'ಕುಮಾರಸ್ವಾಮಿಯನ್ನು ಸಿಎಂ ಮಾಡಲು ನನ್ನನ್ನು ಪಕ್ಷದಿಂದ ಹೊರಹಾಕಿದರು'
ಮಾಗಡಿ (ರಾಮನಗರ ಜಿಲ್ಲೆ), ಏಪ್ರಿಲ್ 5: "ಈ ಬಾರಿ ಮಾಗಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮಧ್ಯೆ ನೇರ ಹಣಾಹಣಿ ನಡೆಯಲಿದೆ. ಕಾಂಗ್ರೆಸ್ ಅಭ್ಯರ್ಥಿ ಜೆಡಿಎಸ್ ಗೆ ಬಂದಿದ್ದಾರೆ. ಜೆಡಿಎಸ್ ಅಭ್ಯರ್ಥಿ ಕಾಂಗ್ರೆಸ್ ಸೇರಿದ್ದಾರೆ ಅಷ್ಟೇ. ಯಾವುದೇ ಕಾರಣಕ್ಕೂ ಜೆಡಿಎಸ್ ಗೆ ಮತ ನೀಡಬೇಡಿ. ಜೆಡಿಎಸ್ ಗೆ ಮತ ಕೊಟ್ಟರೆ ಬಿಜೆಪಿಗೆ ನೀಡಿದ ಹಾಗೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಎಚ್.ಸಿ.ಬಾಲಕೃಷ್ಣ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ನಂತರ ನಡೆದ ಜನಾಶೀರ್ವಾದ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ, ರೈತರ ಪಕ್ಷ ಎಂದು ಹೇಳ್ತಾರೆ. ಆದರೆ ರೈತರ ಸಾಲವನ್ನು ಯಾಕೆ ಮನ್ನಾ ಮಾಡಿಲ್ಲ ಎಂದು ಜೆಡಿಎಸ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
"ಸಿದ್ದು ರಾಜಕೀಯದ ಆರಂಭ, ಅಂತ್ಯ ಎಲ್ಲಾ ಚಾಮುಂಡೇಶ್ವರಿಯಲ್ಲೇ!"
ನಾನು ಜೆಡಿಎಸ್ ನಲ್ಲಿ ಇದ್ದರೆ ಮುಖ್ಯಮಂತ್ರಿ ಪಟ್ಟ ನೀಡಬೇಕಾಗುತ್ತಿತ್ತು. ಇನ್ನು ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡಲು ನನ್ನನ್ನು ಪಕ್ಷದಿಂದ ಹೊರಹಾಕಿದರು ಎಂದು ದೇವೇಗೌಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಯಡಿಯೂರಪ್ಪ ಸರಕಾರ ಭ್ರಷ್ಟ ಸರಕಾರ. ಸಾಲ ಮನ್ನಾ ಮಾಡಿ ಅಂದರೆ ನಮ್ಮ ಬಳಿ ನೋಟಿನ ಮಶೀನ್ ಇದೆಯಾ ಎಂದಿದ್ದವರು ಯಡಿಯೂರಪ್ಪ ಎಂದು ವಾಗ್ದಾಳಿ ನಡೆಸಿದರು.
ಬಾಲಗಂಗಾಧರನಾಥ ಸ್ವಾಮಿ ಸ್ಮರಣೆ
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮಾತನಾಡಿ, ಸಾಲುಮರದ ತಿಮ್ಮಕ್ಕನವರು ದೂರದೃಷ್ಟಿಯಿಂದ ಮರಗಳು ನೆಟಿದ್ದಾರೆ. ಬಾಲಗಂಗಾಧರನಾಥ ಸ್ವಾಮಿ ಹಾಗೂ ಶಿವಕುಮಾರ ಸ್ವಾಮಿಗಳು ಹುಟ್ಟಿದ ನಾಡಿದು. ಅವರ ತತ್ವ- ಸಿದ್ಧಾಂತಗಳೇ ಭೇದ- ಭಾವವನ್ನು ಮರೆತು ಒಗ್ಗಟಾಗಿ ಬಾಳಿ ಎಂಬುದು. ಕಾಂಗ್ರೆಸ್ ಪಕ್ಷ ಕೂಡ ಅದೇ ತತ್ವಗಳನ್ನು ಪಾಲನೆ ಮಾಡುತ್ತಿದೆ. ಆದರೆ ಬಿಜೆಪಿ ಹಾಗೂ ಆರೆಸ್ಸೆಸ್ ಕೋಮುವಾದಿ ಪಕ್ಷ ಎಂದು ಗುಡುಗಿದರು.
ಬ್ಯಾಂಕ್ ನ ಒಳಗೆ ಹೋಗಿ ಕಪ್ಪು ಹಣ ಸಕ್ರಮ ಮಾಡಿಕೊಂಡರು
ನರೇಂದ್ರ ಮೋದಿಯವರು ನೋಟು ನಿಷೇಧ ಮಾಡಿದಾಗ ಯಾವ ಕಪ್ಪು ಹಣವೂ ಕೂಡ ಹೊರಬರಲಿಲ್ಲ. ಇದರಿಂದ ರೈತರು ಹಾಗೂ ಸಾಮಾನ್ಯ ಜನರು ಬ್ಯಾಂಕ್ ನ ಮುಂದೆ ಗಂಟೆಗಳ ಕಾಲ ನಿಂತು ನೋಟು ಬದಲಾವಣೆ ಮಾಡಬೇಕಾಯಿತು. ಆದರೆ ಸೂಟು- ಬೂಟು ಹಾಕಿದ ವ್ಯಕ್ತಿಗಳು ಬ್ಯಾಂಕಿನ ಒಳಗೆ ಹೋಗಿ ಕಪ್ಪು ಹಣವನ್ನು ಸಕ್ರಮ ಮಾಡಿಕೊಂಡರು ಎಂದು ರಾಹುಲ್ ವಾಗ್ದಾಳಿ ನಡೆಸಿದರು.
ಚಿತ್ರಗಳು :ಸಿದ್ದಗಂಗಾ ಶ್ರೀಗಳ ಆಶೀರ್ವಾದ ಪಡೆದ ರಾಹುಲ್ ಗಾಂಧಿ
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜಿಎಸ್ ಟಿ ರದ್ದು
ರಾಮನಗರ ಜಿಲ್ಲೆಯಲ್ಲಿ ಹಿಂದಿಯ ಶೋಲೆ ಸಿನಿಮಾವನ್ನು ಚಿತ್ರೀಕರಿಸಲಾಗಿದೆ. ನಿಮಗೆ ನೆನಪಿರಲಿ, ಜಿಎಸ್ ಟಿ ಜಾರಿಯಿಂದ ಮೋದಿಯವರು ಮಾಡಿದ್ದು ಗಬ್ಬರ್ ಸಿಂಗ್ ರೀತಿಯೇ. ಕಾಂಗ್ರೆಸ್ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಜಿಎಸ್ ಟಿಯನ್ನು ರದ್ದು ಮಾಡುತ್ತೇವೆ ಎಂದು ಹೇಳಿದರು.
ಸಮಾವೇಶದ ಮೂಲಕ ಶಕ್ತಿ ಪ್ರದರ್ಶನಕ್ಕೆ ಕಸರತ್ತು
ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ನಂತರ ಮೊದಲ ಸಮಾವೇಶ ಮಾಗಡಿಯ ನಾಡಪ್ರಭು ಕೇಪೇಗೌಡ ಕೋಟೆ ಮೈದಾನದಲ್ಲಿ ನಡೆಸಿದರು. ಕೆಲ ದಿನಗಳ ಹಿಂದೆ ಇದೇ ಮೈದಾನದಲ್ಲಿ ಜೆಡಿಎಸ್ ವಿಕಾಸಪರ್ವ ಹೆಸರಲ್ಲಿ ಅದ್ಧೂರಿ ಸಮಾವೇಶ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಕೂಡ ಸಮಾವೇಶದ ಮೂಲಕ ತಮ್ಮ ಶಕ್ತಿ ಪ್ರದರ್ಶನಕ್ಕೆ ಕಸರತ್ತು ನಡೆಸಿತು. ಇದೇ ಮೊದಲ ಸಲ ಮಾಗಡಿಗೆ ಬಂದಿದ್ದ ರಾಹುಲ್ ಗಾಂಧಿಯನ್ನು ನೋಡಲು ಕಾಂಗ್ರೆಸ್ ಕಾರ್ಯಕರ್ತರು ಮುಗಿಬಿದ್ದಿದ್ದರು.