ರಾಮನಗರ ಯುವತಿ ಹತ್ಯೆ ಪ್ರಕರಣ: ತಂದೆ, ತಮ್ಮನಿಂದಲೇ ಕೊಲೆ
ರಾಮನಗರ, ಅಕ್ಟೋಬರ್ 16: ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಕುದೂರಿನ ಬೆಟ್ಟಹಳ್ಳಿಯಲ್ಲಿ ನಡೆದ ಯುವತಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿಯನ್ನು ರಾಮನಗರ ಪೊಲೀಸರು ನೀಡಿದ್ದಾರೆ.
ರಾಮನಗರ ಎಸ್ಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಕೇಂದ್ರ ವಲಯದ ಐಜಿಪಿ ಸೀಮಂತ್ ಕುಮಾರ್ ಸಿಂಗ್, ಇದು ಮರ್ಯಾದಾ ಹತ್ಯೆಯಾಗಿದ್ದು, ಕೊಲೆಯಾದ ಹೇಮಲತಾ (19)ಳ ತಂದೆ ಹಾಗೂ ತಮ್ಮನೇ ಕೊಲೆ ಆರೋಪಿಗಳೆಂದು ಮಾಹಿತಿ ನೀಡಿದ್ದಾರೆ. ಮೃತ ಯುವತಿಯ ತಂದೆ ಕೃಷ್ಣಪ್ಪ (46), ತಮ್ಮ ಯೋಗೇಶ್ (19), ಮತ್ತೊಬ್ಬ ಯೋಗೇಶ್ ಸ್ನೇಹಿತ(ಬಾಲಪರಾಧಿ) ಬಂಧಿತ ಆರೋಪಿಗಳಾಗಿದ್ದಾರೆ.
ರಾಮನಗರದಲ್ಲಿ ನಾಪತ್ತೆಯಾಗಿದ್ದ 18ರ ಯುವತಿ ಶವವಾಗಿ ಪತ್ತೆ
ಅನ್ಯಜಾತಿಯ ಯುವಕನ ಜೊತೆ ಪ್ರೀತಿ ಸಂಬಂಧ ಹೊಂದಿದ್ದ ಯುವತಿ ಹೇಮಲತಾಳ ಹತ್ಯೆ ನಡೆದಿದೆ. ಇವರ ಪ್ರೀತಿ ವಿಚಾರವಾಗಿ ಹೇಮಲತಾಗೆ ಕುಟುಂಬಸ್ಥರು ಈ ಮುನ್ನವೇ ಎಚ್ಚರಿಕೆ ಕೊಟ್ಟಿದ್ದರು ಎನ್ನಲಾಗಿದೆ. ಹೇಮಲತಾಗೆ ಬುದ್ಧಿ ಹೇಳಲು ತೋಟದ ಕಡೆಗೆ ತಂದೆ ಹಾಗೂ ತಮ್ಮ ಕರೆದೊಯ್ದಾಗ, ಯುವತಿಯ ತಮ್ಮ ಯೋಗೇಶ್ ಹೇಮಲತಾ ಮೇಲೆ ಹಲ್ಲೆ ನಡೆಸಿದ್ದಾನೆ. ತಲೆಗೆ ತೀವ್ರವಾಗಿ ಪೆಟ್ಟು ಬಿದ್ದು ಯುವತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ. ಇದು ಮರ್ಯಾದಾ ಹತ್ಯೆ ಪ್ರಕರಣವಾಗಿದೆ ಎಂದು ಕೇಂದ್ರ ವಲಯ ಐಜಿಪಿ ಸೀಮಂತ್ ಕುಮಾರ್ ಸಿಂಗ್ ಹೇಳಿದರು. ಸುದ್ದಿಗೋಷ್ಟಿಯಲ್ಲಿ ರಾಮನಗರ ಎಸ್ಪಿ ಎಸ್.ಗಿರೀಶ್, ಎಎಸ್ಪಿ ರಾಮರಾಜನ್ ಭಾಗಿಯಾಗಿದ್ದರು.
ಘಟನೆ ವಿವರ
ಯುವತಿ ಮನೆಯಿಂದ ಕಾಣೆಯಾಗಿ ಮೂರು ದಿನಗಳ ನಂತರ ದೊಡ್ಡಪ್ಪನ ಜಮೀನಿನಲ್ಲಿ ಶವವಾಗಿ ಪತ್ತೆಯಾಗಿತ್ತು. ಪ್ರಿಯಕರನೇ ಕೊಲೆ ಮಾಡಿದ್ದಾನೆ ಎಂದು ಮೃತ ಹೇಮಲತಾ ಪೋಷಕರೇ ಆರೋಪಿಸಿದ್ದರು. ಅಲ್ಲದೇ ಹೇಮಲತಾ ಕಾಣೆಯಾಗಿರುವ ಬಗ್ಗೆ ಕುದೂರು ಪೊಲೀಸ್ ಠಾಣೆಯಲ್ಲಿ ಪೋಷಕರು ದೂರು ಸಲ್ಲಿಸಿದ್ದರು.
ಪೋಷಕರೇ ಪೊಲೀಸ್ ದೂರು ನೀಡಿದ್ದರು
ಪೋಷಕರು ನೀಡಿದ ದೂರು ದಾಖಲಿಸಿಕೊಂಡ ಕುದೂರು ಪೊಲೀಸರು ತನಿಖೆ ಕೈಗೊಂಡ ಬೆನ್ನಲ್ಲೇ, ಅ.10ರಂದು ಶನಿವಾರ ಬೆಳಗ್ಗೆ ಸ್ಥಳೀಯರು ಹೇಮಲತಾಗಾಗಿ ಹುಡುಕಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಜಮೀನಿನ ಪಕ್ಕದಲ್ಲೇ ಹುಡುಗಿಯ ಒಂದು ಚಪ್ಪಲಿ ಸಿಕ್ಕಿದೆ. ಅಕ್ಕಪಕ್ಕದಲ್ಲಿ ಹುಡುಕಾಡಿದಾಗ ರಕ್ತಸಿಕ್ತವಾದ ಕಲ್ಲು ಪತ್ತೆಯಾಗಿದೆ. ಅಲ್ಲಿಂದ ಮುಂದೆ ನೋಡುತ್ತಾ ಹೋದಂತೆ ಹೇಮಲತಾ ಸಂಬಂಧಿ ರವೀಂದ್ರಕುಮಾರ್ ಜಮೀನಿನಲ್ಲೇ ಮೃತದೇಹ ಪತ್ತೆಯಾಗಿತ್ತು.
ಯುವತಿಯ ಕುಟುಂಬದವರಿಂದಲೇ ಹತ್ಯೆ
ಕುದೂರು ಕಾಲೇಜಿನಲ್ಲಿ ಪ್ರಥಮ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದ ಹೇಮಲತಾ ಅದೇ ಗ್ರಾಮದ ಪುನೀತ್ ಎಂಬಾತನನ್ನು ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದಳು. ಅನ್ಯ ಜಾತಿಯ ಯುವಕನನ್ನು ಪ್ರೀತಿಸಿದ್ದಕ್ಕಾಗಿ ಯುವತಿಯ ಕುಟುಂಬದವರಿಂದಲೇ ಹತ್ಯೆಯಾಗಿದೆ. ದೊಡ್ಡಪ್ಪನ ಜಮೀನನಲ್ಲಿ ಹೇಮಲತಾ ಶವ ಸಿಕ್ಕಿತ್ತು.
Recommended Video
ಸಿಬಿಐ ತನಿಖೆಗೆ ನೀಡುವಂತೆ ಒತ್ತಾಯಿಸಿದ್ದರು
ಅನ್ಯಜಾತಿಯ ಯುವಕನ ಪ್ರೇಮ ಪಾಶದಲ್ಲಿ ಸಿಲುಕಿದ್ದ ಮೃತ ಹೇಮಲತಾಳನ್ನು ಮರ್ಯಾದೆಗೆ ಅಂಜಿ, ಮೃತಳ ಪೋಷಕರೇ ಹತ್ಯೆ ಮಾಡಿದ್ದಾರೆ ಎಂದು ಹೇಮಲತಾಳ ಪ್ರೇಮಿಯ ತಾಯಿ ಆರೋಪಿಸಿ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡುವಂತೆ ಒತ್ತಾಯಿಸಿದ್ದರು. ಮೃತ ಹೇಮಲತಾ ಪ್ರೇಮಿಯ ತಾಯಿ ರತ್ನಮ್ಮ ಮಾತನಾಡಿ, ನನ್ನ ಮಗ ತಪ್ಪು ಮಾಡಿದರೆ ನಾನೇ ಮುಂದೆ ನಿಂತು ಶಿಕ್ಷೆ ಕೊಡಿಸುತ್ತೇನೆ. ಇಲ್ಲ ಸಲ್ಲದ ಆರೋಪಗಳನ್ನು ನನ್ನ ಮಗನ ಮೇಲೆ ಮಾಡುತ್ತಿದ್ದಾರೆ ಎಂದು ಹೇಳಿದ್ದರು.