ಪುಟ್ಟಣ್ಣ ಕುಟುಂಬಕ್ಕೆ 10 ಕೆ.ಪಿ.ಎಸ್.ಸಿ ಕ್ಲಾಸ್ ಒನ್ ಹುದ್ದೆ ಕೊಡಿಸಿದ್ದೆ: ಎಚ್ಡಿಕೆ
ರಾಮನಗರ, ಅಕ್ಟೋಬರ್ 18: ನಾನು ಮಾಜಿ ಎಂಎಲ್ಸಿ ಪುಟ್ಟಣ್ಣ ಅವರ ಕುಟುಂಬಕ್ಕೆ ಮಾಡಿರುವ ಸಹಾಯವನ್ನು ಅವರು ಮರೆತಿರಬಹುದು. ಕೃಷ್ಣ ಅವರು ಕೆ.ಪಿ.ಎಸ್.ಸಿ ಅಧ್ಯಕ್ಷರಾಗಿದ್ದ ಸಮಯದಲ್ಲಿ ಪುಟ್ಟಣ್ಣನವರ ಒಂದೇ ಕುಟುಂಬಕ್ಕೆ 10 ಕ್ಲಾಸ್ ಒನ್ ಅಧಿಕಾರಿಗಳ ಹುದ್ದೆ ಕೊಡಿಸಿದ್ದೇನೆ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಹೇಳಿದರು.
ಬಿಡದಿಯ ತೋಟದ ಮನೆಯಲ್ಲಿ ಕರೆದಿದ್ದ ಶಿಕ್ಷಕರ ಸಭೆಯಲ್ಲಿ ಮಾತನಾಡಿದ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ, ಬೆಂಗಳೂರು ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪುಟ್ಟಣ್ಣ 1999 ರಲ್ಲಿ ಪ್ರಥಮ ಬಾರಿಗೆ ನನ್ನನ್ನು ಭೇಟಿ ಮಾಡಿದಾಗ ಇದ್ದ ಪರಿಸ್ಥಿತಿಯೇ ಬೇರೆ, ಇಂದು ನಿಮ್ಮ ಆಶೀರ್ವಾದ ಮತ್ತು ಬೆಂಬಲದಿಂದ ಶಕ್ತಿಯಾಗಿ ಬೆಳೆದಿದ್ದಾರೆ. ಈಗಿನ ವ್ಯಕ್ತಿ, ಅವತ್ತಿನ ವ್ಯಕ್ತಿ ಅಲ್ಲವೆಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು.
ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ನಾವು ಹೇಳಿದ್ದವರಿಗೆ ಮತ ಹಾಕಬೇಕು, ಜೆಡಿಎಸ್ ಅಭ್ಯರ್ಥಿಯ ಸಭೆಗಳಿಗೆ ಹೋಗಬಾರದು ಎಂದು ರಾಜ್ಯ ಸರ್ಕಾರವು ಶಿಕ್ಷಣ ಇಲಾಖೆಯ ಅಧಿಕಾರಿಗಳಿಂದ ಶಿಕ್ಷಕರ ಮೇಲೆ ಒತ್ತಡ, ಬೆದರಿಕೆ ಹಾಕಲಾಗುತ್ತಿದೆ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಆರೋಪಿದ್ದಾರೆ.
ಜೆಡಿಎಸ್ ಪಕ್ಷದ ಅಭ್ಯರ್ಥಿ ಎ.ಪಿ ರಂಗನಾಥ್
ಬೆಂಗಳೂರು ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಎ.ಪಿ ರಂಗನಾಥ್ ಪರವಾಗಿ ಹಮ್ಮಿಕೊಂಡಿದ್ದ ಖಾಸಗಿ ಹಾಗೂ ಸರ್ಕಾರಿ ಶಿಕ್ಷಕರ ಸಭೆಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ""ಶಿಕ್ಷಕರು ಅಧಿಕಾರಿಗಳ ಬೆದರಿಕೆಗೆ ಹೆದರುವ ಅಗತ್ಯ ಇಲ್ಲ'' ಎಂದು ಅಭಯ ನೀಡಿದರು.
