ಕಳ್ಳನನ್ನು ಹಿಡಿದವನಿಗೆ ಹೃದಯಾಘಾತ: ಠಾಣೆಯಲ್ಲೇ ಪ್ರಾಣಬಿಟ್ಟ ಮನೆ ಮಾಲೀಕ!
ರಾಮನಗರ, ನವೆಂಬರ್ 10: ಅಚ್ಚರಿ ಅನಿಸಿದರೂ ಇದೊಂದು ಸತ್ಯ ಘಟನೆ. ಮನೆಗೆ ಕಳ್ಳ ನುಗ್ಗಿದರೆ ಎಂಥವರಿಗೂ ಕೈ-ಕಾಲೇ ಆಡುವುದಿಲ್ಲ. ಅಂಥದ್ದರಲ್ಲಿ ಮನೆ ಮಾಲೀಕನೇ ಸ್ಥಳೀಯರ ಸಹಾಯದಿಂದ ಕಳ್ಳನನ್ನು ಹಿಡಿದಿದ್ದಾರೆ. ಆದರೆ, ಅಲ್ಲಿಂದ ಮುಂದಿ ಆಗಿದ್ದು ಮಾತ್ರ ಬಲು ನೋವಿನ ಕಥನ.
ಮಧ್ಯರಾತ್ರಿ ಮನೆಗೆ ನುಗ್ಗಿದ ಕಳ್ಳನಿಗೆ ಗ್ರಹಚಾರ ಸರಿಯಾಗಿ ಕೈ ಕೊಟ್ಟಿತ್ತು. ಮನೆ ಮಾಲೀಕನ ಕೈಗೆ ಸಿಕ್ಕಿಬಿದ್ದ ಕಳ್ಳನನ್ನು ಸ್ಥಳೀಯರೆಲ್ಲ ಸೇರಿಕೊಂಡು ಪೊಲೀಸರಿಗೆ ಒಪ್ಪಿಸಿದರು. ತಪ್ಪು ಮಾಡಲು ಬಂದ ಖದೀಮ ಖಾಕಿ ನೆರಳಿನಲ್ಲಿ ಹಾಯಾಗಿ ಇದ್ದಾನೆ. ಆದರೆ, ಕಳ್ಳನನ್ನು ಹಿಡಿದ ಮನೆ ಮಾಲೀಕನ ಮನೆಯಲ್ಲಿ ಪಾಪ ಈಗ ಸೂತಕನ ವಾತಾವರಣ.
ಕಾರು -ಬಸ್ ಅಪಘಾತ; ಗೃಹಪ್ರವೇಶಕ್ಕೆ ಬಂದಿದ್ದವರ ದುರಂತ ಅಂತ್ಯ
ಹೌದು, ಕಳ್ಳನನ್ನು ಹಿಡಿದು ಪೊಲೀಸರಿಗೇನೋ ಒಪ್ಪಿಸಿ ಆಯಿತು. ಕಳ್ಳನ ವಿರುದ್ಧ ದೂರು ನೀಡುತ್ತಿರುವಾಗಲೇ ಮನೆ ಮಾಲೀಕನಿಗೆ ಹೃದಯಾಘಾತವಾಗಿ ಪೊಲೀಸ್ ಠಾಣೆಯಲ್ಲೇ ಪ್ರಾಣ ಬಿಟ್ಟಿದ್ದಾನೆ. ಇಂಥದೊಂದು ಮನ ಕಲುಕುವ ಘಟನೆ ನಡೆದಿದ್ದು ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಅಕ್ಕೂರು ಪೊಲೀಸ್ ಠಾಣೆಯಲ್ಲಿ.
