ಅಶ್ವಥ್ ನಾರಾಯಣ ದುಡ್ಡಿನ ಮದ ಹೇಗೆ ಇಳಿಸಬೇಕು ಗೊತ್ತಿದೆ; ಎಚ್ಡಿಕೆ
ಚನ್ನಪಟ್ಟಣ, ಆಗಸ್ಟ್ 11: "ಕುಮಾರಸ್ವಾಮಿ ಯಾವತ್ತೂ ಹಿಟ್ ಅಂಡ್ ರನ್ ಕೇಸ್ ಮಾಡಲ್ಲ. ಗಾಳಿಯಲ್ಲಿ ಗುಂಡು ಹಾರಿಸುವ ಅಸಾಮಿ ನಾನಲ್ಲ. ಯಡಿಯೂರಪ್ಪ ಕಾಲದಲ್ಲಿ ಸಾವಿರಾರು ಪ್ರಕರಣ ದಾಖಲೆ ಸಮೇತ ಜನತೆ ಮುಂದೆ ಇಟ್ಟಿದ್ದು ಇದೇ ಕುಮಾರಸ್ವಾಮಿ. ಅಶ್ವಥ್ ನಾರಾಯಣಗೆ ದುಡ್ಡಿನ ಮದ ಏರಿದೆ, ಅದನ್ನು ಹೇಗೆ ಇಳಿಸಬೇಕು ಎಂದು ಕುಮಾರಸ್ವಾಮಿ ಗೊತ್ತಿದೆ. ಅದಕ್ಕೆ ಟೈಂ ಬರುತ್ತದೆ" ಎಂದು ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಗುಡುಗಿದರು.
ಉನ್ನತ ಶಿಕ್ಷಣ ಸಚಿವ ಡಾ. ಸಿ. ಎನ್. ಅಶ್ವಥ್ ನಾರಾಯಣ ವಿರುದ್ಧ ಸರಣಿ ಟ್ವೀಟ್ ಮಾಡುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದ ಎಚ್. ಡಿ. ಕುಮಾರಸ್ವಾಮಿ ಗುರುವಾರ ಕೂಡ ಸ್ವಕೇತ್ರ ಚನ್ನಪಟ್ಟಣದ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಾಧ್ಯಮಗಳೊಂದಿಗೆ ಮಾತನಾಡಿದರು. ಮಾಜಿ ಸಿಎಂ ಯಡಿಯೂರಪ್ಪನವರ ಪ್ರಕರಣ ನೆನೆಪಿಸುವ ಮೂಲಕ ಅಶ್ವಥ್ ನಾರಾಯಣಗೆ ಎಚ್ಚರಿಕೆಯ ಸಂದೇಶ ರವಾನಿಸಿದರು.
ಬಸವರಾಜ ಬೊಮ್ಮಾಯಿ ಬದಲಾವಣೆ ಸುದ್ದಿ: ಎಚ್ಡಿಕೆ ಹೇಳಿದ್ದೇನು?
ಯಾವುದೇ ದಾಖಲೆ ಇಲ್ಲದೆ ಅರೋಪ ಮಾಡಿ ಕುಮಾರಸ್ವಾಮಿ ಹಿಟ್ ಅಂಡ್ ರನ್ ಮಾಡುತ್ತಾರೆ ಎಂಬ ಅಶ್ವಥ್ ನಾರಾಯಣ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, "ನಾನು ಗಾಳಿಯಲ್ಲಿ ಗುಂಡು ಹಾರಿಸುವವನಲ್ಲ. ನನ್ನ ಸುದ್ದಿಗೆ ಯಡಿಯೂರಪ್ಪ ಕೂಡ ಬಂದಿದ್ದರು, ಅಪ್ಪ ಮಕ್ಕಳನ್ನ ಮುಗಿಸೋದೆ ನನ್ನ ಕೆಲಸ ಅಂದಿದ್ದರು, ಅವಾಗ ಸಾವಿರಾರು ಪ್ರಕರಣಗಳ ದಾಖಲೆ ಸಮೇತ ಜನತೆ ಮುಂದೆ ಇಟ್ಟಿದ್ದು ಇದೇ ಕುಮಾರಸ್ವಾಮಿ, ಕೊನೆಗೆ ಯಡಿಯೂರಪ್ಪ ನವರ ಪರಿಸ್ಥಿತಿ ಎಲ್ಲಿಗೆ ಬಂತು" ಎಂದು ಎಚ್ಚರಿಕೆ ನೀಡಿದರು.