ಡಿಸೆಂಬರ್ ನಂತರ ರಾಜ್ಯ ರಾಜಕಾರಣದಲ್ಲಿ ಬದಲಾಣೆ: ಎಚ್ಡಿಕೆ ಭವಿಷ್ಯ
ಶಿಕ್ಷಕರ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯಾಗಿದೆ ಎಂದರೆ ಅದಕ್ಕೆ ಕಾರಣ ಮಾಜಿ ಪ್ರಧಾನಿ ದೇವೇಗೌಡರು, ನಮ್ಮ ಪಕ್ಷದ ಸಚಿವರುಗಳು ಕಾರಣ. ಪಕ್ಷ ಮತ್ತು ಶಿಕ್ಷಕರ ಬೆಂಬಲದಿಂದ ಬೆಳೆದ ಪುಟ್ಟಣ್ಣ, ಇಂದು ಶಿಕ್ಷಕರ ಮೇಲೆ ದಬ್ಬಾಳಿಕೆ ಮಾಡಲು ಮುಂದಾಗಿದ್ದಾರೆ ಎಂದು ಆಪಾದಿಸಿದರು.
ಶಿಕ್ಷಕರಿಗೆ ವಿಶೇಷ ಭತ್ಯೆ ನೀಡಿದ್ದೆ
ರಾಜ್ಯ ಸರ್ಕಾರವು ಶಿಕ್ಷಣ ಇಲಾಖೆಯಲ್ಲಿನ ಉಪ ನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೇಲೆ ಒತ್ತಡ ಹಾಕಿ ಅವರಿಂದ ಶಿಕ್ಷಕರನ್ನು ಬೆದರಿಸುವ ಕೆಲಸ ಮಾಡುತ್ತಿರುವುದು ಅವರ ಅವನತಿಯ ಪರಮಾವಧಿಯಾಗಿದೆ ಎಂದು ಮಾಜಿ ಸಿಎಂ ಎಚ್ಡಿಕೆ ಕಿಡಿಕಾರಿದರು.
ಕಳೆದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ, ಶಿಕ್ಷಕರ ಸಮಸ್ಯೆ ಎಂದು ವಿಧಾನ ಪರಿಷತ್ ಕಲಾಪದಲ್ಲಿದ್ದ ವೇಳೆಯಲ್ಲಿ ಸಿಗರೇಟ್ ಪ್ಯಾಕ್ನ ಹಿಂಬದಿಯಲ್ಲಿ ಪುಟ್ಟಣ್ಣನವರು ಶಿಕ್ಷಕರಿಗೆ ವಿಶೇಷ ಭತ್ಯೆ ಬಗ್ಗೆ ಎರಡು ಲೈನ್ ಬರೆದು ಕಳಿಸಿದ್ದರು.
ಶಿಕ್ಷಕರ ದುಡಿಮೆಗೆ ನಾನು ಬೆಂಬಲ ನೀಡಿದ್ದೇನೆ
ಅಂದು ಉಪ ಮುಖ್ಯಮಂತ್ರಿಗಳಾಗಿದ್ದ, ಹಾಲಿ ಸಿಎಂ ಯಡಿಯೂರಪ್ಪ ಅವರು ಅದಕ್ಕೆ ಒಪ್ಪಿಗೆ ಕೊಟ್ಟಿರಲಿಲ್ಲ. ಆರ್ಥಿಕ ಇಲಾಖೆಯಿಂದಲೂ ಒಪ್ಪಿಗೆ ಕೊಟ್ಟಿರಲಿಲ್ಲ. ಆದರೂ ಅಂದಿನ ಸಭೆಯಲ್ಲೇ ನಾನು ಘೋಷಣೆಯನ್ನು ಮಾಡಿದೆ. ಅದನ್ನು ನಾನೇ ಮಾಡಿದೆ ಎಂದು ಅವರು ಹೇಳಿಕೊಳ್ಳುತ್ತಿದಾರೆ. ನಾನು ಅವರಿಗೋಸ್ಕರ ಮಾಡಿದ ಕೆಲಸ ಅಲ್ಲ, ಶಿಕ್ಷಣ ಕ್ಷೇತ್ರದಲ್ಲಿನ ಶಿಕ್ಷಕರ ದುಡಿಮೆಗೆ ನಾನು ಬೆಂಬಲ ನೀಡಿದ್ದೇನೆ ಎಂದು ಬಿಜೆಪಿ ಅಭ್ಯರ್ಥಿ ಪುಟ್ಟಣ್ಣ ನವರಿಗೆ ಎಚ್ಡಿಕೆ ಟಾಂಗ್ ನೀಡಿದರು.
