ಕೊರೊನಾ ಬಗ್ಗೆ ಆತಂಕ ಬೇಡ ಎಂದ ಆರೋಗ್ಯ ಸಚಿವ ಶ್ರೀರಾಮುಲು
ರಾಮನಗರ, ಫೆಬ್ರವರಿ 04: ಜಗತ್ತನ್ನು ತಲ್ಲಣಗೊಳಿಸಿರುವ ಕೊರೊನಾ ವೈರಸ್ ಗೆ ರಾಜ್ಯದ ಜನತೆ ಆತಂಕ ಪಡುವ ಅಗತ್ಯವಿಲ್ಲ, ರಾಜ್ಯದಲ್ಲಿ ಈಗಾಗಲೇ ಎಲ್ಲಾ ಮುಂಜಾಗ್ರತೆಯ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದರು.
ರಾಮನಗರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಆರೋಗ್ಯ ಸಚಿವ ಶ್ರೀರಾಮುಲು, ಕರೋನಾ ವೈರಸ್ ಪತ್ತೆಗೆ ರಾಜ್ಯದಲ್ಲಿ 40 ತಂಡಗಳನ್ನು ರಚನೆ ಮಾಡಲಾಗಿದೆ, ಬಂದರು ಮತ್ತು ವಿಮಾನ ನಿಲ್ದಾಣಗಳಲ್ಲಿ ಹೊರ ರಾಜ್ಯ ಮತ್ತು ವಿದೇಶದಿಂದ ಬರುವವರ ತಪಾಸಣೆಯನ್ನು ಮಾಡಲಾಗುತ್ತಿದೆ. ಈಗಾಗಲೇ 47 ಮಂದಿ ತಪಾಸಣೆ ನಡೆದು 27 ಮಂದಿಯ ನೆಗೆಟಿವ್ ಅಂತ ವರದಿ ಬಂದಿದೆ, ಜನರು ಭಯ ಪಡುವುದು ಬೇಡ ಎಂದರು.
ಕೊರೊನಾ ವೈರಸ್ ಹುಟ್ಟು ಮತ್ತು ಸಾವಿನ ಸರಣಿ ಸುತ್ತ ಒಂದು ವರದಿ
ರಾಜ್ಯದ ಕರಾವಳಿ ಪ್ರದೇಶದಲ್ಲೂ ಕೊರೊನಾ ವೈರಸ್ ಪತ್ತೆಯಾಗಿಲ್ಲ, ನಮ್ಮದೇ ಬ್ಲಡ್ ಬ್ಯಾಂಕ್ ಗಳಲ್ಲಿ ತಪಾಸಣೆ ಮಾಡಿದ್ದೇವೆ ಯಾವುದೇ ವೈರಸ್ ಪತ್ತೆಯಾಗಿಲ್ಲ. ಇನ್ನೂ ಪ್ರತಿ ಜಿಲ್ಲಾ ಅಸ್ಪತ್ರೆಗಳಲ್ಲಿ ಕರೋನಾ ವೈರಸ್ ಚಿಕಿತ್ಸೆಗೆ ಬೆಡ್ ಗಳನ್ನು ಮೀಸಲಿಟ್ಟದ್ದೇವೆ, ಅದಕ್ಕೆಂದೇ ವಿಶೇಷ ವೈದ್ಯರ ತಂಡವನ್ನು ಸಿದ್ದಪಡಿಸಿದ್ದೇವೆ, ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದರು.
ಇನ್ನೂ ಸಚಿವ ಸಂಪುಟ ವಿಸ್ತರಣೆ ವಿಷಯವಾಗಿ ಮಾತನಾಡಿದ ಸಚಿವ ಶ್ರೀರಾಮುಲು, ಕ್ಯಾಬಿನೆಟ್ ವಿಸ್ತರಣೆಯ ಬಗ್ಗೆ ಪಕ್ಷ ಮತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೋಡಿಕೊಳ್ಳುತ್ತಾರೆ, ಪಕ್ಷದಲ್ಲಿ ಮೂಲ ಮತ್ತು ವಲಸಿಗ ಎಂಬ ಯಾವುದೇ ಬಣ ಇಲ್ಲಾ ಎಂದ ಸಚಿವ ಶ್ರೀರಾಮುಲು, ಯೋಗೇಶ್ವರ್ ಗೆ ಸಚಿವ ಸ್ಥಾನ ಸಿಗುವ ವಿಚಾರಕ್ಕೆ ಪಕ್ಷದಲ್ಲಿ ಎದ್ದಿರುವ ಭಿನ್ನಮತಕ್ಕೆ ಪ್ರತಿಕ್ರಿಯೆ ನೀಡದೇ, ಪಕ್ಷ ಮತ್ತು ಸಿಎಂ ಯಡಿಯೂರಪ್ಪನವರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.