ಭಾರಿ ಮಳೆಗೆ ಚನ್ನಪಟ್ಟಣದ ಹಲವೆಡೆ ಜಲಾವೃತ; ಯಾರ ಆದೇಶಕ್ಕೂ ಜಗ್ಗದ ಅಧಿಕಾರಿಗಳು
ಚನ್ನಪಟ್ಟಣ, ಅಕ್ಟೋಬರ್ 8: ಜಿಲ್ಲೆಯಾದ್ಯಂತ ಕಳೆದ ರಾತ್ರಿ ಸುರಿದ ಭಾರಿ ಮಳೆಯ ಪರಿಣಾಮ ಚನ್ನಪಟ್ಟಣ ನಗರದ ಕೆಲ ಬಡಾವಣೆಗಳು ಸಂಪೂರ್ಣ ಜಲಾವೃತವಾಗಿವೆ. ಇದೇ ಸ್ಥಳಗಳಿಗೆ ಕಳೆದ ತಿಂಗಳು ಕ್ಷೇತ್ರದ ಶಾಸಕರು ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಭೇಟಿ ನೀಡಿ ವೈಯಕ್ತಿವಾಗಿ ಪರಿಹಾರ ವಿತರಿಸಿ, ಅಧಿಕಾರಿಗಳಿಗೆ ತ್ವರಿತಗತಿಯಲ್ಲಿ ಕಾಮಗಾರಿ ಕೈಗೊಳ್ಳುವಂತೆ ಆದೇಶಿಸಿದ್ದರೂ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಕ್ರಮ ವಹಿಸಿಲ್ಲ.
ಇವರ ನಿರ್ಲಕ್ಷ್ಯಕ್ಕೆ ಇದೀಗ ಬಡಾವಣೆಗಳ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ನಗರದ ಆರ್ಎಂಸಿ ಬಡಾವಣೆ, ಬೀಡಿ ಕಾರ್ಮಿಕರ ಕಾಲೋನಿಯಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿ ದೊಡ್ಡ ಅವಾಂತರವನ್ನೇ ಸೃಷ್ಟಿಸಿದೆ. ಆರ್ಎಂಸಿ ಬಡಾವಣೆಯಲ್ಲಿ ಸರಿಸುಮಾರು 150ಕ್ಕೂ ಹೆಚ್ಚು ಮನೆಗಳಿವೆ. ಬೀಡಿ ಕಾರ್ಮಿಕರ ಕಾಲೋನಿಯಲ್ಲಿನ 300ಕ್ಕೂ ಹೆಚ್ಚು ಮನೆಗಳಲ್ಲಿ ಮುಸ್ಲಿಂ ಸಮುದಾಯದವರು ವಾಸ ಮಾಡುತ್ತಿದ್ದಾರೆ.
ಭಾರಿ ಮಳೆ ಮುನ್ಸೂಚನೆ: ಕರ್ನಾಟಕದ 23 ಜಿಲ್ಲೆಗಳಿಗೆ ಅಲರ್ಟ್
ಆದರೆ ಇದರಲ್ಲಿ ಶೇ.90 ಭಾಗದಷ್ಟು ಮನೆಗಳಿಗೆ ರಾತ್ರಿ ಸುರಿದ ಜೋರು ಮಳೆಯಿಂದ ನೀರು ನುಗ್ಗಿ ಮನೆಯಲ್ಲಿದ್ದ ವಸ್ತುಗಳು ಸಂಪೂರ್ಣ ಹಾಳಾಗಿವೆ. ಸುಮಾರು 13 ವರ್ಷಗಳಿಂದಲೂ ಈ ಸಮಸ್ಯೆ ಹಾಗೇ ಇದ್ದು, ಯಾವ ಅಧಿಕಾರಿಗಳೂ ಕ್ರಮ ಕೈಗೊಳ್ಳುತ್ತಿಲ್ಲವೆಂದು ಬಡಾವಣೆಯ ಜನರು ಬೇಸರ ವ್ಯಕ್ತಪಡಿಸಿದ್ದಾರೆ.
ಇದೇ ಸ್ಥಳಕ್ಕೆ ಕಳೆದ ಬಾರಿ ಮಳೆಯಾದಾಗ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಯವರು ನಗರಸಭೆಯ ಅಧಿಕಾರಿಗಳೊಂದಿಗೆ ಭೇಟಿ ಕೊಟ್ಟು ಮಳೆಯಿಂದ ತೊಂದರೆಗೆ ಸಿಲುಕಿದ 72 ಕುಟುಂಬಗಳಿಗೆ ಪ್ರತಿ ಕುಟುಂಬಕ್ಕೆ 5000 ರೂಪಾಯಿ ವೈಯಕ್ತಿಕ ಪರಿಹಾರ ನೀಡಿದ್ದರು. ಅಧಿಕಾರಿಗಳಿಗೆ ತ್ವರಿತವಾಗಿ ಇಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಸೂಚನೆ ನೀಡಿದ್ದರು. ಆದರೂ ಇಲ್ಲಿನ ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ವಹಿಸಿಲ್ಲವೆಂದು ಬಡಾವಣೆಯ ಜನರು ಆರೋಪಿಸಿದ್ದಾರೆ.
ಕಳೆದ ದಸರಾ ವೇಳೆ ಮೈಲಾರ ಲಿಂಗೇಶ್ವರ ಭವಿಷ್ಯ ನುಡಿದಿದ್ದೇನು, ಆಗಿದ್ದೇನು?
ಕಳೆದ ಸಮ್ಮಿಶ್ರ ಸರ್ಕಾರದ ಅವದಿಯಲ್ಲಿ ಎರಡು ಬಡಾವಣೆಗಳಲ್ಲಿ ರಾಜ ಕಾಲುವೆ ಮತ್ತು ಚರಂಡಿ ನಿರ್ಮಾಣಕ್ಕೆ ನಗರಸಭೆಗೆ ತಲಾ 10 ಕೋಟಿ ಅನುದಾನ ಬಿಡುಗಡೆ ಮಾಡಲಾಗಿತ್ತು. ಆದರೆ ಪ್ರಸ್ತುತ ಬಿಜೆಪಿ ಸರ್ಕಾರ ಅನುದಾನ ವಾಪಸ್ ಪಡೆದಿದೆ ಎಂದು ಗುತ್ತಿಗೆದಾರರು ಕಾಮಗಾರಿ ಪ್ರಾರಂಭಿಸಲು ಮುಂದಾಗುತ್ತಿಲ್ಲ. ಅಧಿಕಾರಿಗಳು ಮತ್ತು ಗುತ್ತಿಗೆದಾರರ ತಿಕ್ಕಾಟದಿಂದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ.