ಬಿಡದಿ ಕೆರೆ ಸೇರಿದ ಕಾರ್ಖಾನೆ ತ್ಯಾಜ್ಯ; 2 ಟನ್ ಮೀನುಗಳು ಸಾವು
ರಾಮನಗರ, ಜೂನ್ 13: ಬಿಡದಿ ಕೈಗಾರಿಕಾ ವಲಯದ ಪ್ರತಿಷ್ಠಿತ ಕಾರ್ಖಾನೆಗಳು ವಿಷ ಪೂರಿತ ತ್ಯಾಜ್ಯ ನೀರನ್ನು ಸಂಸ್ಕರಿಸದೆ ನೇರವಾಗಿ ಹಳ್ಳಕ್ಕೆ ಹರಿ ಬಿಡುತ್ತಿವೆ. ಹಳ್ಳ ಸೇರಿದ ತ್ಯಾಜ್ಯ ನೇರವಾಗಿ ಕೆರೆ ಸೇರಿ, ಕೆರೆಯ ನೀರು ಕಲುಷಿತಗೊಂಡು ಜಲಚರಗಳಿಗೆ ಹಾಗೂ ಗ್ರಾಮಸ್ಥರಿಗೆ ಮಾರಕವಾಗಿ ಪರಿಣಮಿಸಿದೆ.
ರಾಮನಗರ ಜಿಲ್ಲೆಯಲ್ಲೇ ಬಿಡದಿ ಸ್ಮಾರ್ಟ್ ಸಿಟಿ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ. ಬೃಹತ್ ಕೈಗಾರಿಕಾ ಪ್ರದೇಶ ಇದಾಗಿದ್ದು ಪ್ರತಿಷ್ಠಿತ ಕಾರ್ಖಾನೆಗಳು ತಲೆ ಎತ್ತಿ ರಾಜ್ಯದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡುತ್ತಿವೆ. ಆದರೆ ಕೆಲ ಕಾರ್ಖಾನೆಗಳು ತಮ್ಮಲ್ಲಿ ಉತ್ಪತ್ತಿಯಾಗುವ ರಾಸಾಯನಿಕ ಯುಕ್ತ ತಾಜ್ಯದ ನೀರನ್ನು ಸಂಸ್ಕರಣೆ ಮಾಡದೆ ಹೊರ ಬಿಟ್ಟು ಜನರ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿವೆ.
ಮುಖ್ಯಮಂತ್ರಿಗಳ ಕಚೇರಿ ತಲುಪಿದ ಚನ್ನಪಟ್ಟಣ ಬಹು ಕೋಟಿ ಭೂ ಹಗರಣ
ಕೈಗಾರಿಕಾ ವಲಯದ ಅಬ್ಬನಕುಪ್ಪೆ ಗ್ರಾಮದ ಬಳಿ ಇರುವ ಬೆಕ್ಕಾಂ, ಆಮ್ಕೊ, ಬ್ರಿಟಾನಿಯಾ, ಗಣೇಶ್ ಹರ್ಬಲ್, ಪ್ಯಾರಾ ಮೆಡಿಕಲ್ ಕಾರ್ಖಾನೆಗಳು ಸೇರಿದಂತೆ 6-7 ಕಾರ್ಖಾನೆಗಳು ತ್ಯಾಜ್ಯವನ್ನು ಸಂಸ್ಕರಣೆ ಮಾಡದೆ ನೇರವಾಗಿ ಹಳ್ಳಕ್ಕೆ ಬಿಡುತ್ತಿವೆ. ಹಳ್ಳಕ್ಕೆ ಬಿಟ್ಟ ವಿಷಪೂರಿತ ತ್ಯಾಜ್ಯ ಇಟ್ಟಮಡು ಗ್ರಾಮದ ಕೆರೆ ಸೇರುತ್ತಿದೆ. ಇದರಿಂದಾಗಿ ಕೆರೆಯ ನೀರು ಕಲುಷಿತಗೊಳ್ಳುತ್ತಿದೆ.
