ಮಳೆ ಅಬ್ಬರ: ಚನ್ನಪಟ್ಟಣ, ರಾಮನಗರಗಳಲ್ಲಿ ಕುಡಿಯುವ ನೀರು ಸರಬರಾಜು ಬಂದ್
ರಾಮನಗರ, ಆಗಸ್ಟ್, 03: ಕಳೆದ ಎರಡು ದಿನಗಳಿಂದ ಭಾರಿ ಮಳೆ ಸುರಿದ ಕಾರಣ ರಾಮನಗರ ಜಿಲ್ಲೆಯ ಕೆರೆ ಕಟ್ಟೆ ಹಾಗೂ ಜಲಾಶಯಗಳು ಭರ್ತಿಯಾಗಿದ್ದು, ಜನ ಜೀನಜೀವನ ಅಸ್ತವ್ಯಸ್ತವಾಗಿದೆ. ಇನ್ನು ಮಳೆಯ ಅವಾಂತರದಿಂದ ರಾಮನಗರ ಮತ್ತು ಚನ್ನಪಟ್ಟಣ ನಗರಗಳಲ್ಲಿ ಕುಡಿಯುವ ನೀರಿನ ಸರಬರಾಜು ಬಂದ್ ಆಗಿದೆ.
ರಾಮನಗರ ಹಾಗೂ ಚನ್ನಪಟ್ಟಣ ನಗರದ ಬಡವಾಣೆಗಳಿಗೆ ಟಿ.ಕೆ.ಹಳ್ಳಿಯಲ್ಲಿರುವ ಶಿಂಷಾ ನದಿ ಮೂಲದಿಂದ ಕಾವೇರಿ ನೀರನ್ನು ಶುದ್ಧೀಕರಿಸಿ ಸರಬರಾಜು ಮಾಡಲಾಗುತಿತ್ತು. ಕಳೆದ ಎರಡು ದಿನಗಳಿಂದ ಭಾರಿ ಮಳೆಯಾಗಿ ಟಿ.ಕೆ. ಹಳ್ಳಿಯಲ್ಲಿರುವ ಶಿಂಷಾ ನದಿಯ ನೀರಿನ ಹರಿವು ಹೆಚ್ಚಾಗಿ ಪ್ರವಾಹ ಸ್ಥತಿ ನಿರ್ಮಾಣವಾಗಿದೆ. ಆದ್ದರಿಂದ ಚನ್ನಪಟ್ಟಣ ಮತ್ತು ರಾಮನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಜಲಶುದ್ಧೀಕರಣ ಘಟಕ ಹಾಗೂ ವಿದ್ಯುತ್ ಸ್ಥಾವರಗಳು ಜಲಾವೃತವಾಗಿವೆ. ನಂತರ ಅಲ್ಲಿ ತಾಂತ್ರಿಕ ಕಾರಣದಿಂದ ನೀರು ಸರಬರಾಜನ್ನು ಅನಿವಾರ್ಯವಾಗಿ ಸ್ಥಗಿತಗೊಳಸಲಾಗಿದೆ ಎಂದು ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ.
ಮಾಗಡಿ ತಾಲೂಕಿನ ಮಂಚನಬೆಲೆ ಜಲಾಶಯ ಭರ್ತಿಯಾಗಿದ್ದು, ಹೆಚ್ಚಿನ ಪ್ರಮಾಣದ ನೀರನ್ನು ಅರ್ಕಾವತಿ ನದಿ ಪಾತ್ರಕ್ಕೆ ಬಿಡಲಾಗಿದೆ. ಇದರಿಂದ ಅರ್ಕಾವತಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿ, ದ್ಯಾವರಸೇಗೌಡನ ದೊಡ್ಡಿ ಬಳಿ ರಾಮನಗರದ ವಾರ್ಡ್ ಸಂಖ್ಯೆ 1ರಿಂದ 10 ಮತ್ತು 12ನೇ ವಾರ್ಡ್ಗಳಿಗೆ ಕುಡಿಯುವ ನೀರು ಸರಬರಾಜು ಪಂಪಿನ ಯಂತ್ರಗಾರವನ್ನು ಸ್ಥಗಿತಗೊಳಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯಂತ್ರೋಪಕರಣಗಳ ಘಟಕಗಳು ಜಲಾವೃತವಾದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಇಂದಿನಿಂದ ಸುಮಾರು 3 ದಿನಗಳವರೆಗೆ ಚನ್ನಪಟ್ಟಣ ಹಾಗೂ ರಾಮನಗರಗಳಿಗೆ ನೀರು ಸರಬರಾಜು ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಟಿ.ಕೆ. ಹಳ್ಳಿಯಲ್ಲಿರುವ ಶಿಂಷಾ ನದಿ, ಅರ್ಕಾವತಿ ನದಿಯ ನೀರಿನ ಹರಿವು ಕಡಿಮೆಯಾದ ನಂತರ ಸಾರ್ವಜನಿಕರಿಗೆ ಎಂದಿನಂತೆ ನೀರು ಸರಬರಾಜು ಮಾಡಲಾಗುವುದು. ಸಾರ್ವಜನಿಕರು ಚನ್ನಪಟ್ಟಣ ನಗರಸಭೆ, ರಾಮನಗರ ನಗರಸಭೆ ಹಾಗೂ ಜಲಮಂಡಳಿಯೊಂದಿಗೆ ಸಹಕರಿಸಲು ಕೋರಿ ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಪ್ರಕಟಣೆ ಹೊರಡಿಸಿದೆ.