ಮಾಗಡಿಯ ಶ್ರೀ ರಂಗನಾಥನ ಹುಂಡಿಯಲ್ಲಿ ಅಮಾನ್ಯಗೊಂಡ ನೋಟುಗಳನ್ನು ಹಾಕಿದ್ದೇಕೆ?
ರಾಮನಗರ, ನವೆಂಬರ್.16:ಮಾಗಡಿಯ ಶ್ರೀ ರಂಗನಾಥನ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗಿದ್ದು, ಕಾಣಿಕೆ ಹುಂಡಿಗೆ 6 ಚಿನ್ನದ ಉಂಗುರ, ತಾಳಿ, ಬಳೆ, ಬೆಳ್ಳಿ ತೊಟ್ಟಿಲು, ವಿದೇಶಿ ನೋಟುಗಳಲ್ಲದೆ, ಸ್ವದೇಶಿಯ ಅಮಾನ್ಯಗೊಂಡ ನೋಟುಗಳು ಕೂಡ ಬಿದ್ದಿರುವುದು ಅಚ್ಚರಿಗೆ ಕಾರಣವಾಗಿದೆ.
ಇತ್ತೀಚೆಗೆ ದೇವಸ್ಥಾನಗಳ ಕಾಣಿಕೆ ಹುಂಡಿಗಳಿಗೆ ಅಮಾನ್ಯಗೊಂಡ 500 ಮತ್ತು 1000 ಮುಖಬೆಲೆಯ ನೋಟುಗಳನ್ನು ಭಕ್ತರು ಹಾಕುತ್ತಿದ್ದಾರೆ. ಹಳೆಯ ನೋಟುಗಳಿಗೆ ಯಾವುದೇ ರೀತಿಯ ಮಾನ್ಯತೆಯಿಲ್ಲ ಅದು ರದ್ದಿಗೆ ಸಮ ಎಂಬುದು ಗೊತ್ತಿದ್ದರೂ ದೇವರ ಕಾಣಿಕೆ ಡಬ್ಬಗಳಿಗೆ ಹಾಕುತ್ತಿರುವುದೇಕೆ ಎಂಬುದು ಎಲ್ಲರನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ.
ಹಣದ ಬಗ್ಗೆ ಭಾವನಾತ್ಮಕ ಮತ್ತು ಅದನ್ನು ಲಕ್ಷ್ಮಿ ಎಂದು ನಂಬುವ ಕಾರಣ ಮತ್ತು ನೋಟು ಅಮಾನ್ಯಗೊಂಡ ಸಂದರ್ಭ ಕೈಗೆ ಸಿಗದೆ ಹೋದ ನೋಟುಗಳು ಈಗ ಸಿಗುತ್ತಿದ್ದು ಅವುಗಳನ್ನು ಎಸೆಯಲು ಮನಸ್ಸು ಬರದೆ ದೇವರ ಹುಂಡಿಗೆ ಹಾಕಿ ಹೋಗುತ್ತಿರಬಹುದೇನೋ?.
ಅಪನಗದೀಕರಣಕ್ಕೆ ಎರಡು ವರ್ಷ ಮೋದಿ ವಿರುದ್ಧ ದೇಶಾದ್ಯಂತ ಕಾಂಗ್ರೆಸ್ ಪ್ರತಿಭಟನೆ
ಇನ್ನು ವಿದೇಶಗಳಿಂದ ಬರುವ ಪ್ರವಾಸಿಗರು ದೇವಸ್ಥಾನಕ್ಕೆ ತೆರಳುವ ವೇಳೆ ಭಕ್ತರು ಕಾಣಿಕೆಗಳನ್ನು ಹಾಕುವುದನ್ನು ಗಮನಿಸಿ ಅದರಂತೆ ತಾವು ಕೂಡ ಹಾಕಿ ಹೋಗುತ್ತಾರೆ. ಇನ್ನು ಹರಕೆ ಹೊತ್ತವರು ಅದನ್ನು ತೀರಿಸುವ ಸಲುವಾಗಿ ಚಿನ್ನಾಭರಣವನ್ನು ಹಾಕಿ ಹೋಗುತ್ತಿದ್ದಾರೆ.
ಬೆಳ್ಳಿಯ ವಸ್ತುಗಳು ದೊರೆತಿವೆ
ಈ ಬಾರಿ ಮಾಗಡಿಯ ಶ್ರೀರಂಗನಾಥಸ್ವಾಮಿಗೆ 27 ಲಕ್ಷದ 86 ಸಾವಿರದ 790ರೂ. ಕಾಣಿಕೆ ಬಿದ್ದಿದೆ. ಇದಲ್ಲದೆ, ವಿದೇಶಿ ನೋಟುಗಳು, ವಜ್ರದ ಹರಳು, 5 ರಿಂದ 6 ಚಿನ್ನದ ಉಂಗುರ, ತಾಳಿ, ಬಳೆ, ಬೆಳ್ಳಿ ತೊಟ್ಟಿಲು ಸೇರಿದಂತೆ ಬೆಳ್ಳಿಯ ವಸ್ತುಗಳು ದೊರೆತಿವೆ.
ದೇವಸ್ಥಾನದ ಹುಂಡಿಗೇಕೆ ಹಾಕಿದರು?
ಇಲ್ಲಿ ಅಮಾನ್ಯಗೊಂಡ 500 ಮತ್ತು 1000 ರೂ.ನ ನೋಟುಗಳ ಪೈಕಿ 85 ಸಾವಿರ ರೂ.ನ ಕಂತೆಯಲ್ಲಿ1 ಸಾವಿರ ಮುಖಬೆಲೆಯ ಗರಿ ಗರಿ ನೋಟುಗಳನ್ನು ಹಾಕಲಾಗಿರುವುದು ಅಚ್ಚರಿಗೆ ಕಾರಣವಾಗಿದೆ. ಅಮಾನ್ಯಕರಣವಾಗಿ 2 ವರ್ಷಗಳಾದ ಮೇಲೂ ಈ ನೋಟುಗಳನ್ನು ಏಕೆ ಇಟ್ಟುಕೊಂಡಿದ್ದರು ಮತ್ತು ದೇವಸ್ಥಾನದ ಹುಂಡಿಗೇಕೆ ಹಾಕಿದರು ಎಂಬುದು ಸಂಶಯಕ್ಕೆಡೆ ಮಾಡಿಕೊಟ್ಟಿದೆ.
ಅಪನಗದೀಕರಣದ ಆಘಾತಕ್ಕೆ ಮೊದಲ ವಾರ್ಷಿಕೋತ್ಸವ: ಗೆಲುವೋ, ಸೋಲೋ?!
ಶ್ರೀಮಂತ ದೇವಸ್ಥಾನವಾಗಿದೆ
ಇನ್ನು ವಿದೇಶಿ ನೋಟುಗಳ ಪೈಕಿ ಯುಕೆ, ನೇಪಾಳ, ಅಮೆರಿಕಾ, ಲಂಡನ್, ಅರಬ್, ಜಪಾನ್, ಹಾಕಾಂಗ್ ನೋಟ್ ಗಳಾದ ಪೌಂಡ್, ಡಾಲರ್, ದಿನಾಮು ಮೊದಲಾದವು ಕಾಣಿಕೆ ಹುಂಡಿಯಲ್ಲಿ ಸಿಕ್ಕಿವೆ. ರಾಮನಗರ ಜಿಲ್ಲೆಯಲ್ಲಿಯೇ ಮಾಗಡಿಯ ರಂಗನಾಥಸ್ವಾಮಿ ದೇವಸ್ಥಾನವು ಎ ಗ್ರೇಡ್ ಪಟ್ಟಿಯಲ್ಲಿ ಸೇರಿದ್ದು ಶ್ರೀಮಂತ ದೇವಸ್ಥಾನವಾಗಿದೆ.
ಹೊರರಾಜ್ಯಗಳಿಂದಲೂ ಬರುತ್ತಾರೆ ಭಕ್ತರು
ತಿರುಪತಿಗೆ ಹೋಗಲಾಗದವರು ಮಾಗಡಿ ಶ್ರೀ ರಂಗನಾಥಸ್ವಾಮಿಯ ದರ್ಶನ ಪಡೆದರೆ ತಿರುಪತಿ ಶ್ರೀನಿವಾಸ ಸ್ವಾಮಿಯ ದರ್ಶನ ಪಡೆದಷ್ಟೆ ಪುಣ್ಯ ಬರುತ್ತದೆಂಬುದು ಭಕ್ತರ ನಂಬಿಕೆಯಾಗಿದೆ. ಹೀಗಾಗಿ ರಾಜ್ಯ ಮಾತ್ರವಲ್ಲದೆ ಹೊರರಾಜ್ಯಗಳಿಂದಲೂ ಭಕ್ತರು ಇಲ್ಲಿಗೆ ಬರುವುದನ್ನು ಕಾಣಬಹುದಾಗಿದೆ.