ದುಡ್ಡಿನ ಮದ ಇಳಿಸೋದು ನನಗೆ ಗೊತ್ತಿದೆ
"ಕುಮಾರಸ್ವಾಮಿ ಯಾವತ್ತು ಹಿಟ್ ರನ್ ಕೇಸ್ ಮಾಡಲ್ಲ. ಕಲ್ಲಪ್ಪ ಹಂಡಿಭಾಗ್ ಇದೆ ಸಿದ್ದರಾಮಯ್ಯ ಕಾಲದಲ್ಲಿ ಆತ್ಮಹತ್ಯೆ ಮಾಡಿಕೊಂಡರು, ಕುರುಬ ಸಮಾಜದ ನಿಷ್ಟಾವಂತ ಅಧಿಕಾರಿ, ಅವರ ಕುಟುಂಬಕ್ಕೆ ರಕ್ಷಣೆ ಕೊಟ್ಟಿದ್ದು ಇದೇ ಕುಮಾರಸ್ವಾಮಿ. ಸಿದ್ದರಾಮಯ್ಯ ಸರಕಾರದಲ್ಲಿ ಅವರಿಗೆ ರಕ್ಷಣೆ ಇರಲಿಲ್ಲ. ಆ ಯುವಕನ ಕುಟುಂಬದ ರಕ್ಷಣೆಗೆ ನಿಂತಿದ್ದು ಕುಮಾರಸ್ವಾಮಿ. ನಾನು ಅಶ್ವಥ್ ನಾರಾಯಣಗೆ ಹೇಳುತ್ತೇನೆ, ಈ ದುಡ್ಡಿನ ಮದ ನಿಮ್ಮನ್ನು ರಕ್ಷಣೆ ಮಾಡಲ್ಲ. ರಕ್ಷಣೆ ಮಾಡುವವರು ಈ ನಾಡಿನ ಜನತೆ. ಆ ಮದ ಇಳಿಸೋದು ಹೇಗೆ ಅಂತಾ ಕುಮಾಸ್ವಾಮಿಗೆ ಗೊತ್ತಿದೆ. ಅದಕ್ಕೆ ಟೈಂ ಬರುತ್ತದೆ, ಅವರು ಬದುಕಿರುತ್ತಾರೆ, ನಾನೂ ಬದುಕಿರುತ್ತೇನೆ. ನನ್ನ ಆರೋಗ್ಯಕ್ಕೆ ಏನು ಆಗಲ್ಲ, ಗಟ್ಟಿಯಾಗಿ ಇರುತ್ತೇನೆ. ಲಕ್ಷಾಂತರ ಕಾರ್ಯಕರ್ತರು ಆಶೀರ್ವಾದದಿಂದ ಗಟ್ಟಿಯಾಗಿರುವೆ. ನಾನು ಏನು ಎಂಬುದನ್ನ ಮುಂದೆ ತೋರಿಸುತ್ತೇನೆ " ಎಂದು ಗುಡುಗಿದರು.
