ರಾಮನಗರದಲ್ಲಿ ನಿರ್ಗತಿಕರಿಗೆ ಆಸರೆಯಾದ ಎಚ್ಡಿಕೆ ಅಭಿಮಾನಿಗಳು
ರಾಮನಗರ, ಮಾರ್ಚ್ 27: ಕೊರೊನಾ ವೈರಸ್ ಭೀತಿ ಹೆಚ್ಚಾದಂತೆ ಸರ್ಕಾರ ಕರ್ಫ್ಯೂ ಬಿಗಿಗೊಳಿಸಿದ್ದು, ಕಟ್ಟುನಿಟ್ಟಿನ ಬಂದ್ ನಿಂದಾಗಿ ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ರಾಮನಗರದಲ್ಲಿ ಪೊಲೀಸರ ಬಿಗಿ ಬಂದೋಬಸ್ತ್ ಮನಗಂಡ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅಭಿಮಾನಿಗಳು ಹಸಿವಿನಿಂದ ಬಳಲುತ್ತಿದ್ದ ನಿರ್ಗತಿಕರಿಗೆ ತಿಂಡಿ, ನೀರು ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಕೊರೊನಾ ವೈರಸ್ ನಿಂದ ಜನರನ್ನು ರಕ್ಷಿಸುವ ನಿಟ್ಟಿನಲ್ಲಿ ಲಾಕ್ ಡೌನ್ ನಿರ್ಧಾರ ಅನುಷ್ಠಾನಗೊಳಿಸಲು ಬೀದಿಗಿಳಿದಿರುವ ಆರಕ್ಷಕ ಸಿಬ್ಬಂದಿಗಳಿಗೂ, ಆರೋಗ್ಯವನ್ನು ಲೆಕ್ಕಿಸದೇ ದುಡಿಯುತ್ತಿರುವ ಪೊಲೀಸರಿಗೆ ಇಂದು ಬೆಳಿಗ್ಗೆನೆ ತಿಂಡಿ ಮತ್ತು ನೀರನ್ನು ನೀಡಿ ನಿಮ್ಮ ಜೊತೆ ನಾವಿದ್ದೇವೆ ಎಂಬ ಸಂದೇಶ ಸಾರಿದ್ದಾರೆ.
ಇನ್ನು ಇಂತಹ ಸಂಕಷ್ಟದ ಕಾಲದಲ್ಲೂ ಪಟ್ಟಣದ ಬೀದಿ ಬೀದಿಯ ಕಸ ಗುಡಿಸಿ ನಗರದ ಸ್ವಚ್ಛತೆ ಕಾಪಾಡಿ, ಎಲ್ಲರ ಆರೋಗ್ಯಕ್ಕಾಗಿ ಕೊರೊನಾ ಭೀತಿಯನ್ನು ಲೆಕ್ಕಿಸದೆ ಬೀದಿಗಿಳಿಯುವ ಪೌರ ಕಾರ್ಮಿಕರಿಗೂ ತಿಂಡಿ ಮತ್ತು ನೀರು ವಿತರಿಸುವ ಮೂಲಕ ಪೌರ ಕಾರ್ಮಿಕರ ಸೇವೆಯನ್ನು ಕುಮಾರಸ್ವಾಮಿ ಅಭಿಮಾನಿ ಬಳಗ ಗೌರವಿಸಿದ್ದಾರೆ.
ರಾಮನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರಿಸಿದ ಎಚ್ಡಿಕೆ ಅಭಿಮಾನಿ ಬಳಗದ ಸದಸ್ಯರು, ಕರ್ತವ್ಯ ನಿರತ ಪೊಲೀಸರು, ಪೌರ ಕಾರ್ಮಿಕರು, ಕೆಲಸವಿಲ್ಲದೆ ಸಂಕಷ್ಟದಲ್ಲಿರುವ ದಿನಗೂಲಿ ನೌಕರರು ಹಾಗೂ ಹಸಿವಿನಿಂದ ಬಳಲುತ್ತಿರುವ ನಿರ್ಗತಿಕರಿಗೆ ತಿಂಡಿ ಮತ್ತು ನೀರು ನೀಡಿದರು. ಎಚ್ಡಿಕೆ ಅಭಿಮಾನಿ ಬಳಗದಲ್ಲಿ ಲಾಯರ್ ರಾಜಶೇಖರ್, ಜಯಕುಮಾರ್, ರಾಜು ಹಾಗೂ ಶಿವಾಜಿ ಸೇರಿದಂತೆ ಇತರರು ತಂಡದಲ್ಲಿದ್ದರು.