'ಯೋಗೇಶ್ವರ್ ಗೆದ್ದರೆ ಚ.ಪಟ್ಟಣ ಬಸ್ಟ್ಯಾಂಡಲ್ಲಿ ನೇಣು ಹಾಕ್ಕೊಳ್ತೀನಿ'
ರಾಮನಗರ, ಏಪ್ರಿಲ್ 7: "ಕುಮಾರಸ್ವಾಮಿ ಚನ್ನಪಟ್ಟಣ ಕ್ಷೇತ್ರದಲ್ಲಿ ಮಾತ್ರ ಸ್ಪರ್ಧಿಸಿದರೆ ಸ್ವಾಗತ. ಅವರು ವರ್ಷಕ್ಕೆ-ಎರಡು ವರ್ಷಕ್ಕೆ ಒಮ್ಮೆ ಬರುವ ಗೆಸ್ಟ್ ಲೆಕ್ಚರರ್ ಇದ್ದ ಹಾಗೆ" ಎಂದು ವಾಗ್ದಾಳಿ ನಡೆಸಿದ್ದ ಸಿ.ಪಿ.ಯೋಗೇಶ್ವರ್ ವಿರುದ್ಧ ಜೆಡಿಎಸ್ ಮುಖಂಡರು ಮುಗಿಬಿದ್ದಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ
ಕುಮಾರಸ್ವಾಮಿ ಅವರ ವಿರುದ್ಧದ ಹೇಳಿಕೆಯನ್ನು ಈ ಕೂಡಲೇ ವಾಪಸ್ ಪಡೆಯಬೇಕು ಎಂದು ಎಚ್ಚರಿಕೆ ನೀಡಿದ್ದಾರೆ. ಮಾಜಿ ಶಾಸಕ ಎಂ.ಸಿ.ಅಶ್ವಥ್ ಅವರು ಸಿ.ಪಿ.ಯೋಗೇಶ್ವರ್ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಗುರುವಾರ ಪತ್ರಿಕಾಗೋಷ್ಠಿ ಕರೆದಿದ್ದ ಸಿ.ಪಿ.ಯೋಗೇಶ್ವರ್, ಕುಮಾರಸ್ವಾಮಿ ಹಾಗೂ ದೇವೇಗೌಡರ ವಿರುದ್ಧ ಮಾತನಾಡಿದ್ದರು. ಇದೀಗ ಯೋಗೇಶ್ವರ್ ಗೆ ಜೆಡಿಎಸ್ ಮುಖಂಡರು ತಿರುಗೇಟು ನೀಡಿದ್ದಾರೆ.
ಯೋಗೇಶ ಚನ್ನಪಟ್ಟಣಕ್ಕೆ ಒಬ್ಬನೆ. ಆದರೆ ಕುಮಾರಸ್ವಾಮಿ ಅವರು ರಾಜ್ಯದ 224 ಕ್ಷೇತ್ರವನ್ನು ಗಮನಿಸಬೇಕು. ಪಕ್ಕದ ಕ್ಷೇತ್ರಕ್ಕೆ ಹೋಗಿ ಪ್ರಚಾರ ಮಾಡುವ ಶಕ್ತಿ ಯೋಗೇಶ್ವರ್ ಗೆ ಇಲ್ಲ. ಕುಮಾರಸ್ವಾಮಿ ವಿರುದ್ಧ ನೀಡಿದ ಹೇಳಿಕೆಯನ್ನು ಯೋಗೇಶ್ವರ್ ಈ ಕೂಡಲೇ ವಾಪಸ್ ಪಡೆಯಬೇಕು ಎಂದು ಮಾಜಿ ಶಾಸಕ ಎಂ.ಸಿ.ಅಶ್ವಥ್ ಗುಡುಗಿದ್ದಾರೆ.
ರಾಮನಗರದ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಟಿ ನಡೆಸಿದ ಚನ್ನಪಟ್ಟಣದ ಜೆಡಿಎಸ್ ಮುಖಂಡರು, ಯೋಗೇಶ್ವರ್ ಮೆಗಾಸಿಟಿ ಹಗರಣದ ವಂಚಕ. ಸುಳ್ಳೇಶ್ವರ. ಅವರ ಮೇಲಿರುವ ಪ್ರಕರಣಗಳು ಇನ್ನೂ ನ್ಯಾಯಾಲಯದಲ್ಲಿ ಇವೆ ಎಂದು ಆರೋಪಿಸಿದರು.
ಯೋಗೇಶ್ವರ್ ಈ ಬಾರಿ ಚನ್ನಪಟ್ಟಣದಲ್ಲಿ ಗೆದ್ದರೆ ಚನ್ನಪಟ್ಟಣದ ಜೆಡಿಎಸ್ ಮುಖಂಡರೆಲ್ಲ ರಾಜಕೀಯದಿಂದ ನಿವೃತ್ತಿ ಆಗ್ತೀವಿ. ಅವನಿಗೆ ಶರಣಾಗ್ತೀವಿ. ಅವನು ಸೋತರೆ ನಮಗೆ ಶರಣಾಗಬೇಕು. ಹದಿನೆಂಟು ವರ್ಷದಿಂದ ಎಲ್ಲ ಕಾಮಗಾರಿಗಳಿಗೂ ಕಮಿಷನ್ ಪಡೆಯುತ್ತಿದ್ದಾರೆ. ಯೋಗೇಶ್ವರ್ ನೀರಾವರಿ ಭಗೀರಥ ಅಲ್ಲ, ಕಮಿಷನ್ ಭಗೀರಥ ಎಂದು ಕಿಡಿ ಕಾರಿದರು.
ಇನ್ನು ಇದೇ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ಹಿರಿಯ ಮುಖಂಡ ಪುಟ್ಟಸಿದ್ದೇಗೌಡ, ಈ ಬಾರಿ ಚುನಾವಣೆಯಲ್ಲಿ ಯೋಗೇಶ್ವರ್ ಗೆದ್ದರೆ ನಾನು ಚನ್ನಪಟ್ಟಣದ ಬಸ್ ನಿಲ್ದಾಣದಲ್ಲಿ ನೇಣಿಗೆ ಶರಣಾಗ್ತೀನಿ ಎಂದು ಸವಾಲು ಹಾಕಿದರು.