ಚುನಾವಣೆ ಹೊಸ್ತಿಲಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಗೆ ಸಿದ್ಧತೆ: ರೇಸ್ನಲ್ಲಿದ್ದಾರೆ ಮೂವರು
ಕಲಾಪ ಕರೆಯಿರಿ ಚರ್ಚೆ ಮಾಡೋಣ
ಎಚ್. ಡಿ. ಕುಮಾರಸ್ವಾಮಿ ಪಂಚತಾರ ಹೋಟೆಲ್ ನಲ್ಲಿ ಉಳಿದುಕೊಳ್ಳುತ್ತಿದ್ದರು ಎಂಬ ಸಚಿವ ಅಶ್ವಥ್ ನಾರಾಯಣ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, "ದೆಹಲಿಯಿಂದ ರಾಜ್ಯಕ್ಕೆ ಬರುವ ಬಿಜೆಪಿ ಪಕ್ಷದ ವರಿಷ್ಠರು, ಅಮಿಶ್ ಶಾ, ನಡ್ಡಾ, ಅರುಣ್ ಸಿಂಗ್ ಎಲ್ಲಿ ತಂಗುತ್ತಾರೆ?. ಅವರು ಪಂಚತಾರಾ ಹೋಟೆಲ್ ಗೆ ಹೋಗಬಹುದಾ ಕುಮಾರಸ್ವಾಮಿ ಹೋದರೆ ತಪ್ಪಾ.?. ನಾನು ಗುಡಿಸಲಿನಲ್ಲೂ ಮಲಗಿದ್ದೇನೆ, ಪಂಚತಾರ ಹೋಟೆಲ್ ನಲ್ಲೂ ಮಲಗಿದ್ದೇನೆ" ಎಂದು ಬಿಜೆಪಿ ನಾಯಕರಿಗೆ ಕುಮಾರಸ್ವಾಮಿ ತಿರುಗೇಟು ನೀಡಿದರು.
"ನಾನು ಆರೋಪಿಸಿದ ನಕಲಿ ಸರ್ಟಿಫಿಕೇಟ್ ವಿಚಾರದ ಬಗ್ಗೆ ಅವರು ( ಅಶ್ವಥ್ ನಾರಾಯಣ )ಉತ್ತರಾ ಕೊಟ್ಟರಾ? ಇವರು ಬಂದಿರುವ ಹಿನ್ನೆಲೆಯೇ ನಕಲಿ ಸರ್ಟಿಫಿಕೇಟ್ ಮಾರಾಟದ ಮೂಲಕ. 2010 ರಲ್ಲಿ ಯಡಿಯೂರಪ್ಪ ಸಿಎಂ ಇದ್ದಾಗ ಕಾರ್ಪೋರೇಷನ್ನ 15 ಸಾವಿರ ಕೋಟಿ ರೂ . ಕಾಮಗಾರಿಯ ದಾಖಲೆ ಕೊಠಡಿಗೆ ಬೆಂಕಿ ಇಟ್ಟು ಹಗಲು ದರೋಡೆ ಮಾಡಿದ್ದ ವಿಷಯವನ್ನು ಕೆದಕ್ಕಿದ್ದು ಜೆಡಿಎಸ್, ಅದರೆ ಈವರೆಗೂ ಅದರ ಬಗ್ಗೆ ತನಿಖೆ ನಡೆದಿಲ್ಲ, ಮೊದಲು ಅದರ ಬಗ್ಗೆ ಚರ್ಚೆ ಮಾಡಿ. ಚರ್ಚೆ ಮಾಡಲು ಇತಂಹ ಎಷ್ಟೂ ವಿಚಾರಗಳಿವೆ, ಮೊದಲು ಕಲಾಪ ಕರೆಯಿರಿ" ಎಂದು ತಿರುಗೇಟು ನೀಡಿದರು.
