ರಾಮನಗರದಲ್ಲಿ ವರುಣನ ಆರ್ಭಟ, ಜನರು ತತ್ತರ
ರಾಮನಗರ, ಆಗಸ್ಟ್, 03: ರಾಮನಗರದಲ್ಲಿ ಭಾರೀ ಮಳೆ ಸುರಿದ ಕಾರಣ ಹಲವೆಡೆ ಅವಾಂತರ ಸೃಷ್ಟಿಯಾಗಿದೆ. ರಾಮನಗರ, ಚನ್ನಪಟ್ಟಣ ಹಾಗೂ ಕನಕಪುರದ ತಾಲ್ಲೂಕುಗಳಲ್ಲಿ ಕೆರೆ-ಕಟ್ಟೆ, ಜಲಾಶಯಗಳು ತುಂಬಿ ಹರಿಯುತ್ತಿದ್ದು, ಜಿಲ್ಲೆಯಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲೆಯ ಮಂಚನಬೆಲೆ ಹಾಗೂ ಕಣ್ವ ಜಲಾಶಯಗಳಿಂದ ನೀರು ಹೊರ ಬಿಡಲಾಗುತ್ತಿದೆ. ಮಂಚನಬೆಲೆ ಜಲಾಶಯದಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ಸುಮಾರು 6 ಸಾವಿರ ಕ್ಯೂಸೆಕ್ ನೀರನ್ನು ಅರ್ಕಾವತಿ ನದಿಗೆ ಬಿಡಲಾಗಿದೆ. ರಾಮನಗರ ಮಧ್ಯ ಭಾಗದಲ್ಲಿ ಹಾದು ಹೋಗುವ ಅರ್ಕಾವತಿ ನದಿ ತುಂಬಿ ಹರಿಯುತ್ತಿದ್ದು, ನಗರದ ನಿವಾಸಿಗಳಿಗೆ ಸಂಕಷ್ಟ ಎದುರಾಗಿದೆ.
ರಾಮನಗರ ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯ: ಹಾವು ಕಚ್ಚಿ ಆಸ್ಪತ್ರೆ ಸೇರಿದ ಪೌರ ಕಾರ್ಮಿಕ
ರಾಮನಗರದ ಹೊರವಲಯದಲ್ಲಿರುವ ಭಕ್ಷಿ ಕೆರೆ ಕೋಡಿ ಬಿದ್ದ ಪರಿಣಾಮ ಸೀರಳ್ಳದಲ್ಲಿ ಭಾರೀ ಪ್ರಮಾಣದ ನೀರು ಹರಿಯುತ್ತಿದೆ. ಇಲ್ಲಿ ಯಾವುದೇ ತಡೆಗೋಡೆಗಳು ನಿರ್ಮಾಣವಾಗಿಲ್ಲ. ಹಳ್ಳದಲ್ಲಿ ಸರಾಗವಾಗಿ ನೀರು ಹರಿಯದ ಕಾರಣ ಮಂಗಳವಾರ ಬೆಳಗ್ಗೆ ಹಳ್ಳದ ನೀರು ಟಿಪ್ಪು ಶಾಲೆಯ ಬಳಿ ಇರುವ ಮನೆಗಳು, ರೇಷ್ಮೆ ರೀಲಿಂಗ್ ಘಟಕಗಳು, ಅಂಗಡಿಗಳಿಗೆ ನುಗ್ಗಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.
ಕೋಡಿ ಬಿದ್ದ ಭಕ್ಷಿ ಕೆರೆ
ರಾಮನಗರದ ಹೊರವಲಯದಲ್ಲಿರುವ ಭಕ್ಷಿ ಕೆರೆ ಕೋಡಿ ಬಿದ್ದ ಪರಿಣಾಮ ಸೀರಳ್ಳದಲ್ಲಿ ದಿಢೀರ್ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿ ಸಮೀಪದ ಮನೆಗಳಿಗೆ ನೀರು ನುಗ್ಗಿದೆ. ಹಾಸಿಗೆ, ಫ್ರಿಡ್ಜ್, ಲ್ಯಾಪ್ಟಾಪ್, ಪುಸ್ತಕ ಮುಂತಾದ ವಸ್ತುಗಳು ನೀರು ಪಾಲಾಗಿವೆ. ಅದೃಷ್ಠವಶಾತ್ ಯಾವುದೇ ಪ್ರಾಣ ಹಾನಿ ಆಗಿಲ್ಲ. ಹಳ್ಳದ ನೀರಿನ ಜೊತೆಗೆ ಮನೆಗಳಿಗೆ ಹಾವುಗಳು ಹರಿದು ಬಂದ ಪರಿಣಾಮ ಜನರು ಆತಂಕಗೊಂಡಿದ್ದಾರೆ.
ಕಣ್ವ ಜಲಾಶಯ ಭರ್ತಿ
ಜಿಲ್ಲೆಯ ಅತಿ ದೊಡ್ಡ ಕಣ್ವ ಜಲಾಶಯ ಕಳೆದ ಕೆಲ ದಿನಗಳಿಂದ ಸುರಿದ ನಿರಂತರ ಮಳೆಗೆ ಭರ್ತಿಯಾಗಿದೆ. ಆಟೋಮ್ಯಾಟಿಕ್ ಸೈಪನ್ ಸಿಸ್ಟಂ ಮೂಲಕ ಭಾರೀ ಪ್ರಮಾಣದ ನೀರು ಹೋರ ಹೋಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು 4 ಕ್ರಸ್ಟ್ ಗೇಟ್ಗಳ ಮೂಲಕ ಮೂರು ಸಾವಿರ ಕ್ಯೂಸೆಕ್ ನೀರನ್ನು ನದಿ ಪಾತ್ರಕ್ಕೆ ಹರಿಸುತ್ತಿದ್ದಾರೆ. ಕಳೆದ 20 ವರ್ಷಗಳ ಹಿಂದೆ ಕಣ್ವ ಜಲಾಶಯ ತುಂಬಿ ಎರಡು ಬಾರಿ ಆಟೋಮ್ಯಾಟಿಕ್ ಸೈಪನ್ ಆಗಿದ್ದನ್ನು ಬಿಟ್ಟರೆ, ಈ ಬಾರಿ ಮತ್ತೆ ಭರ್ತಿಯಾಗಿದೆ. ಜಲಾಶಯದಿಂದ ನದಿಗೆ ನೀರು ಬಿಡುತ್ತಿರುವ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಹಳ್ಳಿಗಳ ಜನರಿಗೆ ಜಾಗ್ರತೆಯಾಗಿರಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.
ಕಾಮಗಾರಿಯಲ್ಲಿ ನಿರ್ಲಕ್ಷ್ಯ
ಮಳೆ ಅಬ್ಬರಕ್ಕೆ ಮೈಸೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ 275ರಲ್ಲಿ ಬಸವನಪುರ ಬಳಿ ಅಂಡರ್ಪಾಸ್ಗೆ ಮಳೆ ನೀರು ನುಗ್ಗಿ ವಾಹನ ಸಂಚಾರದಲ್ಲಿ ವ್ಯತ್ಯಯ ಆಗಿದೆ. ಆದ್ದರಿಂದ ಬೆಂಗಳೂರು ಹಾಗೂ ಮೈಸೂರು ಮಾರ್ಗವಾಗಿ ಹೋಗುವ ವಾಹನಗಳು ಸುತ್ತಿ ಬಳಸಿ ಕ್ರಮಿಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿತ್ತು. ಹೆದ್ದಾರಿ ಕಾಮಗಾರಿಯನ್ನು ಅವೈಜ್ಞಾನಿಕವಾಗಿ ಮಾಡಿರುವುದೇ ಅವಾಂತರಕ್ಕೆ ಪ್ರಮುಖ ಕಾರಣ ಎಂದು ಸಾರ್ವಜನಿಕರು ಆರೋಪಿಸಿದರು.
ಹೆದ್ದಾರಿ ಕಾಮಗಾರಿಯಿಂದ ತೊಂದರೆ
ಮೊದಲ ಮಳೆಗೆ ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯ ನೈಜ ಕರಾಳ ರೂಪ ಬಯಲಾಗಿದೆ. ರಾಷ್ಟ್ರೀಯ ಹೆದ್ದಾರಿ 275ರ ಮಾರ್ಗದ ಅಂಡರ್ ಪಾಸ್ಗಳಾದ ಶೇಷಗಿರಿಹಳ್ಳಿ, ತಮ್ಮಣ್ಣನದೊಡ್ಡಿ, ಕೆಂಪನಹಳ್ಳಿ, ದ್ಯಾವರಸೇಗೌಡನದೊಡ್ಡಿ ಹಾಗೂ ಬಿಳಗುಂಬ ಅಂಡರ್ ಪಾಸ್ಗಳಲ್ಲೂ ಇದೇ ಪರಿಸ್ಥಿತಿ ಆಗಿದೆ. ಬಿಳಗುಂಬದಿಂದ ರಾಮನಗರಕ್ಕೆ ಸಂಪರ್ಕ ಕಲ್ಪಿಸುವ ಕೆಳ ಸೇತುವೆಯು ಸಂಪೂರ್ಣ ಜಲಾವೃತವಾಗಿವೆ. ನೀರು ಸರಾಗವಾಗಿ ಅರಿಯದೆ ನಿಂತಲ್ಲೇ ನಿಂತು ವಾಹನ ಸಂಚಾರಕ್ಕೆ ಅಡೆತಡೆಯಾಗಿದೆ.