ನನ್ನಿಂದ ಬೆಳೆದವರೇ ನನಗೆ ಮೋಸ ಮಾಡಿದರು
ಮಾಜಿ ಎಂಎಲ್ಸಿ ಪುಟ್ಟಣ್ಣ ಅವರನ್ನು ಬೆಳೆಸಿದ ನೀವು ಇದ್ದಂತೆಯೇ ಇದ್ದೀರಿ, ಆದರೆ ನಿಮ್ಮಿಂದ ಬೆಳೆದವರು ಇಂದು 80 ಕೋಟಿ ರುಪಾಯಿ ಮೌಲ್ಯದ ಶಿಕ್ಷಣ ಸಂಸ್ಥೆಯನ್ನು ಹೊಂದಿದ್ದಾರೆ. ನನ್ನ ಕಾಲದಲ್ಲೇ ಬಿಡಿಎ ನಿವೇಶನ ಮಾಡಿಕೊಟ್ಟಿದ್ದೆ, ಅಲ್ಲೇ ಶಿಕ್ಷಣ ಸಂಸ್ಥೆ ಕಟ್ಟಿದ್ದಾರೆ ಎಂದರು. ನಾನೇನು ಅವರಿಗೆ ಅನ್ಯಾಯ ಮಾಡಿದ್ದೇನೆ ಎಂಬುದು ನನಗೆ ಗೊತ್ತಿಲ್ಲ. ನನ್ನಿಂದ ಬೆಳೆದವರೇ ನನಗೆ ಮೋಸ ಮಾಡಿ ಬೆನ್ನಿಗೆ ಚೂರಿ ಹಾಕಿ ಹೋಗಿದ್ದಾರೆ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರು ಬಿಜೆಪಿ ಅಭ್ಯರ್ಥಿ ಪುಟ್ಟಣ್ಣ ವಿರುದ್ಧ ಹರಿಹಾಯ್ದರು.
ನಾನೇ ಮಾಡಿಸಿದ್ದೇನೆ ಎಂದು ಬಿಂಬಿಸಿಕೊಂಡಿದ್ದಾರೆ
1999-2000 ರಲ್ಲಿ ಉಪನ್ಯಾಸಕರ ನೇಮಕಾತಿ ನಡೆಯಿತು, ಈ ವೇಳೆ ಪುಟ್ಟಣ್ಣ ಇದೊಂದು ಕೆಲಸ ಮಾಡಿಸಿಕೊಡಿ ಎಂದು ತಂದು ಕೊಟ್ಟ ಪಟ್ಟಿಯಲ್ಲಿ ಅವರು ಯಾರು ಎಂದು ಸಹ ನೋಡದೆ ನೂರಾರು ಉಪನ್ಯಾಸಕರಿಗೆ ಕೆಲಸ ಕೊಡಿಸಿಕೊಡಲು ಸಹಕಾರ ಕೊಟ್ಟಿದೇನೆ. ಆದರೆ ಅದನ್ನು ನಾನೇ ಮಾಡಿಸಿದ್ದೇನೆ ಎಂದು ಬಿಂಬಿಸಿಕೊಂಡಿದ್ದಾರೆ ಎಂದು ಟೀಕಿಸಿದರು.
ಸಭೆಯಲ್ಲಿ ನೆಲಮಂಗಲ ಶಾಸಕ ಡಾ.ಶ್ರೀನಿವಾಸಮೂರ್ತಿ, ಮಾಗಡಿ ಶಾಸಕ ಎ.ಮಂಜುನಾಥ್, ಜೆಡಿಎಸ್ ರಾಜ್ಯ ವಕ್ತಾರ ಬಿ.ಉಮೇಶ್, ರಾಮನಗರ ಜೆಡಿಎಸ್ ಅಧ್ಯಕ್ಷ ರಾಜಶೇಖರ್, ಬಮೂಲ್ ನಿರ್ದೇಶಕ ಎಚ್.ಸಿ ಜಯಮುತ್ತು, ರಾಜ್ಯ ಖಾಸಗಿ ಶಾಲಾ ಶಿಕ್ಷಕರ ಫೋರಂನ ಕಾರ್ಯಾಧ್ಯಕ್ಷ ಸೂಡಿ ಸುರೇಶ್ ಉಪಸ್ಥಿತರಿದ್ದರು.