ಕಾರ್ಖಾನೆಗಳ ವಿಷಪೂರಿತ ತಾಜ್ಯದಿಂದ ಇಟ್ಟಮಡು ಕೆರೆ ಕಲುಷಿತ ಗೊಂಡು ಕೆರೆಯ ದಂಡೆಯಲ್ಲಿ ಜನರು ಓಡಾಡಲು ತೊಂದರೆಯಾಗಿದೆ. ಕೆರೆ ನೀರು ಕೆಟ್ಟ ವಾಸನೆಯಿಂದ ಕೂಡಿದ್ದು ಗ್ರಾಮದ ಜನರು ನಿತ್ಯ ಕೆರೆಯ ಕೆಟ್ಟ ವಾಸನೆಯೊಂದಿಗೆ ಬದುಕು ನಡೆಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಕಾರ್ಖಾನೆ ತ್ಯಾಜ್ಯದ ನೀರು ಕೆರೆ ಸೇರುತ್ತಿರುವುದರಿಂದ ಕೆರೆಯ ನೀರು ಕಲುಷಿತಗೊಂಡು ಕೆರೆಯಲ್ಲಿದ್ದ ಮೀನುಗಳು ಸಹ ಸಾವನ್ನಪ್ಪಿವೆ. ಸುಮಾರು 2 ಟನ್ ಗಳಷ್ಟು ಮೀನುಗಳು ಸಾವನ್ನಪ್ಪಿವೆ. ಮೀನು ಸಾಗಾಣಿಕೆಗೆ ಕೆರೆ ಟೆಂಡರ್ ಪಡೆದಿದ್ದ ಶ್ರೀನಿವಾಸ್ ಎಂಬುವರಿಗೆ ಇದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.
ನೆಲೆ ಕಳೆದುಕೊಳ್ಳುವ ಆತಂಕದಲ್ಲಿ ಕಾರವಾರದ ಮೀನುಗಾರರು!
ಜವಾಬ್ದಾರಿ ಮರೆಯುತ್ತಿರುವ ಕಾರ್ಖಾನೆಗಳು; ಬಿಡದಿ ಕೈಗಾರಿಕಾ ವಲಯದ ಹಲವಾರು ಕಾರ್ಖಾನೆಗಳು ತಮ್ಮಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಸಂಸ್ಕರಣೆ ಮಾಡುವ ಗೋಜಿಗೆ ಹೋಗುವುದಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ಕಾರ್ಖಾನೆಗಳು ತಮ್ಮ ಆವರಣದಲ್ಲೇ ಎಸ್ಟಿಪಿ ಪ್ಲಾಂಟ್ ಸ್ಥಾಪಿಸಿ ತಮ್ಮಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಶುದ್ಧೀಕರಿಸಿ ನಂತರ ಹೂರಬಿಡಬೇಕು ಆದರೆ ತಮ್ಮ ಜವಾಬ್ದಾರಿಯನ್ನು ಕಾರ್ಖಾನೆಗಳು ಮರೆತಿವೆ ಎಂದು ಗ್ರಾಮಸ್ಥರು ಆರೋಪಿಸಿದರು.
ಕಾರ್ಖಾನೆಗಳು ತಮ್ಮಲ್ಲಿ ಬರುವ ತ್ಯಾಜ್ಯವನ್ನು ಶುದ್ದೀಕರಿಸದೇ ಅಥವಾ ವೈಜ್ಞಾನಿಕವಾಗಿ ವಿಲೇವಾರಿ ಮಾಡದೆ ತಮ್ಮಲ್ಲೇ ಸಂಗ್ರಹ ಮಾಡಿಕೊಂಡು ಮಳೆ ಬಂದು ಹಳ್ಳ ಹರಿಯುವ ಸಮಯದಲ್ಲಿ ಅದರಲ್ಲೂ ರಾತ್ರಿ ವೇಳೆ ತ್ಯಾಜ್ಯವನ್ನು ಹಳ್ಳಕ್ಕೆ ಬಿಡುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರಿಗೆ ದೂರು ನೀಡಿದರು ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಗ್ರಾಮಸ್ಥರು.
ಈಗಾಗಲೇ ಬಹಳ ಹಿಂದಿನಿಂದ ತ್ಯಾಜ್ಯವನ್ನು ನೇರವಾಗಿ ಕೆರೆ ಬಿಟ್ಟಿದ್ದರಿಂದ ಬೈರಮಂಗಲ ಜಲಾಶಯ ರಾಸಾಯನಿಕ ವಿಷಪೂರಿತ ತ್ಯಾಜ್ಯದಿಂದಾಗಿ ಜಲಾಶಯ ಗಬ್ಬೇದ್ದು ಹೋಗಿದೆ. ಇದರಿಂದ ಸುತ್ತ ಮುತ್ತಲಿನ ಗ್ರಾಮಗಳಿಗೆ ಶಾಪವಾಗಿ ಕಾಡುತ್ತಿದೆ. ಇದಕ್ಕೆಲ್ಲ ಕಡಿವಾಣ ಹಾಕಬೇಕಿರುವ ಸರ್ಕಾರಿ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.