ನಿಖಿಲ್ ಲಗ್ನ ಪತ್ರಿಕೆಯಲ್ಲಿ ಎಚ್ಡಿಕೆ ಭಾವುಕ ಸಂದೇಶವೇನಿದೆ?
ರಾಮನಗರ, ಫೆಬ್ರವರಿ 24: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ಸೀತಾರಾಮ ಕಲ್ಯಾಣ ಖ್ಯಾತಿಯ ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ಯವರ ಕಲ್ಯಾಣಕ್ಕೆ ಎಚ್ಡಿಕೆ ದಂಪತಿಗಳು ಇತ್ತೀಚಿಗೆ ಭೂಮಿ ಪೂಜೆ ಸಲ್ಲಿಸಿ ಸಪ್ತಪದಿ ಮಂಟಪ ನಿರ್ಮಾಣಕ್ಕೆ ಚಾಲನೆ ನೀಡಿದ ಬೆನ್ನಲ್ಲೇ ಮದುವೆ ಕರೆಯೋಲೆ ಸಿದ್ದಗೊಂಡಿದೆ.
ಮಾಜಿ ಸಿಎಂ ಕುಮಾರಸ್ವಾಮಿ ತಮ್ಮ ಮಗನ ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ತಮ್ಮ ಮನದಾಳದ ಮಾತುಗಳಲ್ಲಿ ಭಾವನಾತ್ಮಕವಾಗಿ ರಾಮನಗರ ಜಿಲ್ಲೆಯ ಜನರನ್ನು ಆಹ್ವಾನಿಸಿದ್ದಾರೆ.
ನಿಖಿಲ್ ಮದ್ವೆಗೆ ಜನತೆಯನ್ನು ಆಮಂತ್ರಿಸಿದ ಎಚ್ಡಿಕೆ ದಂಪತಿ
ಈಗಾಗಲೇ ಮದುವೆ ಆಮಂತ್ರಣ ಪತ್ರಿಕೆಯ ಮುದ್ರಣ ಕಾರ್ಯ ಮುಗಿದಿದ್ದು, ಲಗ್ನ ಪ್ರತಿಕೆಗಳನ್ನು ರಾಮನಗರ ಮತ್ತು ಚನ್ನಪಟ್ಟಣ ಎರಡು ಕ್ಷೇತ್ರದ ಪ್ರತಿ ಮನೆಗೂ ತಲುಪಿಸುವ ಜವಾಬ್ದಾರಿಯನ್ನು ಸ್ಥಳೀಯ ಮುಖಂಡರಿಗೆ ವಹಿಸಿದ್ದಾರೆ ಎನ್ನಲಾಗಿದೆ.
ಪತ್ರದಲ್ಲಿ ಏನಿದೆ.?
ನನ್ನ ಪ್ರೀತಿಯ ಎಲ್ಲರಿಗೂ ಸಪ್ರೇಮ ನಮಸ್ತೆ, ನಿಮಗೊಂದು ಪ್ರೀತಿಯ ಕರೆಯೋಲೆ, ನಾನು ಹುಟ್ಟಿದ್ದು ಹಾಸನ ಜಿಲ್ಲೆಯಲ್ಲಿ. ರಾಜಕೀಯವಾಗಿ ಹರಸಿ, ಆಶೀರ್ವದಿಸಿ, ರಾಜಕೀಯವಾಗಿ ಪುನರ್ಜನ್ಮ ನೀಡಿದವರು ನಾಡಿನ ಜನತೆ. ವಿಶೇಷವಾಗಿ ರಾಮನಗರ ಜಿಲ್ಲೆಯ ತಂದೆ-ತಾಯಂದಿರು, ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರು. ನಿಮಗೆಲ್ಲ ನಾನು ಮತ್ತು ನಮ್ಮ ಕುಟುಂಬ ಸದಾ ಋಣಿ. ರಾಜಕೀಯ ನನಗೊಂದು ಆಕಸ್ಮಿಕವಾಗಿ ಸಿಕ್ಕ ಬದುಕು. ಅದನ್ನು ನೀವು ಸಾಕಿ ಸಲಹುತ್ತಾ ಬಂದಿರುವ ನಿಮ್ಮಗಳ ಪ್ರೀತಿ ಸದಾ ಕೃತಜ್ಞತೆಯಿಂದ ಸ್ಮರಿಸುವಂತದ್ದು. ಈ ನಾಡಿನ ಜನರಿಂದ ಪಡೆದ ಅಧಿಕಾರ, ಗೌರವಗಳನ್ನು ನಿಮಗಾಗಿಯೇ ಸಮರ್ಪಿಸುತ್ತಾ ಬಂದಿದ್ದೇನೆ. ಅದರ ಹಕ್ಕು ರಾಜರು ನೀವೇ ಆಗಿರುತ್ತೀರಾ.
ನನ್ನ ಹೃದಯ ಮಿಡಿಯೋದು ಜನರಿಗಾಗಿ
ರಾಜಕೀಯ ಬದುಕಿನಲ್ಲಿ ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗುವ ಸೌಭಾಗ್ಯ ನಾಡಿನ ಜನತೆಯ ಮನೋಭಿಲಾಷೆಯಂತೆ ನನಗೆ ದಕ್ಕಿದ್ದು ನಿಮ್ಮಗಳ ಆಶೀರ್ವಾದದ ಫಲ. ಮುಖ್ಯಮಂತ್ರಿಯಾಗಿದ್ದುಕೊಂಡು ಸಾಮಾನ್ಯನಂತೆ ಬದುಕುವುದನ್ನು ಮರೆಯಲಿಲ್ಲ. ಅಸಹಾಯಕರು ಮತ್ತು ಬಡವರ ಬದುಕಿನ ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಆತ್ಮಸಾಕ್ಷಿಯಂತೆ ನಡೆದುಕೊಂಡಿದ್ದೇನೆ. ಇದನ್ನು ನನ್ನ ಆತ್ಮಬಲವೂ ದೌರ್ಬಲ್ಯವೂ ಎಂದು ಭಾವಿಸುವಲ್ಲಿ ಹಿಂಜರಿಕೆ ಇಲ್ಲ. ತನ್ನಂತೆಯೇ ಇರುವ ಮನುಷ್ಯರು ಕಷ್ಟ ಕೋಟಲೆಗಳಿಂದ ಕೊರಗುವುದ ಕಂಡಾಗ ನನ್ನ ಕರುಳು ಮಿಸುಕಾಡುತ್ತದೆ. ಹೀಗಾಗಿಯೇ ನನ್ನ ಪದವಿ, ಸ್ಥಾನ-ಮಾನ, ಸಂದರ್ಭಗಳ ಲೆಕ್ಕಿಸದೆ ಮತ್ತೆ ಮತ್ತೆ ನನ್ನ ಕಣ್ಣುಗಳು ನೀರಾಗಿ ಬಿಡುತ್ತವೆ. ಜನರಿಗಾಗಿ ಮಿಡಿದ ನನ್ನ ಪಾಲಿನ ಕರ್ತವ್ಯದಲ್ಲಿ ಎಷ್ಟು ಸಫಲ, ಎಷ್ಟು ವಿಫಲ ಎಂಬುದು ನಿಮ್ಮ ವಿವೇಚನೆಗೆ ಬಿಟ್ಟಿದ್ದು.
ಜನರ ಕಷ್ಟಗಳಿಗೆ ಸ್ಪಂದಿಸದ ನೋವು ಕಾಡುತ್ತಿದೆ
ಎರಡು ಸಲವೂ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿ ಆಗಿದ್ದರಿಂದ ನನ್ನ ಹೆಬ್ಬಯಕೆಯಂತೆ ಜನಸಾಮಾನ್ಯರ ಕಷ್ಟಗಳಿಗೆ ಗರಿಷ್ಠ ಮಟ್ಟದಲ್ಲಿ ಸ್ಪಂದಿಸಲು ಆಗಲಿಲ್ಲವೆಂಬ ನೋವು ಎರಡು ಬಾರಿ ಹೃದಯ ಚಿಕಿತ್ಸೆಗೆ ಒಳಗಾದ ನನ್ನನ್ನು ಈಗಲೂ ಕಾಡುತ್ತಿದೆ. ನನ್ನನ್ನು ಕಂಡರೆ ಅದ್ಯಾಕೋ ಪಕ್ಷಾತೀತವಾಗಿ ಜನಸಾಮಾನ್ಯರು ಬಲು ಇಷ್ಟಪಡುತ್ತಾರೆ. ಪ್ರೀತಿ ಎಂಬುದನ್ನು ದಕ್ಕಿಸಿಕೊಳ್ಳಲು ಪ್ರೀತಿಯನ್ನಷ್ಟೇ ಧರಿಸಿದಾಗ ಮಾತ್ರ ಸಾಧ್ಯ. ಕರುಣೆ ಸ್ನೇಹದ ಮನೋಗತವೇ ನಾನು ಸಾಮಾನ್ಯನೊಳಗೆ ಸಾಮಾನ್ಯನಂತೆ ಬದುಕಲು ಸಾಧ್ಯವಾಯಿತೇನೋ ಎಂಬ ತೃಪ್ತಿ ಇದೆ. ಈ ಬದುಕೆ ನನಗಿಷ್ಟ.
ನಿಮ್ಮ ಕುಟುಂಬದ ಮದುವೆಯೆಂದು ಎಲ್ಲರೂ ಬನ್ನಿ
ಈ ನಾಡಿನ ನಿಮ್ಮೆಲ್ಲರ ಪ್ರೀತಿಯನ್ನು ಕಣ್ತುಂಬಿಕೊಳ್ಳಲು, ಅದರೊಳಗೆ ಮಿಂದು ಮಗುವಾಗಲು ಅಪೂರ್ವವಾದ ಸಂದರ್ಭವೊಂದು ಕೂಡಿ ಬಂದಿದೆ. ಏಪ್ರಿಲ್ 17 ರಂದು ನನ್ನ ಮಗನ ವಿವಾಹ ರಾಮನಗರದಲ್ಲಿ ನಡೆಯಲಿದೆ. ಇದು ನಿಮ್ಮ'ಕುಮಾರಣ್ಣ'ನ ಮನೆಯ ಸಂಭ್ರಮ. ಈ ಸಮಾರಂಭದಲ್ಲಿ ನೀವಿದ್ದು, ನನ್ನ ಮಗ-ಸೊಸೆಯನ್ನು ಹರಸಿದರೆ, ನಿಮ್ಮ ಆ ಪ್ರೀತಿ ನನ್ನ ಹೃದಯವನ್ನು ಇನ್ನಷ್ಟು ಚೈತನ್ಯಪೂರ್ಣಗೊಳಿಸಲಿದೆ. ಇದನ್ನು ವೈಯುಕ್ತಿಕ ಆಮಂತ್ರಣ ಎಂದು ಪರಿಭಾವಿಸಿ, ನೀವು ಮತ್ತು ನಿಮ್ಮ ಕುಟುಂಬದವರು ಬರಲೇಬೇಕು. ಜತೆಯಲ್ಲೇ ಕೂತು ಊಟ ಮಾಡೋಣ. ಇದಕ್ಕಿಂತ ದೊಡ್ಡ ಸೌಭಾಗ್ಯ ನನಗೆ ಸಿಗಲ್ಲ. ನಿಮ್ಮ ಆಗಮನದ ನಿರೀಕ್ಷೆಯಲ್ಲಿ ನಿಮಗಾಗಿಯೇ ಕಾಯುತ್ತಿರುತ್ತೇನೆ.
ನಿಮ್ಮ ಮನೆ ಮಗ,
ಹೆಚ್.ಡಿ.ಕುಮಾರಸ್ವಾಮಿ