ರಾಮನಗರದ SRS ಬೆಟ್ಟದಿಂದ ಜಿಗಿದು ಹೆಲ್ತ್ ಇನ್ಸ್ ಪೆಕ್ಟರ್ ಆತ್ಮಹತ್ಯೆ
ರಾಮನಗರ, ಫೆಬ್ರವರಿ 17: ಬೆಂಗಳೂರು ಮೂಲದ ವ್ಯಕ್ತಿ ರಾಮನಗರ ತಾಲ್ಲೂಕಿನ ರೇವಣಸಿದ್ದೇಶ್ವರ ಬೆಟ್ಟದಿಂದ ಜಿಗಿದು ಅತ್ಮಹತ್ಯೆಗೆ ಶರಣಾಗಿರುವ ಘಟನೆ ಮೂರು ದಿನಗಳ ನಂತರ ತಡವಾಗಿ ಬೆಳಕಿಗೆ ಬಂದಿದೆ.
ಬೆಂಗಳೂರಿನ ಯಲಹಂಕದಲ್ಲಿ ಆರೋಗ್ಯ ನಿರೀಕ್ಷಕನಾಗಿ ಕೆಲಸ ಮಾಡುತ್ತಿದ್ದ ಪ್ರಶಾಂತ್ (38) ಎಂಬುವವರೇ ಅತ್ಮಹತ್ಯೆಗೆ ಶರಣಾದ ವ್ಯಕ್ತಿ. ಇವರು ಬೆಂಗಳೂರಿನ ರುಕ್ಮಿಣಿ ನಗರದ ನಿವಾಸಿಯಾಗಿದ್ದು, ಕಳೆದ ಮೂರು ದಿನಗಳ ಹಿಂದೆ ಮನೆಯಿಂದ ಹೊರ ಹೋದವರು ಮನೆಗೆ ವಾಪಸು ಬಾರದ ಹಿನ್ನೆಲೆಯಲ್ಲಿ ಕುಟುಂಬದವರು ಪೀಣ್ಯ ಠಾಣೆಯಲ್ಲಿ ಪ್ರಶಾಂತ್ ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು.
ರಾಮನಗರಕ್ಕೆ ನೀಡಿದ ಅನುದಾನ ಸ್ಥಗಿತಗೊಳಿಸಿತಾ ಬಿಎಸ್ ವೈ ಸರ್ಕಾರ?
ಪ್ರಶಾಂತ್ ಪೋಷಕರ ದೂರಿನ ಮೇರೆಗೆ ಪ್ರಶಾಂತ್ ರವರ ಮೊಬೈಲ್ ಟ್ರ್ಯಾಕ್ ಮಾಡಿದ್ದ ಪೀಣ್ಯ ಪೊಲೀಸರಿಗೆ, ರಾಮನಗರದ ಎಸ್ಆರ್ಎಸ್ ಬೆಟ್ಟದಲ್ಲಿ ಕೊನೆಯ ಲೊಕೇಷನ್ ತೋರಿಸಿದೆ, ಮೊಬೈಲ್ ಟವರ್ ಲೊಕೇಷನ್ ಅಧಾರಿಸಿ SRS ಬೆಟ್ಟದ ಬಳಿ ಹುಡುಕಾಡಿದಾಗ ಪ್ರಶಾಂತ್ ರವರ ದ್ವಿಚಕ್ರ ವಾಹನ ಪತ್ತೆಯಾಗಿದೆ.
ನಂತರ ಬೆಟ್ಟದ ಸುತ್ತಮುತ್ತ ತಪಾಸಣೆ ಮಾಡಿದಾಗ ಪ್ರಶಾಂತ್ ಮೃತದೇಹ ಪತ್ತೆಯಾಗಿದೆ. ಪ್ರಶಾಂತ್ ಅತ್ಮಹತ್ಯೆಗೆ ಸ್ಪಷ್ಟವಾದ ಕಾರಣ ತಿಳಿದು ಬಂದಿಲ್ಲ. ಇನ್ನು ಈ ಸಂಬಂಧ ರಾಮನಗರ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.