4 ಕೋಟಿ ವೆಚ್ಚದ ಕೈಗಾರಿಕಾ ತರಬೇತಿ ಸಂಸ್ಥೆಗೆ ಶಂಕುಸ್ಥಾಪನೆ
ರಾಮನಗರ, ನವೆಂಬರ್ 26: ಜಿಲ್ಲೆಯ ಮಾಗಡಿ ತಾಲ್ಲೂಕಿನ ಮಾಡಬಾಳ್ ಹೋಬಳಿ ಮೇಲಹಳ್ಳಿ ಗ್ರಾಮದಲ್ಲಿ 4.15 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಕೈಗಾರಿಕಾ ತರಬೇತಿ ಸಂಸ್ಥೆಗೆ ಉಪಮುಖ್ಯಮಂತ್ರಿ ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಅವರು ಗುರುವಾರ ಶಂಕುಸ್ಥಾಪನೆ ನೆರವೇರಿಸಿದರು.
ಮಾಗಡಿ ತಾಲ್ಲೂಕಿನಲ್ಲಿ 3.99 ಕೋಟಿ ರೂಪಾಯಿ ವೆಚ್ಚದಲ್ಲಿ ಹಮ್ಮಿಕೊಂಡಿರುವ ಚಕ್ರಬಾವಿ ಹಾಗೂ ಇತರೆ 12 ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಕಾಮಗಾರಿ ಯೋಜನೆಯನ್ನು ಪರಿಶೀಲಿಸಿದರು.
ಗೂಡೆಹೊಸಳ್ಳಿ ಏತ ನೀರಾವರಿ ಕಾಮಗಾರಿ ಆರಂಭ
ಕಾಮಗಾರಿ ಪೂರ್ಣಗೊಂಡರೆ ಹನ್ನೆರಡು ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗಲಿದ್ದು, ಶೀಘ್ರವಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಕಾರ್ಯಕ್ರಮದಲ್ಲಿ ಸಚಿವರೊಂದಿಗೆ ಮಾಗಡಿ ಶಾಸಕ ಎ.ಮಂಜುನಾಥ್, ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರ ಚಂದ್ರಹಾಸ್ ಉಪಸ್ಥಿತರಿದ್ದರು.
ಉಪ ಮುಖ್ಯಮಂತ್ರಿಗಳಿಂದ ಹಕ್ಕುಪತ್ರ ವಿತರಣೆ: ಇದೇ ಸಂದರ್ಭ ಮಾಗಡಿಯ ಜೇನುಕಲ್ಲು ಪಾಳ್ಯದಲ್ಲಿನ ಸರ್ಕಾರಿ ಜಮೀನಿನಲ್ಲಿ ವಾಸವಾಗಿರುವ 16 ಮಂದಿಗೆ ಅಶ್ವತ್ಥ ನಾರಾಯಣ್ ಅವರು 94 ಸಿ ಹಕ್ಕುಪತ್ರ ವಿತರಿಸಿದರು. ಹಕ್ಕು ಪತ್ರ ಪಡೆದುಕೊಂಡವರು ಮನೆ ನಿರ್ಮಾಣ ಮಾಡಿಕೊಂಡು ಉತ್ತಮ ರೀತಿ ಜೀವನ ನಡೆಸಿ ಸಮಾಜದ ಮುಖ್ಯವಾಹಿನಿಗೆ ಬಂದು ಆರ್ಥಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿ ಹೊಂದುವಂತೆ ಶುಭ ಹಾರೈಸಿದರು.
ಮಾವು ಸಂಸ್ಕರಣಾ ಘಟಕಕ್ಕೆ ಸಿದ್ಧತೆ: ಜಿಲ್ಲೆಯಲ್ಲಿ ಮಾವು ಸಂಸ್ಕರಣಾ ಘಟಕ ಪ್ರಾರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ರೇಷ್ಮೆ ಇಲಾಖೆಯಿಂದ 15 ಎಕರೆ ಸ್ಥಳವನ್ನು ಘಟಕ ನಿರ್ಮಾಣಕ್ಕಾಗಿ ತೋಟಗಾರಿಕೆ ಇಲಾಖೆಗೆ ನೀಡಲಾಗಿದೆ. ಮಾವಿನ ಜೊತೆಗೆ ತರಕಾರಿ ಬೆಳೆಗಳಿಗೂ ಆದ್ಯತೆ ನೀಡಿ ಸಂಸ್ಕರಣಾ ಘಟಕ ಸಿದ್ಧಪಡಿಸಲಾಗುವುದು.
ರೈತರು ಹಣ್ಣು ಮತ್ತು ತರಕಾರಿಗಳನ್ನು ಬೆಳೆದು ಆರ್ಥಿಕವಾಗಿ ಸದೃಢರಾಗಬೇಕು. ತರಕಾರಿ ಬೆಳೆಯನ್ನು ಯಾವ ರೀತಿ ಬೆಳೆದು ಹೆಚ್ಚು ಆದಾಯಗಳಿಸಬಹುದು ಎಂದು ಜನರಲ್ಲಿ ಜನಜಾಗೃತಿ ಮೂಡಿಸಲಾಗುವುದು. ವರ್ಷಪೂರ್ತಿ ರೈತರಿಗೆ ಅನುಕೂಲವಾಗುವ ರೀತಿ ಮಾವು ಸಂಸ್ಕರಣಾ ಕೇಂದ್ರವನ್ನು ಸಿದ್ಧಪಡಿಸಲಾಗುವುದು ಎಂದು ಉಪಮುಖ್ಯಮಂತ್ರಿಗಳು ತಿಳಿಸಿದರು.