ಚನ್ನಪಟ್ಟಣ ತಾಲೂಕು ಮಾದಾಪುರ ಗ್ರಾಮದ ಶಿವಣ್ಣ ಎಂಬುವರ ಮನೆಗೆ ಕಳೆದ ರಾತ್ರಿ ಇಬ್ಬರು ಕಳ್ಳರು ನುಗ್ಗಿದ್ದರು. ಇಬ್ಬರಲ್ಲಿ ಓರ್ವ ಕಳ್ಳ ಮಂಜ ಎಂಬಾತನನ್ನ ಗ್ರಾಮಸ್ಥರೊಂದಿಗೆ ಶಿವಣ್ಣ ಹಿಡಿದು ಅಕ್ಕೂರು ಠಾಣೆಯ ಪೊಲೀಸರಿಗೆ ಒಪ್ಪಿಸಿದ್ದಾರೆ. ಸಿಕ್ಕಿಬಿದ್ದಿರುವ ಖದೀಮ ಮಂಜ ಎಂಬಾತ ಪಕ್ಕದ ಕಾಲಿಕೆರೆ ಗ್ರಾಮದವನು ಎನ್ನಲಾಗಿದೆ. ಮಾಡಲು ಕೆಲಸವಿಲ್ಲ, ರಾತ್ರಿಯಾದ್ರೆ ಕಂಡವರ ಮನೆಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಈ ಕಳ್ಳಮಂಜನನ್ನು ಹಿಡಿದುಕೊಟ್ಟು ಆತನ ವಿರುದ್ಧ ದೂರು ನೀಡುವ ಸಮಯದಲ್ಲಿ ಮನೆ ಮಾಲೀಕ ಶಿವಣ್ಣನಿಗೆ ಹೃದಯಾಘಾತವಾಗಿ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಪೊಲೀಸರು ಶಿವಣ್ಣನನ್ನ ಆಸ್ಪತ್ರೆಗೆ ದಾಖಲು ಮಾಡಲು ಮುಂದಾಗಿದ್ದಾರೆ. ಆದರೆ ಮಾರ್ಗಮಧ್ಯೆಯೇ ಶಿವಣ್ಣ ಮೃತಪಟ್ಟಿದ್ದಾರೆ.
ಖಾಕಿ ವಿರುದ್ಧ ಗ್ರಾಮಸ್ಥರು ಕೆಂಡಾಮಂಡಲ:
ಶಿವಣ್ಣರ ಸಾವಿಗೆ ಅಕ್ಕೂರು ಠಾಣೆಯ ಪೊಲೀಸರೇ ನೇರ ಕಾರಣ ಎಂದು ಮಾದಾಪುರ ಗ್ರಾಮದ ಜನರು ಗಂಭೀರ ಆರೋಪ ಮಾಡುತ್ತಿದ್ದಾರೆ. ಶಿವಣ್ಣ ಮೃತದೇಹವನ್ನ ಗ್ರಾಮಕ್ಕೆ ತಂದು ಪ್ರತಿಭಟನೆ ನಡೆಸಿದರು. ವಿಷಯ ತಿಳಿದ ಅಕ್ಕೂರು ಪೊಲೀಸ್ ಠಾಣೆಯ ಪಿಎಸೈ ಭಾಸ್ಕರ್ ಹಾಗೂ ಗ್ರಾಮಾಂತರ ಸರ್ಕಲ್ ಇನ್ಸ್ ಪೆಕ್ಟರ್, ವಸಂತ್ ಸ್ಥಳಕ್ಕಾಗಮಿಸಿ ಗ್ರಾಮಸ್ಥರಿಗೆ ಸಮಾಧಾನ ಪಡಿಸಿದರು.
ಮಾದಾಪುರ ಹಾಗೂ ಅಕ್ಕಪಕ್ಕದ ಗ್ರಾಮದಲ್ಲಿ ಇದೇ ಕಳ್ಳರ ತಂಡ ಅನೇಕ ಬಾರಿ ಕಳ್ಳತನ ಮಾಡಿತ್ತು ಎನ್ನಲಾಗಿದೆ. ಈ ಬಗ್ಗೆ ದೂರು ಕೊಟ್ಟಿದ್ದರು ಕೂಡ ಯಾವುದೇ ಪ್ರಯೊಜನವಾಗಿಲ್ಲ, ಇನ್ನು ಗ್ರಾಮದಲ್ಲಿ ಗಾಂಜಾ ಮತ್ತು ಮಧ್ಯ ಮಾರಾಟ ಜೋರಾಗಿದ್ದು ಎಲ್ಲಾ ಗೊತ್ತಿದ್ದರು ಪೊಲೀಸರು ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ.