ರಸ್ತೆ ಗುಂಡಿ ಮುಚ್ಚಲು ಇಟ್ಟಿದ್ದ 20,000 ಕೋಟಿ ರೂ. ಎಲ್ಲಿ ಹೋಯಿತು?: ಎಚ್ಡಿಕೆ ಪ್ರಶ್ನೆ
ರಾಮನಗರ, ಅಕ್ಟೋಬರ್ 4: "ಭಾನುವಾರ ರಾತ್ರಿ ಸುರಿದ ಮಹಾಮಳೆಯಿಂದ ಮತ್ತೆ ಬೆಂಗಳೂರು ತತ್ತರಿಸಿದೆ. ರಸ್ತೆಗಳಲ್ಲಿ ಗುಂಡಿಗಳು ಬಿದ್ದು ಜನ ಸಾಯುತ್ತಿದ್ದಾರೆ. ನಗರದಲ್ಲಿ ರಸ್ತೆ ಗುಂಡಿ ಮುಚ್ಚಲು 20 ಸಾವಿರ ಕೋಟಿ ರೂ. ಖರ್ಚು ಮಾಡಿದ್ದೇವೆ ಎಂದು ಸದನದಲ್ಲಿ ಸಿಎಂ ಹೇಳಿದ್ದರು. ಆ ಹಣ ಎಲ್ಲಿ ಹೋಯಿತು? ಎಲ್ಲಿ ಖರ್ಚಾಯಿತು?," ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರಶ್ನೆ ಮಾಡಿದರು.
ಜನತಾ ಪರ್ವ 1.0 ಹಾಗೂ ಮಿಷನ್ 123 ಗುರಿಯೊಂದಿಗೆ ರಾಮನಗರದ ಬಿಡದಿ ತೋಟದ ಮನೆಯಲ್ಲಿ ಹಮ್ಮಿಕೊಂಡಿರುವ ಜೆಡಿಎಸ್ ಕಾರ್ಯಾಗಾರದ ಐದನೇ ದಿನದ ಎಸ್ಸಿ, ಎಸ್ಟಿ ಹಾಗೂ ಹಿಂದುಳಿದ ವರ್ಗಗಳ ಕಾರ್ಯಗಾರಕ್ಕೆ ಚಾಲನೆ ನೀಡಿದ ನಂತರ ಮಾಧ್ಯಮಗಳ ಜತೆ ಎಚ್ಡಿಕೆ ಮಾತನಾಡಿದರು.
"ಒಂದೇ ದಿನ ಮಳೆ ನಗರದಲ್ಲಿ ದೊಡ್ಡ ಅನಾಹುತ ಉಂಟು ಮಾಡಿದೆ. ರಸ್ತೆಗಳ ಮೇಲೆ ನೀರು ನದಿಯಂತೆ ಹರಿದಿದ್ದು, ನಿರ್ವಹಣೆ ಕಳಪೆಯಾಗಿದೆ. ಹಾಗಾದರೆ ರಸ್ತೆಗಳಿಗೆ ತೆಗೆದಿಟ್ಟ ಹಣ ಎಲ್ಲಿ ಹೋಯಿತು? ಅಷ್ಟು ಹಣವನ್ನು ಯಾವುದಕ್ಕೆ ಬಳಕೆ ಮಾಡಿಕೊಂಡರು. ಅಷ್ಟು ಹಣ ವೆಚ್ಚ ಆಗಿರುವ ಬಗ್ಗೆ ಪತ್ರಿಕೆಗಳಲ್ಲಿ ವರದಿ ಬಂದಿದೆ. ಅದಕ್ಕೆ ಮುಖ್ಯಮಂತ್ರಿ ಪ್ರತಿಕ್ರಿಯೆ ಕೊಟ್ಟಿದ್ದರು. ಇದಕ್ಕೆ ಜನರಿಗೆ ಉತ್ತರ ಬೇಕಿದೆ," ಎಂದು ಮಾಜಿ ಸಿಎಂ ಎಚ್ಡಿಕೆ ನೇರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪ್ರಶ್ನೆ ಮಾಡಿದರು.
ಯಾವ ರೀತಿಯ ಅಭಿವೃದ್ಧಿ ಮಾಡಿದ್ದಾರೆ?
"ನಿನ್ನೆ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ನೂರಾರು ಕೋಟಿ ವೆಚ್ಚದ ಯೋಜನೆಗಳಿಗೆ ಸಿಎಂ, ಸಚಿವರು ಚಾಲನೆ ನೀಡಿದ್ದರು. ಆದರೆ ಸಂಜೆ ವೇಳೆಗೆ ಮಳೆ ಬಂದು ಆ ಕ್ಷೇತ್ರದಲ್ಲಿ ಆಗಿರುವ ಪ್ರಗತಿಯನ್ನು ಬೆತ್ತಲು ಮಾಡಿತು. ಮನೆಗಳಿಗೆ ನೀರು ನುಗ್ಗಿ ಜನ ಇಡೀ ರಾತ್ರಿ ಜಾಗರಣೆ ಮಾಡಿದರು. ಮಳೆ ನೀರಿನಲ್ಲಿ ಹಸು, ಕುರಿಗಳು ಕೊಚ್ಚಿಕೊಂಡು ಹೋಗಿವೆ. ಇವರು ಯಾವ ರೀತಿಯ ಅಭಿವೃದ್ಧಿ ಮಾಡಿದ್ದಾರೆ," ಎಂದು ಕುಮಾರಸ್ವಾಮಿ ತೀವ್ರ ತರಾಟೆಗೆ ತೆಗೆದುಕೊಂಡರು.
ಸಭೆ ನಡೆಸಲು ಕಾಂಗ್ರೆಸ್ ಪರ್ಮಿಷನ್ ಬೇಕಿತ್ತು
"ರಾಜರಾಜೇಶ್ವರಿನಗರ ಕ್ಷೇತ್ರ ಪ್ರಗತಿಗೆ ಹಲವಾರು ವರ್ಷಗಳಿಂದ ಕೋಟ್ಯಂತರ ರೂಪಾಯಿ ಹಣ ಹರಿದು ಬಂದಿದೆ. ಈ ಹಣ ಎಲ್ಲಿ ಹೋಯಿತು? ನಿರಂತರವಾಗಿ ಈ ಕ್ಷೇತ್ರಕ್ಕೆ ಹರಿದ ಹಣದ ಹೊಳೆ ಎತ್ತ ಹರಿಯಿತು? ಈ ಹಣವೂ ಸೇರಿ ಗುಂಡಿಗಳಿಗೆ ಖರ್ಚಾಗಿದೆ ಎಂದು ಸಿಎಂ ಹೇಳಿದ್ದ 20 ಸಾವಿರ ಕೋಟಿ ಹಣ ಏನಾಯಿತು ಎಂಬ ಮಾಹಿತಿ ಜನರಿಗೆ ಬೇಡವೇ? ಈ ಬಗ್ಗೆ ತನಿಖೆ ಆಗಲಿ," ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಒತ್ತಾಯ ಮಾಡಿದರು.
"ನಾನು ಸಮ್ಮಿಶ್ರ ಸರಕಾರದಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಬೆಂಗಳೂರು ಉಸ್ತುವಾರಿ ಕಾಂಗ್ರೆಸ್ ಪಕ್ಷದ ಕೈಲಿ ಇತ್ತು. ನಾನು ನಗರದ ಬಗ್ಗೆ ಒಂದು ಸಭೆ ಮಾಡಬೇಕಾದರೂ ಕಾಂಗ್ರೆಸ್ ನಾಯಕರ ಅಪ್ಪಣೆ ಬೇಕಾಗಿತ್ತು. ಆದರೆ ಅವರು ಒಪ್ಪುತ್ತಿರಲಿಲ್ಲ. ನಾನು ಸಿಎಂ ಆಗಿದ್ದಷ್ಟು ದಿನ ಬೆಂಗಳೂರು ರಿವ್ಯೂವ್ ಮೀಟಿಂಗ್ ಮಾಡುವ ಹಾಗಿರಲಿಲ್ಲ. ಇದು ಸತ್ಯ ಸಂಗತಿ," ಎಂದು ಮಾಜಿ ಮುಖ್ಯಮಂತ್ರಿ ಎಚ್ಡಿಕೆ ಮಾಹಿತಿ ನೀಡಿದರು.
ಪ್ರಚಾರ ಪ್ರಿಯ ಸರಕಾರ
"ಜನರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದರೆ ಸರಕಾರ ಪ್ರಚಾರದಲ್ಲಿ ಮುಳುಗಿದೆ. ಜಾಹೀರಾತುಗಳ ಮೂಲಕ ಸ್ವ ಪ್ರಶಂಸೆಯಲ್ಲಿ ತೇಲಾಡುತ್ತಿದೆ. ಮೋದಿ, ಬೊಮ್ಮಾಯಿ ಇಬ್ಬರೂ 'ನವ ಭಾರತಕ್ಕಾಗಿ ನವ ಕರ್ನಾಟಕ'ವೆಂದು ಪ್ರಚಾರ ಪಡೆಯುತ್ತಿದ್ದಾರೆ. ಸಿಎಂ ಬೊಮ್ಮಾಯಿಯೂ ಮೋದಿಯವರಂತೆ ಡ್ರೆಸ್ ಮಾಡಿಕೊಂಡು, ಫೋಟೋ ಶೂಟ್ ಮಾಡಿಸಿಕೊಂಡು ಬಸ್ ನಿಲ್ದಾಣಗಳಲ್ಲಿ ಜಾಹೀರಾತುಗಳಿಗೆ ಪೋಸು ಕೊಡುತ್ತಿದ್ದಾರೆ. ಇವರು ಏನು ಮಾಡಲು ಹೊರಟಿದ್ದಾರೆ? ನವ ಕರ್ನಾಟಕ ಏನು ಅನ್ನುವುದು ನನಗೇ ಇನ್ನೂ ಅರ್ಥವಾಗಿಲ್ಲ. ಇವರಾದರೂ ನಮಗೆ ಹೇಳಲಿ," ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
"ನೆಲಮಂಗಲದಲ್ಲಿ ಸಾರಿಗೆ ನೌಕರನ ಪತ್ನಿ, ಮಕ್ಕಳು ಆತ್ಮಹತ್ಯೆ ಮಾಡಿಕೊಂಡರು. ಉತ್ತರ ಪ್ರದೇಶದಲ್ಲಿ ಹಲವು ತಿಂಗಳಿನಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಮಳೆ ಪ್ರವಾಹದಲ್ಲಿ ಜನರ ಬದುಕು ಕೊಚ್ಚಿ ಹೋಗುತ್ತಿದೆ. ನವ ಭಾರತ ಎಂದರೆ ಇದೇನಾ?," ಎಂದು ಅವರು ಕಟುವಾಗಿ ಪ್ರಶ್ನೆ ಮಾಡಿದರು.
Recommended Video
ಉತ್ತರ ಪ್ರದೇಶ ಘಟನೆ ಅಕ್ಷಮ್ಯ
"ಉತ್ತರ ಪ್ರದೇಶದಲ್ಲಿ ರೈತರ ಮೇಲೆ ಕೇಂದ್ರದ ಮಂತ್ರಿಯ ಪುತ್ರ ವಾಹನ ಹರಿಸಿದ್ದಾರೆ. ಇದು ಹೇಯ ಮತ್ತು ಅಕ್ಷಮ್ಯ ಅಪರಾಧ. ನಂತರ ನಡೆದ ಪ್ರತಿಭಟನೆಯಲ್ಲಿ ಇನ್ನಷ್ಟು ರೈತರು ಸಾವನ್ನಪ್ಪಿದ್ದಾರೆ. ಇದೇನಾ ನವ ಭಾರತ? ಹಿಂದುತ್ವದ ಹೆಸರಿನಲ್ಲಿ ದೇಶವನ್ನು ಒಡೆಯಲು ಹೊರಟಿರುವ ಬಿಜೆಪಿ ನವಭಾರತ ಕಟ್ಟುತ್ತಿರುವುದು ಹೀಗೆ," ಎಂದು ಸರ್ಕಾರದ ವಿರುದ್ಧ ಕುಮಾರಸ್ವಾಮಿ ಕಟುವಾಗಿ ಟೀಕಿಸಿದರು.