ಭಾರೀ ಮಳೆ: ಮಾಗಡಿಯಲ್ಲಿ ಗೋಡೆ ಕುಸಿದು ಮಕ್ಕಳು ಸಾವು
ರಾಮನಗರ, ಆಗಸ್ಟ್, 07: ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಸೋಲೂರಿನಲ್ಲಿ ಭಾರೀ ಮಳೆಯಿಂದಾಗಿ ದನದ ಕೊಟ್ಟಿಗೆಯ ಗೋಡೆ ಕುಸಿದು ನೇಪಾಳ ಮೂಲದ 4 ವರ್ಷದ ಪರ್ಭಿನ್ ಮತ್ತು 3 ವರ್ಷದ ಇಷಿಕಾ ಎನ್ನುವ ಪುಟ್ಟ ಕಂದಮ್ಮಗಳು ಮೃತಪಟ್ಟಿವೆ.
ಜೀವನದ ತುತ್ತಿನ ಚೀಲ ತುಂಬಿಸಿಕೊಳ್ಳಲು ದೂರದ ನೇಪಾಳದಿಂದ ಕೆಲಸ ಅರಸಿ ಬಂದಿದ್ದ ಎರಡು ಕುಟುಂಬಗಳ ಎರಡು ಮುದ್ದಾದ ಮಕ್ಕಳನ್ನು ಜವರಾಯನಂತೆ ಎರಗಿದ ಗೋಡೆ ಬಲಿ ತೆಗೆದುಕೊಂಡಿದೆ. ಎಂಥವರ ಕರುಳನ್ನು ಚುರಕ್ ಎನಿಸುವ ಘಟನೆ ರಾಷ್ಟ್ರೀಯ ಹೆದ್ದಾರಿ 75 , ನಿರಂಜನ್ ಗ್ರಾನೈಟ್ ಪಕ್ಕ ನಡೆದಿದೆ.
ನೇಪಾಳದಿಂದ ಕೆಲಸ ಅರಸಿ ಬಂದ ಮುಗ್ದ ಮಕ್ಕಳ ಕುಟುಂಬದವರು ರಾಮನಗರ ಜಿಲ್ಲೆಯ ಸೋಲೂರಿನಲ್ಲಿ ನೆಲೆಸಿದ್ದರು. ಜೀವನಕ್ಕಾಗಿ ರೂಪಿಸಿಕೊಂಡ ಶೆಡ್ ಮೇಲೆ ಕಳೆದ ರಾತ್ರಿ ಗೋಡೆ ಕುಸಿದು ಬಿದ್ದಿದ್ದು, ಅದರಡಿ ಮಲಗಿದ್ದ ಎರಡು ಮುಗ್ದ ಮಕ್ಕಳು ಅಸುನೀಗಿವೆ.
ಘಟನೆಯಲ್ಲಿ ಮೀನಾ ಮತ್ತು ಮೋನಿಶಾ ಎಂಬುವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದವು. ತಕ್ಷಣ ಗಾಯಾಳುಗಳನ್ನು ಮಾಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗಂಗರಾಮ್ ಎಂಬುವವರಿಗೆ ಸೇರಿದ ದನದ ಕೊಟ್ಟಿಗೆಗೆ ಹೊಂದಿಕೊಂಡಿದ್ದ ಕಾರ್ಮಿಕರ ಶೆಡ್ನಲ್ಲಿ ನೇಪಾಳ ಮೂಲದ ರಾಜೇಶ್ ಮತ್ತು ನಿತೇಶ್ ಎಂಬುವರ ಎರಡು ಕುಟುಂಬಗಳು ವಾಸ ಮಾಡುತ್ತಿದ್ದವು. ಬೆಳಗಿನ ಜಾವ ನಡೆದ ದುರ್ಘಟನೆಯಲ್ಲಿ ರಾಜೇಶ್ ಎಂಬುವರ 4 ವರ್ಷದ ಮಗ ಪರ್ಭಿನ್ ಹಾಗೂ ನಿತೇಶ್ ಎಂಬುವರ 3 ವರ್ಷದ ಮಗಳು ಇಷಿಕಾ ಮೃತಪಟ್ಟಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 75ರ ಗುಡೆಮಾರನಹಳ್ಳಿ ಹ್ಯಾಂಡ್ ಪೋಸ್ಟ್ ಹಾಗೂ ಸೋಲೂರು ಗ್ರಾಮದ ನಡುವಿನ ನಿರಂಜನ್ ಗ್ರಾನೈಟ್ ಪಕ್ಕದ ಜಮೀನಿನಲ್ಲಿ ಮುಬಿನ್ ಶರೀಪ್ ಎಂಬುವರಿಗೆ ಸೇರಿದ ಶೆಡ್ನಲ್ಲಿ ರಾಜೇಶ್ ಮತ್ತು ನಿತೇಶ್ ಎಂಬುವವರ ಎರಡು ಕುಟುಂಬದವರು ವಾಸ ಮಾಡುತ್ತಿದ್ದರು. ರಾಜೇಶ್ ಮತ್ತು ನಿತೇಶ್ ವಾಸಮಾಡುತ್ತಿದ್ದ ಶೆಡ್ಗೆ ಹೊಂದಿಕೊಂಡಿದ್ದ ಗಂಗರಾಮ್ ಎಂಬುವರ ದನದ ಕೊಟ್ಟಿಗೆಯ ಗೋಡೆ ಕುಸಿದು ದುರ್ಘಟನೆ ಸಂಭವಿಸದೆ.