿ ಅವರಿಗೆ ಶೋಭೆ ತರುವುದಿಲ್ಲ ಎಂದರು.
ಇಂದಿನ ಘಟನೆಗೆ ಎಚ್ಡಿಕೆ ಪ್ರಚೋದನೆ ಕಾರಣ
ಕಳೆದ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರಿಗೆ ಇಲ್ಲಿನ ಜನರು ಬೆಂಬಲ ಕೊಟ್ಟಿದ್ದರು. ಆದರೆ ಇಲ್ಲಿನ ರೈತರು ತಾಲ್ಲೂಕಿನಲ್ಲಿ ಹಲವು ಸಮಸ್ಯೆಗಳಿದ್ದು, ಅವುಗಳನ್ನು ನನ್ನ ಬಳಿ ಹೇಳಿಕೊಂಡಿದ್ದಾರೆ. ತಾಲ್ಲೂಕಿನ ಅಭಿವೃದ್ಧಿ ದೃಷ್ಟಿಯಿಂದ ನಾನು ಸಿಎಂ ಬಳಿ ಮನವಿ ಮಾಡಿ ಅನುದಾನ ತಂದಿದ್ದೇನೆ, ಆ ಕಾರಣದಿಂದ ಹತಾಷರಾಗಿ ಕುಮಾರಸ್ವಾಮಿ ಇಷ್ಟೆಲ್ಲಾ ಮಾಡಿಸಿದ್ದಾರೆ. ಜನರ ದೃಷ್ಟಿಯನ್ನು ಬೇರೆಡೆ ಸೆಳೆಯಲು ಈ ರೀತಿ ಮಾಡಿದ್ದಾರೆ.
ಕುಮಾರಸ್ವಾಮಿ ಶಾಸಕರಾದ ಮೇಲೆ ಯಾವತ್ತು ಶಿಷ್ಟಾಚಾರ ಪಾಲಿಸಿದ್ದಾರೆ. ಅವರು ಇಲ್ಲಿ ಯಾವುದೇ ನಾಡಹಬ್ಬಗಳಿಗೂ ಭಾಗವಹಿಸಲಿಲ್ಲ. ತಾಲ್ಲೂಕಿನಲ್ಲಿ ಜೆಡಿಎಸ್ ದಿನೇ ದಿನೇ ವೀಕ್ ಆಗುತ್ತಿದೆ. ಅವರಿಗೆ ನಾಲ್ಕೈದು ಛೇಲಾಗಳನ್ನು ಬಿಟ್ಟರೆ ಬೇರೆ ಯಾರು ಇಲ್ಲ, ಇವತ್ತಿನ ಘಟನೆಗೆ ಕುಮಾರಸ್ವಾಮಿ ಅವರ ಪ್ರಚೋದನೆಯೇ ಕಾರಣ. ಗೂಂಡಾ ಸಂಸ್ಕೃತಿಗೆ ಕುಮಾರಸ್ವಾಮಿ ಅವರು ಮುನ್ನುಡಿ ಬರೆದಿದ್ದಾರೆ. ತಾಲ್ಲೂಕಿನ ಜನರು ಕುಮಾರಸ್ವಾಮಿ ಅವರ ವಿರುದ್ದ ಸಿಟ್ಟಿಗೆದ್ದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.