ಧರ್ಮ ದಂಗಲ್ಗೆ ಕಾಂಗ್ರೆಸ್-ಬಿಜೆಪಿ ಕಾರಣ
"ಕಾಂಗ್ರೆಸ್ ಹಾಗೂ ಬಿಜೆಪಿ ಎರಡು ರಾಷ್ಟ್ರೀಯ ಪಕ್ಷಗಳಿಗೆ ಧರ್ಮದ ದಂಗಲ್ ಜೀವಾಳ. ಹುಬ್ಬಳ್ಳಿ ಈದ್ಗಾ ಮೈದಾನದ ವಿಚಾರದಲ್ಲಿ 25 ವರ್ಷ ಜನಗಳನ್ನು ಸಾಯಿಸಿದ್ದರು. ದೇವೇಗೌಡರು ಮುಖ್ಯಮಂತ್ರಿಯಾದ ನಂತರ ಈದ್ಗಾ ಮೈದಾನ ವಿವಾದ ಬಗೆಹರಿಸಿ ಅಮಾಯಕ ಜನತ ಪ್ರಾಣ ಉಳಿಸಿಕೊಟ್ಟರು. ಈಗ ಕರಾವಳಿಯಿಂದ ಬೆಂಗಳೂರಿನ ಚಾಮರಾಜಪೇಟೆಗೆ ಧರ್ಮದ ದಂಗಲ್ ಬಂದಿದೆ. ಮುಂದೆ ಎಲ್ಲಿಗೆ ತೆಗೆದುಕೊಂಡು ಹೋಗಿ ನಿಲ್ಲಿಸುತ್ತಾರೋ ನೋಡೋಣ" ಎಂದರು.
ಸಿಎಂ ಬದಲಾವಣೆ ನನಗೆ ಬೇಡದ ವಿಚಾರ
ಬಿಜೆಪಿಯಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, "ಸಿಎಂ ಇಟ್ಟಿಕೊಳ್ತಾರೋ, ಬದಲಾವಣೆ ಮಾಡುತ್ತಾರೋ ಅದಕ್ಕೂ ನನಗೂ ಸಂಬಂಧವೇನು. ಇದನ್ನು ಕಟ್ಟಿಕೊಂಡು ನನಗೆ ಏನಾಗಬೇಕಿದೆ. ನನ್ನ ಗಮನ ಇರೋದು 2023ರ ಸಾರ್ವತ್ರಿಕ ಚುನಾವಣೆ ಕಡೆಗೆ. ಬಿಜೆಪಿ ಪಕ್ಷದಲ್ಲಿ ಹಲವು ರೀತಿಯ ಅಂತರಿಕ ಬೆಳವಣಿಗೆ ಇರಬಹುದು. ನನಗೆ ಬೇಕಾಗಿರೋದು ನನ್ನ ಜನರ ಬದುಕು. ಮಳೆ ಅವಾಂತರದಿಂದ ಇವತ್ತು ಸಾವಿರಾರು ಮನೆಗಳು ಬಿದ್ದಿವೆ, ಸಾವಿರಾರು ಹೆಕ್ಟೇರ್ ಜಮೀನು ಹಾಳಾಗಿವೆ. ಅರಕಲಗೂಡುನಲ್ಲಿ 50ಕ್ಕೂ ಹೆಚ್ಚು ಮಹಿಳೆಯರು, ನಾವು ಬೀದಿಪಾಲಾಗಿದ್ದೇವೆ. ನಮಗೆ ಮನೆ ಕಟ್ಟಿಸಿಕೊಡಿ ಎಂದು ಅಳಲು ತೋಡಿಕೊಂಡಿದ್ದಾರೆ. ನನಗೆ ಬೇಕಾಗಿರೋದು ಇಂತಹ ಜನರ ಪರ ಕೆಲಸ ಯಾವ ಸಿಎಂ ಕಟ್ಟಿಕೊಂಡೇನು, ಮಂತ್ರಿ ಕಟ್ಟಿಕೊಂಡು ನನಗೇನು. ಸಿಎಂ ಬದಲಾವಣೆ ವಿಚಾರ ಬಿಜೆಪಿ ಪಕ್ಷಕ್ಕೆ ಸೇರಿದ ವಿಚಾರ" ಎಂದರು.
Recommended Video