ಚನ್ನಪಟ್ಟಣ ಬಾಂಬ್ ಸ್ಫೋಟದ ಆರೋಪಿಗಳ ವಿಚಾರಣೆ ಮುಂದೂಡಿಕೆ
ರಾಮನಗರ, ಜೂನ್.12 : ಚನ್ನಪಟ್ಟಣದ ಕುವೆಂಪುನಗರದಲ್ಲಿ ಜುಲೈ 24, 2008 ರಲ್ಲಿ ನಡೆದಿದ್ದ ಬಾಂಬ್ ಬ್ಲಾಸ್ಟ್ ಹಾಗೂ ಜೀವಂತ ಬಾಂಬ್ ಪತ್ತೆ ಪ್ರಕರಣದ ವಿಚಾರಣೆ ಸೋಮವಾರದಿಂದ ಆರಂಭವಾಗಿದ್ದು, ಪ್ರಕರಣದ ಆರೋಪಿಗಳನ್ನು ರಾಮನಗರದ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಪರಪ್ಪನ ಅಗ್ರಹಾರದಿಂದ 9 ಜನ ಆರೋಪಿಗಳನ್ನು ಕರೆತಂದ ಪೊಲೀಸರು ರಾಮನಗರದ ಮೂರನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ಬೆಂಗಳೂರಿಗೂ ಮುನ್ನ ಚನ್ನಪಟ್ಟಣದಲ್ಲಿ ಸ್ಫೋಟ
ಇನ್ನು ನಾಸೀರ್, ಅಬ್ದುಲ್ ಖಲೀಲ್, ಮುಜೀಬ್, ಅಬ್ದುಲ್ಜಬ್ಬರ್, ಬದ್ರುದ್ದೀನ್, ಸರ್ಫುದ್ದೀನ್, ಎ.ಇ ಮುನಾಫ್, ಮಹಮದ್ ಹಾಗೂ ಸರ್ಫರಾಜ್ ನವಾಜ್ ಪ್ರಕರಣದ ಆರೋಪಿತರಾಗಿದ್ದು, ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದಿದ್ದ ಸ್ಫೋಟ ಪ್ರಕರಣದಲ್ಲೂ ಈ ಆರೋಪಿಗಳು ಭಾಗಿಯಾಗಿದ್ದರು ಎನ್ನಲಾಗಿದೆ.
ಇನ್ನು ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಗೋಪಾಲಕೃಷ್ಣ ರೈ ಅವರು ಸ್ಫೋಟದ ನಂತರ ದೊರೆತಿದ್ದ ಸ್ಫೋಟಕ ವಸ್ತುಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸದ ಕಾರಣ ವಿಚಾರಣೆಯನ್ನು ಮುಂದೂಡಿದರು.
ಮುಂದಿನ ತಿಂಗಳು ಜುಲೈ 2 ಹಾಗೂ 3ಕ್ಕೆ ವಿಚಾರಣೆಯನ್ನು ಮುಂದೂಡಲಾಗಿದೆ ಎಂದು ಸರ್ಕಾರಿ ಅಭಿಯೋಜಕ ರಘು ತಿಳಿಸಿದ್ದಾರೆ. ಸ್ಫೋಟದ ರೂವಾರಿ ಆರೋಪಿ ನಾಸೀರ್ ಇದೆಲ್ಲ ರಾಜಕೀಯದ ಕುತಂತ್ರದಿಂದ ನಡೆದಿದ್ದು, ನಾವು ಯಾವುದೇ ತಪ್ಪು ಮಾಡಿಲ್ಲ ಎಂದು ಮಾಧ್ಯಮಗಳ ಮುಂದೆ ಅಳಲು ತೊಡಿಕೊಂಡಿದ್ದಾನೆ.