ಕುಮಾರಸ್ವಾಮಿಯವರ ಜಮೀನಿನ ದಾಖಲೆಗಳೇ ಮಾಯವಾಗಿವೆ: ಎಸ್.ಆರ್.ಹಿರೇಮಠ್ ಗಂಭೀರ ಆರೋಪ
Recommended Video
ರಾಮನಗರ, ಜನವರಿ 21: :ಮಾಜಿ ಸಿಎಂ ಕುಮಾರಸ್ವಾಮಿಯವರು ಒತ್ತುವರಿ ಮಾಡಿದ್ದಾರೆ ಎನ್ನಲಾದ ಬಿಡದಿಯ ಕೇತಗಾನಹಳ್ಳಿ ಜಮೀನಿನ ದಾಖಲೆಗಳು ಸರ್ಕಾರಿ ಕಚೇರಿಯಿಂದ ನಾಪತ್ತೆಯಾಗಿವೆ" ಎಂದು ಸಾಮಾಜಿಕ ಕಾರ್ಯಕರ್ತ ಎಸ್.ಆರ್.ಹಿರೇಮಠ್ ಗಂಭೀರ ಆರೋಪ ಮಾಡಿದ್ದಾರೆ.
ರಾಮನಗರದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಸ್.ಆರ್.ಹಿರೇಮಠ್, "ನನ್ನ 40 ವರ್ಷದ ಹೋರಾಟದ ಹಾದಿಯಲ್ಲಿ ನಿನ್ನೆ ನನ್ನ ಮೇಲೆ ನಡೆದ ದೌರ್ಜನ್ಯ ಎಂದೂ ಕಂಡಿರಲಿಲ್ಲ" ಎಂದು ಬೇಸರ ವ್ಯಕ್ತಪಡಿಸಿದರು. ನಿನ್ನೆ ಅವರು ಸ್ಥಳ ಪರಿಶೀಲನೆಗೆಂದು ಬಿಡದಿ ಸಮೀಪದ ಕೇತಗಾನಹಳ್ಳಿಗೆ ಬಂದಿದ್ದ ಸಂದರ್ಭ ಕೆಲವರು ಅವರ ಮೇಲೆ ಮೊಟ್ಟೆ ಎಸೆದಿದ್ದರು.
ಬಿಡದಿಯಲ್ಲಿ ಸ್ಥಳ ಪರಿಶೀಲನೆಗೆ ಬಂದ ಹಿರೇಮಠ್ ಮೇಲೆ ಮೊಟ್ಟೆ ಎಸೆದ ಗ್ರಾಮಸ್ಥರು
ಬಿಡದಿಯ ಕೇತಗಾನಹಳ್ಳಿ ವ್ಯಾಪ್ತಿಯಲ್ಲಿ 200 ಎಕರೆ ಸರ್ಕಾರಿ ಗೋಮಾಳ ಜಮೀನು ಭೂ ಕಬಳಿಕೆಯಾಗಿದೆ. ಇದು ಕಾನೂನು ವಿರೋಧಿ. ಇದರಲ್ಲಿ ಪ್ರಮುಖವಾಗಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಇದ್ದಾರೆ ಎಂದು ಹಿರೇಮಠ್ ಸುದ್ದಿಗೋಷ್ಠಿ ನಡೆಸಿ ಆರೋಪಿಸಿದರು.
ಕುಮಾರಸ್ವಾಮಿ ಹಿಂಬಾಲಕರಿಂದ ನನ್ನ ಮೇಲೆ ಹಲ್ಲೆ: ಹಿರೇಮಠ್
ಈ ಒತ್ತುವರಿ ಬಗ್ಗೆ ಈಗಾಗಲೇ ಉಪವಿಭಾಗಧಿಕಾರಿ ಲೋಕಾಯುಕ್ತ ತನಿಖೆ ವೇಳೆ ಕೋರ್ಟ್ ಗೆ ಸವಿವರವಾಗಿ ದಾಖಲೆ ನೀಡಲಾಗಿದೆ. ಈಚೆಗೆ ಹೈಕೋರ್ಟ್ ಕೂಡ ಮೂರು ತಿಂಗಳ ಕಾಲಾವಕಾಶ ನೀಡಿ ಸಂಪೂರ್ಣವಾಗಿ ಲೋಕಾಯುಕ್ತ ತನಿಖೆ ನಿರ್ದೇಶನದಂತೆ ಕ್ರಮ ಕೈಗೊಳ್ಳಬೇಕೆಂದು ಆದೇಶಿಸಿದೆ ಎಂದರು.
ಭೂ ಕಬಳಿಕೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿ ನೈಜ ಸ್ಥಿತಿ ತಿಳಿಯಲು ಹೋಗಿದ್ದ ವೇಳೆ ಕುಮಾರಸ್ವಾಮಿ ಹಿಂಬಾಲಕರು ನನ್ನ ಮೇಲೆ ದೌರ್ಜನ್ಯ ಎಸಗಿದ್ದಾರೆ. ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದರು.
