ಎಚ್ಡಿಡಿ ಹುಟ್ಟುಹಬ್ಬ: ಬಡವರಿಗೆ ದಿನಸಿ ಕಿಟ್ ವಿತರಿಸಿದ ಅಭಿಮಾನಿಗಳು
ರಾಮನಗರ, ಮೇ 18: ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ ದೇವೇಗೌಡ ಅವರ 88 ನೇ ಹುಟ್ಟುಹಬ್ಬವನ್ನು ರಾಮನಗರದಲ್ಲಿ ಎಚ್.ಡಿ ಕುಮಾರಸ್ವಾಮಿ ಅಭಿಮಾನಿಗಳು ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಸಿಹಿ ವಿತರಿಸಿದರು. ದಿನಪತ್ರಿಕೆ ಹಂಚುವ ಹುಡುಗರಿಗೆ ದಿನಸಿ ಕಿಟ್ ವಿತರಿಸುವ ಮೂಲಕ ಸರಳವಾಗಿ ಆಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ಕಾನೂನು ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಶೇಖರ್, ""ದೇಶದ ಕೆಂಪು ಕೋಟೆಯ ಮೇಲೆ ಕನ್ನಡದ ಕಂಪನ್ನು ಬೀರಿದ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಭಾರತ ದೇಶ ಕಂಡ ಅತ್ಯುತ್ತಮ ರಾಜಕಾರಣಿಗಳಲ್ಲಿ ಒಬ್ಬರು. ತಮ್ಮ ಇಳಿ ವಯಸ್ಸಿನಲ್ಲಿಯೂ ಅವರು ದೇಶದ ಅಭಿವೃದ್ಧಿಗಾಗಿ, ಸಮಾಜದಲ್ಲಿನ ದುರ್ಬಲ ವರ್ಗಗಳ ಒಳಿತಿಗಾಗಿ, ರೈತರ ಸಮಸ್ಯೆಗಳನ್ನು ಕುರಿತು ಹೋರಾಟ ನಡೆಸುತ್ತಿರುವುದು ಎಲ್ಲರಿಗೂ ಮಾದರಿಯಾಗಿದೆ'' ಎಂದರು.
ದೇವೇಗೌಡರ ಜನ್ಮದಿನ: ದೀರ್ಘಾಯುಷ್ಯಕ್ಕಾಗಿ ಗಣ್ಯರ ಪ್ರಾರ್ಥನೆ
ದೇವೇಗೌಡರು ತಮ್ಮ ಹುಟ್ಟುಹಬ್ಬವನ್ನು ಬಡವರ ಸೇವೆ ಮಾಡುವ ಮೂಲಕ ಆಚರಿಸುವಂತೆ ಕರೆ ನೀಡಿದ್ದಾರೆ. ಅವರ ಆಶಯದಂತೆ ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದ ದಿನಪತ್ರಿಕೆ ವಿತರಿಸುವ ಹುಡುಗರಿಗೆ ದಿನಸಿ ಕಿಟ್ ವಿತರಿಸಿದ್ದೇವೆ. ಶಾರದಾಂಬೆಯಲ್ಲಿ ದೇವೇಗೌಡರಿಗೆ ಆರೋಗ್ಯ, ಆಯಸ್ಸು ನೀಡುವಂತೆ ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಕಾನೂನು ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಶೇಖರ್, ಜೆಡಿಎಸ್ ಯುವ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಎಸ್ ಜಯಕುಮಾರ್, ಗ್ರಾಮ ಪಂಚಾಯತಿ ಸದಸ್ಯ ರಾಂಪುರ ಬಾಬು, ಕುಮಾರಣ್ಣ ಅಭಿಮಾನಿಗಳ ಬಳಗದ ರಮೇಶ್, ಶಿವಾಜಿರಾವ್, ಪಿ.ಸುರೇಶ್ ಉಪಸ್ಥಿತರಿದ್ದರು.