ರಾಮನಗರದಲ್ಲಿ ಹೈಟೆಕ್ ರೇಷ್ಮೆ ಮಾರುಕಟ್ಟೆಗೆ ಶಂಕುಸ್ಥಾಪನೆ, ಶೀಘ್ರವೇ ಚಾಲನೆ: ನಾರಾಯಣಗೌಡ
ರಾಮನಗರ, ಏಪ್ರಿಲ್ 26: ರಾಮನಗರ ಮತ್ತು ಚನ್ನಪಟ್ಟಣ ನಡುವಿನ ಪೋಲಿಸ್ ತರಬೇತಿ ಶಾಲೆಯ ಪಕ್ಕದಲ್ಲಿ ರಾಮನಗರ ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಾಣಕ್ಕೆ ಇನ್ನು 15 ದಿನಗಳಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಶೀಘ್ರದಲ್ಲೇ ಶಂಕುಸ್ಥಾಪನೆ ಮಾಡುವುದಾಗಿ ರೇಷ್ಮೆ ಖಾತೆ ಸಚಿವ ಡಾ. ನಾರಾಯಣ ಗೌಡ ತಿಳಿಸಿದರು.
ರೇಷ್ಮೆ ನಗರಿ ಖ್ಯಾತಿಯ ರಾಮನಗರದ ಸರ್ಕಾರಿ ರೇಷ್ಮೆ ಮಾರುಕಟ್ಟೆಗೆ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ. ನಾರಾಯಣ ಗೌಡ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿ, ರೇಷ್ಮೆ ಬೆಳೆಗಾರರು ಮತ್ತು ರೀಲರ್ಸ್ ಜೊತೆ ಚರ್ಚೆ ನಡೆಸಿದರು.
ರಾಮನಗರ: ಮೀನು ಕೃಷಿಗೆ ಮಾರಕವಾದ ತ್ಯಾಜ್ಯ; ವಿಷ ತ್ಯಾಜ್ಯಕ್ಕೆ ಸಾವಿರಾರು ಮೀನುಗಳು ಬಲಿ
ರಾಮನಗರ ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಾಣಕ್ಕೆ ಎಲ್ಲಾ ಸಿದ್ದತೆಗಳು ನಡೆಯುತ್ತಿವೆ. ಲೋಕೋಪಯೋಗಿ ಮುಖ್ಯ ಇಂಜಿನಿಯರ್ ನೇತೃತ್ವದಲ್ಲಿ ಕ್ಯಾಲುಕ್ಲೇಷನ್ ನಡೆಯುತ್ತಿದೆ. ಇನ್ನು 15 ದಿನಗಳಲ್ಲಿ ಶಾರ್ಟ್ ಟೈಮ್ ಕಾಲ್ ಮಾಡಿ, ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ, ಹೈಟೆಕ್ ರೇಷ್ಮೆ ಮಾರುಕಟ್ಟೆಗೆ ಗುದ್ದಲಿ ಪೂಜೆ ಮಾಡುವುದಾಗಿ ಸಚಿವ ಡಾ. ನಾರಾಯಣ ಗೌಡ ಹೇಳಿದರು.
ತಪ್ಪಿತಸ್ಥರದ ಹಣ ವಸೂಲಿ ಮಾಡುತ್ತೇವೆ
ಒಂದು ವರ್ಷದ ಹಿಂದೆ ರೇಷ್ಮೆ ಮಾರುಕಟ್ಟೆ ವ್ಯವಸ್ಥಾಪಕರ ಮುನ್ಸಿಬಸಯ್ಯ, ಸುಮಾರು 2 ಕೋಟಿ ಆನ್ಲೈನ್ ಪೇಮೆಂಟ್ ಹಣವನ್ನು ದುರುಪಯೋಗ ಮಾಡಿಕೊಂಡಿರುವ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ನಾರಾಯಣ ಗೌಡ, ಅಧಿಕಾರಿ ದುರುಪಯೋಗ ಮಾಡಿಕೊಂಡಿರುವುದು ರೈತರ ಶ್ರಮದ ಹಣ ಅದನ್ನು ಬಿಡುವ ಪ್ರಶ್ನೆಯೆ ಇಲ್ಲ. ಇಲಾಖೆ ಆತನಿಂದ ಈಗಾಗಲೇ 80 ಲಕ್ಷ ವಸೂಲಿ ಮಾಡಿದೆ ಆತನ ಅಸ್ತಿ ಮುಟ್ಟುಗೋಲು ಹಾಕಿಕೊಂಡಾದರೂ ರೈತರ ಹಣವನ್ನು ಮಾರುಕಟ್ಟೆಗೆ ಪಾವತಿ ಮಾಡಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ಕಲಬುರಗಿ ಮತ್ತು ಬೆಳಗಾವಿಯಲ್ಲಿ ರೇಷ್ಮೆ ಮಾರುಕಟ್ಟೆ ನಿರ್ಮಾಣ
ರೇಷ್ಮೆ ಬೇಸಾಯಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ರಾಜ್ಯದಲ್ಲಿ ಇನ್ನೂ ಎರಡು ಅಥವಾ ಮೂರು ಕಡೆ ರೇಷ್ಮೆ ಮಾರುಕಟ್ಟೆ ನಿರ್ಮಾಣ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ದೂರದ ಜಿಲ್ಲೆಗಳಿಂದ ರೈತರು ರಾಮನಗರದ ಮಾರುಕಟ್ಟೆಗೆ ಬರುತ್ತಾರೆ. ಹಾಗಾಗಿ ಕಲಬುರಗಿ ಮತ್ತು ಬೆಳಗಾವಿ ಭಾಗದಲ್ಲಿ ಮಾರುಕಟ್ಟೆ ನಿರ್ಮಾಣ ಮಾಡಲು 30 ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸಿದ್ದೇನೆ ಎಂದರು.
