ದರೋಡೆ ನಡೆದಿದ್ದ ಎಸಿಪಿ ಸಹೋದರಿ ಮನೆಗೆ ಐಜಿ ಶರತ್ ಚಂದ್ರ ಭೇಟಿ
ರಾಮನಗರ, ಮಾರ್ಚ್ 09: ಚನ್ನಪಟ್ಟಣದಲ್ಲಿ ಹಾಡುಹಗಲೇ ನಾಲ್ವರ ತಂಡ ಮನೆಗೆ ನುಗ್ಗಿ, ಮಚ್ಚು ಝಳಪಿಸಿ ನಗನಾಣ್ಯ ದೋಚಿದ್ದ ಎಸಿಪಿ ಗೋಪಾಲ್ ಸಹೋದರಿ ಸುವರ್ಣ ಉತ್ತೇಶ್ ಮನೆಗೆ ಇಂದು ಬೆಂಗಳೂರು ಕೇಂದ್ರ ವಲಯದ ಐ.ಜಿ ಶರತ್ ಚಂದ್ರ ಸ್ಥಳಕ್ಕೆ ಭೇಟಿ ಕೊಟ್ಟು ಮನೆಯವರ ಜೊತೆಗೆ ಸುಮಾರು 20 ನಿಮಿಷಕ್ಕೂ ಹೆಚ್ಚು ಕಾಲ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಐಜಿ ಶರತ್ ಚಂದ್ರ, ಈ ಭಾಗದಲ್ಲಿ ಪೊಲೀಸ್ ಬೀಟ್ ವ್ಯವಸ್ಥೆ ಸರಿಯಿಲ್ಲವೆಂಬ ಅಭಿಪ್ರಾಯ ಕೇಳಿ ಬಂದಿದೆ. ಮುಂದಿನ ದಿನಗಳಲ್ಲಿ ಅದನ್ನು ಸರಿಪಡಿಸುವುದಾಗಿ ತಿಳಿಸಿದರು. ಜೊತೆಗೆ ಈ ದರೋಡೆ ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ತೀವ್ರಗತಿಯಲ್ಲಿ ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.
ಚನ್ನಪಟ್ಟಣ; ಎಸಿಪಿ ತಂಗಿ ಮನೆ ದರೋಡೆ ಮಾಡಿ, ಧೈರ್ಯ ಹೇಳಿ ಹೋದ ಕಳ್ಳರು
ರಾಜಧಾನಿ ಬೆಂಗಳೂರಿನ ಸೆರಗಿನಲ್ಲಿರುವ ರೇಷ್ಮೆ ನಾಡು ರಾಮನಗರ ಕಳ್ಳರ ಹಾಟ್ ಸ್ಪಾಟ್ ಅಗುತ್ತಿದೆಯೇ ಎನ್ನುವ ಅನುಮಾನಕ್ಕೆ ಪುಷ್ಟಿ ಕೊಡುವಂತೆ ಬೊಂಬೆ ನಾಡು ಖ್ಯಾತಿಯ ಚನ್ನಪಟ್ಟಣದ ಕೆ.ಎಚ್.ಬಿ ಬಡಾವಣೆಯಲ್ಲಿ ಕಳೆರಡು ತಿಂಗಳ ಅವಧಿಯಲ್ಲಿ ಎರಡು ಮನೆ ಕಳ್ಳತನ ಹಾಗೂ ಮೂರು ಸರಗಳ್ಳತನ ನಡೆದಿರುವುದು ಜನತೆಯಲ್ಲಿ ಆತಂಕ ಮೂಡಿಸಿದೆ.
ಬಡಾವಣೆ ಹೊಂದಿಕೊಂಡಿರುವ ಬಾರ್ ಮತ್ತು ರೆಸ್ಟೋರೆಂಟ್ ಗಳಿರುವುದೇ ಕಳ್ಳತನ, ದರೋಡೆ ಪ್ರಕರಣಗಳು ಹೆಚ್ಚಾಗಲು ಕಾರಣ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ಅವುಗಳನ್ನು ಬೇರೆಡೆಗೆ ಶಿಫ್ಟ್ ಮಾಡಬೇಕು, ಜೊತೆಗೆ ಈ ಭಾಗದಲ್ಲಿ ಹೆಚ್ಚಿನ ಪೊಲೀಸ್ ಬೀಟ್ ವ್ಯವಸ್ಥೆ ಮಾಡಬೇಕೆಂದು ಸಾರ್ವಜನಿಕರು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.