ರಾಮನಗರ ಜಿಲ್ಲೆಯಲ್ಲಿ ಅವಾಂತರ ಸೃಷ್ಟಿಸಿದ ಬಿರುಗಾಳಿ ಸಹಿತ ಭಾರೀ ಮಳೆ
ರಾಮನಗರ, ಏಪ್ರಿಲ್ 16: ಬಿಸಿಲಿನ ಝಳಕ್ಕೆ ತತ್ತರಿಸಿದ್ದ ರಾಮನಗರ ಜಿಲ್ಲೆಯ ಜನರಿಗೆ ಕಳೆದ ಎರಡು ದಿನಗಳಿಂದ ಸುರಿದ ಭಾರೀ ಮಳೆ ವಾತಾವರಣವನ್ನು ತಂಪು ಮಾಡಿದ್ದು, ಜನರಲ್ಲಿ ಹರ್ಷ ತಂದಿದೆ. ಹಾಗೆಯೇ ಹಲವೆಡೆ ವರುಣನ ಪ್ರತಾಪಕ್ಕೆ ಹಲವರ ಬಾಳಿನಲ್ಲಿ ಕಹಿ ಅನುಭವ ಮೂಡಿಸಿದೆ.
ಗುರುವಾರ ಸಂಜೆ ಸುರಿದ ಬಿರುಗಾಳಿ ಸಹಿತ ಮಳೆಗೆ ಫಲವತ್ತಾಗಿ ಬೆಳೆದಿದ್ದ ಬಾಳೆ ಫಸಲು ಸಂಪೂರ್ಣ ಉರುಳಿ ಬಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿರುವ ಘಟನೆ ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿನ ಸೀಗೇಕೋಟೆ ಗ್ರಾಮದಲ್ಲಿ ನಡೆದಿದೆ.
ಯುಗಾದಿಗೆ ವರ್ಷಧಾರೆ ಸಿಂಚನ: ಮೈಸೂರು-ಕೊಡಗು ಜನರಲ್ಲಿ ಸಂತಸ
ಕನಕಪುರ ತಾಲ್ಲೂಕಿನ ಸೀಗೇಕೋಟೆ ಗ್ರಾಮದ ಸುಜಯ ಮೂರ್ತಿ ಎಂಬುವರಿಗೆ ಸೇರಿದ ಮೂರು ಎಕರೆ ಬಾಳೆ ತೋಟ ಗುರುವಾರ ಸಂಜೆ ಸುರಿದ ಬಿರುಗಾಳಿ ಸಹಿತ ಭಾರೀ ಮಳೆಗೆ ಸಿಕ್ಕು ಸಂಪೂರ್ಣ ನಾಶವಾಗಿವೆ. ಇನ್ನೇನು ಕಟಾವಿಗೆ ಬರಬೇಕಿದ್ದ ಬಾಳೆಗೊನೆಗಳು ಮಣ್ಣು ಪಾಲಾಗಿದ್ದು, ಇದರಿಂದ ರೈತ ಸುಜಯ ಮೂರ್ತಿಯವರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.
ಇನ್ನು ಚನ್ನಪಟ್ಟಣ ತಾಲ್ಲೂಕಿನ ಬೇವೂರು ಗ್ರಾಮದಲ್ಲಿ ಭಾರೀ ಮಳೆಗೆ ಬೃಹತ್ ಮರ ಉರುಳಿ ಬಿದ್ದು, ಸಂಚಾರಕ್ಕೆ ಹಲವು ಗಂಟೆಗಳ ಕಾಲ ತೊಂದರೆಯಾಗಿತ್ತು. ಕೊಂಡಬಳ್ಳಿ ಭಾಗದ ಕೆಲ ಗ್ರಾಮಗಳಲ್ಲಿ ಭಾರೀ ಬಿರುಗಾಳಿಗೆ ಮನೆ ಹೆಂಚುಗಳು ಹಾರಿಹೋಗಿ ಜನರು ಸಂಕಷ್ಟ ಅನುಭವಿಸಿದ್ದಾರೆ.
Recommended Video
ಒಟ್ಟಾರೆ ಯುಗಾದಿ ಹಬ್ಬದ ಸಂಭ್ರಮದ ನಡುವೆ ಎರಡು ದಿನ ಸುರಿದ ಭಾರೀ ಮಳೆ ಕೆಲವರಿಗೆ ಬೆಲ್ಲದ ಸಿಹಿ ನೀಡಿದರೆ, ಮತ್ತೆ ಕೆಲವರಿಗೆ ಬೇವಿನ ಕಹಿ ನೀಡಿದ್ದು ಸುಳ್ಳಲ್ಲ.