ಪೇಮೆಂಟ್ ವಿಳಂಬ ಮಾಡದಂತೆ ಅಧಿಕಾರಿಗಳಿಗೆ ಸೂಚನೆ
ಮಾರುಕಟ್ಟೆಯಲ್ಲಿ ಪೇಮೆಂಟ್ ವಿಳಂಬವಾಗುತ್ತಿರುವ ಬಗ್ಗೆ ರೇಷ್ಮೆ ಬೆಳೆಗಾರರು ಸಚಿವರ ಗಮನಕ್ಕೆ ತಂದರು. ತೂಕ ಹಾಕಿ ಮೂರ್ನಾಲ್ಕು ಗಂಟೆಯಾದರೂ ಪೇಮೆಂಟ್ ಆಗುತ್ತಿಲ್ಲ. ರೇಷ್ಮೆ ಮಾರಾಟ ಮಾಡಿ ಗಂಟೆಗಟ್ಟಲೇ ಕಾಯಬೇಕಾಗುತ್ತದೆ ಎಂದು ರೇಷ್ಮೆ ಬೆಳೆಗಾರರು ಸಚಿವ ನಾರಾಯಣ ಗೌಡರ ಮುಂದೆ ತಮ್ಮ ಬೇಸರ ವ್ಯಕ್ತಪಡಿಸಿದರು.
ಪೇಮೆಂಟ್ ವಿಳಂಬಕ್ಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವ ಡಾ. ನಾರಾಯಣಗೌಡ, ರೇಷ್ಮೆ ತೂಕ ಹಾಕಿದ ಕೂಡಲೇ ಪೇಮೆಂಟ್ ಆಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಚಿವ ಡಾ. ನಾರಾಯಣಗೌಡ ಭರವಸೆ
ಒಂದು ವೇಳೆ ಮಾರುಕಟ್ಟೆ ಸಿಬ್ಬಂದಿ ಹಾಗೂ ಅಧಿಕಾರಿಗಳು ರೀಲರ್ಸ್ಗಳ ಜೊತೆ ಹೊಂದಾಣಿಕೆಯಾಗಿ ರೇಷ್ಮೆ ಬೆಳೆಗಾರರಿಗೆ ಅನ್ಯಾಯ ಮಾಡಿದ್ದು ಗಮನಕ್ಕೆ ಬಂದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಚಿವರು ಎಚ್ಚರಿಕೆ ನೀಡಿದರು.
''ನಾನು ರೈತನ ಮಗ ಚಿಕ್ಕವಯಸ್ಸಿನಲ್ಲಿ ರೇಷ್ಮೆ ಬೆಳೆಯುತ್ತಿದ್ದಿವಿ. ಹಾಗಾಗಿ, ರೇಷ್ಮೆ ಬೆಳೆಗಾರರ ಎಲ್ಲಾ ಸಮಸ್ಯೆ ಬಗ್ಗೆ ಅರಿವಿದೆ. ರೈತರಿಗೆ ಹಾಗೂ ರೀಲರ್ಸ್ಗಳಿಗೆ ಯಾವುದೇ ಸಮಸ್ಯೆ, ಅನ್ಯಾಯವಾಗಲು ಬಿಡುವುದಿಲ್ಲ,'' ಎಂದು ರೇಷ್ಮೆ ಸಚಿವ ಡಾ. ನಾರಾಯಣಗೌಡ ಭರವಸೆ ನೀಡಿದರು.