"ಬದುಕಿರುವವರೆಗೂ ಅಕ್ರಮಗಳ ವಿರುದ್ಧ ಹೋರಾಡುತ್ತೇನೆ"
"ನಾನು ಬಳ್ಳಾರಿ ಸೇರಿದಂತೆ ಹಲವು ಕಡೆ ಹೋರಾಟಗಳನ್ನು ಮಾಡಿದ್ದೇನೆ. ಆದರೆ ಇದುವರೆಗೂ ನನ್ನ ಮೇಲೆ ಯಾರೂ ಹಲ್ಲೆಗೆ ಮುಂದಾಗಿರಲಿಲ್ಲ. ಒಂದು ಬೆದರಿಕೆ ಕರೆ ಕೂಡ ಬಂದಿರಲಿಲ್ಲ. ಆದರೆ ಬಿಡದಿ ಪ್ರಕರಣ ನಿಜಕ್ಕೂ ನಾವು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿದ್ದೇವೆಯಾ ಎಂಬ ಅನುಮಾನ ಹುಟ್ಟು ಹಾಕಿದೆ" ಎಂದರು.
ಡಿಕೆ ಶಿವಕುಮಾರ್ ಜೈಲಿನಲ್ಲಿದ್ದು ವಿಚಾರಣೆ ಎದುರಿಸಲಿ: ಎಸ್ಆರ್ ಹಿರೇಮಠ್
"ಯಾರು ಎಷ್ಟೇ ಬೆದರಿಕೆ ಹಾಕಿದರೂ ನನ್ನ ಹೋರಾಟ ಮುಂದುವರಿಯುತ್ತದೆ. ಸಾರ್ವಜನಿಕ ಜೀವನದಲ್ಲಿದ್ದುಕೊಂಡು ಅಕ್ರಮ ಮಾಡುವವರ ವಿರುದ್ಧ ನಿರಂತರ ಹೋರಾಟ ಮಾಡಿ ನಿಜವಾದ ಫಲಾನುಭವಿಗಳಿಗೆ ನ್ಯಾಯ ದೊರಕಿಸಿಕೊಡುತ್ತೇನೆ" ಎಂದು ಸವಾಲು ಹಾಕಿದರು.
"54 ಎಕರೆ ಭೂಮಿ ಕುಮಾರಸ್ವಾಮಿ ಹೆಸರಿನಲ್ಲಿ"
ಕುಮಾರಸ್ವಾಮಿ ಅವರು ಬಿಡದಿಯ ಕೇತಗಾನಹಳ್ಳಿಯಲ್ಲಿ 22 ಎಕರೆ ಭೂಮಿಯನ್ನು ಖರೀದಿ ಮಾಡಿದ್ದಾರೆ. ಆದರೆ ಗೋಮಾಳ ಜಮೀನನ್ನು ಖರೀದಿ ಮಾಡಲು, ಮಾರಾಟ ಮಾಡಲು ಸಾಧ್ಯವಿಲ್ಲ.
ಕುಮಾರಸ್ವಾಮಿ ಅವರ ಚಿಕ್ಕಮ್ಮ ಸಾವಿತ್ರಮ್ಮ ಎಂಬುವರು 22 ಎಕರೆ ಖರೀದಿ ಮಾಡಿ ನಂತರ ಇವರಿಗೆ ದಾನ ಮಾಡಿದ್ದಾರೆ. ಒಟ್ಟು 54 ಎಕರೆ ಭೂಮಿ ಕುಮಾರಸ್ವಾಮಿಯವರ ಹೆಸರಿನಲ್ಲಿದೆ. ಲೋಕಾಯುಕ್ತದ ತನಿಖೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ ಎಂದು ಮಾಹಿತಿ ನೀಡಿದ್ದಾರೆ.
ಸರ್ಕಾರಕ್ಕೆ ವಾಪಸ್ ನೀಡಿ, ಜನರ ಕ್ಷಮೆ ಕೇಳಿ
"ಕುಮಾರಸ್ವಾಮಿಯವರ ಸಂಬಂಧಿ ಹಾಗೂ ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಕುಟುಂಬದವರು 200 ಎಕರೆ ಭೂ ಕಬಳಿಕೆ ಮಾಡಿದ್ದಾರೆ. ಇದನ್ನು ಮಾಜಿ ಸಂಸದ ಜಿ.ಮಾದೇಗೌಡರು ನಮ್ಮ ಗಮನಕ್ಕೆ ತಂದಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಮತ್ತು ಡಿ.ಸಿ.ತಮ್ಮಣ್ಣ ಕೂಡಲೇ ಅಕ್ರಮ ಭೂ ಕಬಳಿಕೆ ತೆರವುಗೊಳಿಸಿ. ಜಮೀನನ್ನು ಸರ್ಕಾರಕ್ಕೆ ವಾಪಸ್ ನೀಡಿ, ಜನತೆ ಬಳಿ ಕ್ಷಮೆ ಕೋರಿ" ಎಂದು ಒತ್ತಾಯಿಸಿದ್ದಾರೆ.