ಐಎಎಸ್ ಅಧಿಕಾರಿ ಕಾರಿಗೆ ಟಿಂಟೆಡ್ ಗ್ಲಾಸ್; ಕ್ರಮ ಕೈಗೊಂಡಿಲ್ಲ ಯಾಕೆ?
ರಾಮನಗರ, ಫೆಬ್ರವರಿ 20: ವಾಹನಗಳಿಗೆ ಕೂಲಿಂಗ್ ಪೇಪರ್ ಅಳವಡಿಸದಂತೆ ಸುಪ್ರೀಂ ಕೋರ್ಟ್ ಆದೇಶ ಮಾಡಿದ್ದರೂ ಕಾನೂನು ಕಾಪಾಡಬೇಕಾದ ಅಧಿಕಾರಿಯೊಬ್ಬರು ತಮ್ಮ ಸರ್ಕಾರಿ ಕಾರಿಗೆ ಕೂಲಿಂಗ್ ಪೇಪರ್ ಹಾಕಿಕೊಂಡಿರುವುದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ರಾಮನಗರ ಜಿಲ್ಲಾ ಪಂಚಾಯತ್ ಸಿಇಒ ಇಕ್ರಂ ಅವರು ತಮ್ಮ ಕಾರಿಗೆ ಟಿಂಟೆಡ್ ಕೂಲಿಂಗ್ ಗ್ಲಾಸ್ ಅಳವಡಿಸಿಕೊಂಡು ಕಾನೂನನ್ನು ಗಾಳಿ ತೂರಿದ್ದಾರೆ. ಎರಡು ತಿಂಗಳ ಹಿಂದೆಯಷ್ಟೇ ರಾಮನಗರ ಜಿಲ್ಲಾ ಪಂಚಾಯತ್ ಸಿಇಒ ಆಗಿ ಅಧಿಕಾರ ವಹಿಸಿಕೊಂಡ ಇಕ್ರಂ ಅವರು, ಈ ಹಿಂದಿನ ಸಿಇಒ ಬಳಸುತ್ತಿದ್ದ ಕಾರನ್ನು ಬಿಟ್ಟು, ಹೊಸ ಕಾರನ್ನು ಖರೀದಿಸಿ ಅದಕ್ಕೆ ಸಂಪೂರ್ಣ ಕೂಲಿಂಗ್ ಪೇಪರ್ ಹಾಕಿಸಿಕೊಂಡಿದ್ದಾರೆ.
ಮಂಗಳೂರು : ಟಿಂಟೆಡ್ ಗ್ಲಾಸ್ ಇದ್ದರೆ ದಂಡ ಕಟ್ಟಬೇಕು
ಅಧಿಕಾರಿಯ ದರ್ಬಾರ್ ಕಂಡ ಸಾರ್ವಜನಿಕರು ಅಧಿಕಾರಿಗಳಿಗೆ ಒಂದು ಕಾನೂನು, ಜನ ಸಾಮಾನ್ಯರಿಗೆ ಮತ್ತೊಂದು ಕಾನೂನೇ ಎಂದು ಪ್ರಶ್ನೆ ಇಡುತ್ತಿದ್ದಾರೆ. ಸಾಮಾನ್ಯ ಜನರು ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದರೆ ದಂಡ ಹಾಕುವ ಆರ್ ಟಿಒ ಅಧಿಕಾರಿಗಳು, ಪೋಲಿಸ್ ಇಲಾಖೆಯ ಸಿಬ್ಬಂದಿ, ಸುಪ್ರೀಂ ಆದೇಶ ಉಲ್ಲಂಘನೆ ಮಾಡಿ ಕೂಲಿಂಗ್ ಟಿಂಟ್ ಅಳವಡಿಸಿರುವ ಕಾರು ಬಳಸುತ್ತಿದ್ದರೂ ಸಿಇಒ ಇಕ್ರಂ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ ಎನ್ನುತ್ತಿದ್ದಾರೆ.