ಈ ವೇಳೆ ನಾನು ಮುಖ್ಯಮಂತ್ರಿಯಾಗಿದ್ರೆ..: ಪ್ಲಾನ್ ಹೇಳಿದ ಎಚ್ಡಿಕೆ
ರಾಮನಗರ, ಏಪ್ರಿಲ್ 22: ಕೊರೊನಾ ಸಮಯದಲ್ಲಿ ರೈತರ ಬಗ್ಗೆ ರಾಜ್ಯ ಸರ್ಕಾರ ಸರಿಯಾದ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವೇಳೆ ತಾವು ಮುಖ್ಯಮಂತ್ರಿ ಆಗಿದ್ದರೆ, ರೈತರಿಗಾಗಿ ಏನು ಮಾಡುತ್ತಿದ್ದೆ ಎನ್ನುವುದನ್ನು ತಿಳಿಸಿದ್ದಾರೆ.
ರಾಮನಗರದಲ್ಲಿ ಮಾತನಾಡಿದ ಅವರು ಕೊರೊನಾದಿಂದ ರಾಜ್ಯದ ರೈತರು ಸಂಕಷ್ಟದಲ್ಲಿ ಇದ್ದಾರೆ. ಸರ್ಕಾರ ನಾವು ನೀಡಿರುವ ಸಲಹೆಗಳನ್ನು ಪರಿಗಣಿಸುತ್ತಿಲ್ಲ. ನಾನು ರೈತರ ನೆರವಿಗೆ ಬಂದಿದ್ದು, ಅನೇಕರಿಗೆ ಸಹಾಯ ಮಾಡಿದ್ದೇನೆ ಎಂದಿದ್ದಾರೆ. ಈ ಸಂದರ್ಭದಲ್ಲಿ ನಾನು ಮುಖ್ಯಮಂತ್ರಿ ಆಗಿದ್ದರೆ, 5 ಸಾವಿರ ಕೋಟಿ ಪ್ಯಾಕೇಜ್ ಘೋಷಣೆ ಮಾಡುತ್ತಿದ್ದೆ. ಆ ಮೂಲಕ ಕೊರೊನಾ ವಿರುದ್ಧ ಸರಿಯಾದ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದ್ದೆ ಎಂದು ಅವರು ತಿಳಿಸಿದ್ದಾರೆ.
ರಾಮನಗರದಲ್ಲಿ ಆಹಾರ ಪದಾರ್ಥ ವಿತರಣೆಗೆ ಎಚ್ಡಿಕೆಯಿಂದ ಚಾಲನೆ
''ಮಣ್ಣಿನ ಮಕ್ಕಳು ಅಂತಾ ನಾವು ಬಿರುದನ್ನು ಹಾಕಿಕೊಂಡಿಲ್ಲ. ನಾಡಿನ ಜನ ನಮಗೆ ಕೊಟ್ಟಿರುವ ಬಿರುದು. ನಾನು ರಾಮನಗರ ಹಾಗೂ ಚನ್ನಪಟ್ಟಣ ಕ್ಷೇತ್ರಕ್ಕೆ 5 ಕೋಟಿ ರೂಪಾಯಿ ವೆಚ್ಚದ ಆಹಾರ ಸಾಮಗ್ರಿಗಳನ್ನು ನೀಡಿದ್ದೇನೆ. ಮಣ್ಣಿನ ಮಕ್ಕಳು ಮನೆಯಲ್ಲಿ ಮಲಗಿಲ್ಲ'' ಎಂದು ಮಾಜಿ ಶಾಸಕ ಬಾಲಕೃಷ್ಣಗೆ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
''ಕೊರೊನಾ ಸಂದರ್ಭದಲ್ಲಿ ಮಣ್ಣಿನ ಮಕ್ಕಳು ಎಲ್ಲಿದ್ದಾರೆ..?'' ಎಂದು ಮಾಜಿ ಶಾಸಕ ಬಾಲಕೃಷ್ಣ ಪ್ರಶ್ನೆ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ ''ಅವರು (ಬಾಲಕೃಷ್ಣ) 20 ಸಾವಿರ ರೂಪಾಯಿಯ ತರಕಾರಿ ಖರೀದಿ ಮಾಡಿ ಪ್ರಚಾರ ಮಾಡುತ್ತಾರೆ.'' ಎಂದಿದ್ದಾರೆ.
"ಅನ್ನಂ ಪರಬ್ರಹ್ಮಂ' ಹೆಸರಿನಲ್ಲಿ ಎಚ್.ಡಿ.ಕುಮಾರಸ್ವಾಮಿ ಮತ್ತು ಅನಿತಾ ಕುಮಾರಸ್ವಾಮಿಯವರು ರಾಮನಗರದ ಕ್ಷೇತ್ರದ 30 ಸಾವಿರ ಬಡ ಕುಟುಂಬಗಳಿಗೆ ಮತ್ತು ಚನ್ನಪಟ್ಟಣ ಕ್ಷೇತ್ರದ 30 ಸಾವಿರ ಬಡ ಕುಟುಂಬಗಳಿಗೆ ದಿನಸಿ ಆಹಾರ ಪದಾರ್ಥಗಳನ್ನು ನೀಡುವ ಕಾರ್ಯಕ್ರಮವನ್ನು ಇಂದು ಆರಂಭಿಸಿದರು.