ಕೆಲವರು ನನಗೆ ಸ್ಲೋ ಪಾಯ್ಸನ್ ಕೊಡ್ತಿದ್ದಾರೆ: ಡಿಕೆಶಿಗೆ ಟಾಂಗ್ ಕೊಟ್ಟ ಎಚ್ಡಿಕೆ
ರಾಮನಗರ, ಅಕ್ಟೋಬರ್ 14: ಸದ್ಯ ಉಪ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ರಾಜಕೀಯ ನಾಯಕರ ಆರೋಪ-ಪ್ರತ್ಯಾರೋಪಗಳು ಆರಂಭವಾಗಿವೆ. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಅಣ್ಣತಮ್ಮಂದಿರಂತೆ ಇದ್ದ ಎಚ್.ಡಿ ಕುಮಾರಸ್ವಾಮಿ ಹಾಗೂ ಡಿ.ಕೆ ಶಿವಕುಮಾರ್ ನಡುವೆ ಶೀತಲ ಸಮರ ಏರ್ಪಟ್ಟಂತೆ ಕಾಣುತ್ತಿದೆ.
Recommended Video
ಇಂದು ರಾಮನಗರದಲ್ಲಿ ಮಾತನಾಡಿದ ಮಾಜಿ ಸಿಎಂ ಎಚ್ಡಿಕೆ, ""ಕೆಲವರು ನನಗೆ ಸ್ಲೋ ಪಾಯ್ಸನ್ ಕೊಡ್ತಿದ್ದಾರೆ, ಏನೋ ನಮ್ಮಿಂದಲೇ ಕುಮಾರಸ್ವಾಮಿಗೆ ರಕ್ಷಣೆ ಸಿಕ್ಕಿತು, ಅವರ ಸರ್ಕಾರ ಉಳಿಯಲು ನಾವೇ ಕಾರಣ ಅನ್ನುವ ರೀತಿ ಪ್ರಚಾರ ತೆಗೆದುಕೊಂಡರು'' ಎಂದು ಮಾಜಿ ಸಚಿವ ಡಿ.ಕೆ ಶಿವಕುಮಾರ್ ಗೆ ಪರೋಕ್ಷ ಟಾಂಗ್ ಕೊಟ್ಟಿದ್ದಾರೆ.
ರಾಮನಗರದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿವಿ ಶೀಘ್ರವೇ ಆರಂಭ
ಸರ್ಕಾರ ಉಳಿಯಲು ನಾವೇ ಕಾರಣ ಎನ್ನುವ ಜೊತೆಗೆ ನನಗೆ ಆತ್ಮೀಯತೆ ತೋರಿದರು, ಅದೆಲ್ಲವೂ ನನಗೆ ಗೊತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೆಸರೇಳದೆ ರಾಮನಗರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಆದರೆ ಈ ಬಾರಿ ನಾವು ಯಾವುದೇ ರೀತಿಯಾಗಿ ಮೈಮರೆಯಲ್ಲ, ಹಾಗಾಗಿಯೇ ಈ ಬಾರಿ ರಾಮನಗರ ಜಿಲ್ಲೆಯಲ್ಲಿ ಎಲ್ಲಾ ಚುನಾವಣೆಯಲ್ಲಿಯೂ ನಾನೇ ಇರುತ್ತೇನೆ. ಗ್ರಾ.ಪಂ, ಜಿ.ಪಂ, ತಾ.ಪಂ ಚುನಾವಣೆಗಳ ಜವಾಬ್ದಾರಿ ನಾನೇ ವಹಿಸಿಕೊಳ್ಳುತ್ತೇನೆ ಎಂದು ತಿಳಿಸಿದರು.
ರಾಮನಗರ, ಚನ್ನಪಟ್ಟಣ, ಮಾಗಡಿ ಜೊತೆಗೆ ಕನಕಪುರದಲ್ಲೂ ಚುನಾವಣೆ ಮಾಡುತ್ತೇವೆ, ಈಗಲೂ ಸಹ ಕನಕಪುರದಲ್ಲಿ ಯಾರೇ ಅಭ್ಯರ್ಥಿಯಾದರೂ 50-60 ಸಾವಿರ ಮತಗಳಿವೆ. ನಾನು ಕಳೆದ 15 ವರ್ಷದಿಂದ ಯಾವುದೇ ಲೋಕಲ್ ಚುನಾವಣೆ ಮಾಡಿಲ್ಲ
ಆದರೆ ಈ ಬಾರಿ ನಾನೇ ನೇರವಾಗಿ ಭಾಗವಹಿಸುತ್ತೇನೆ ಎಂದು ಹೇಳಿದರು.
ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಪಕ್ಷ ಮುಗಿಸುವುದು ಸುಳ್ಳು, ಮಂಡ್ಯದಲ್ಲಿ ರೈತರ ಶಾಲು ಹಾಕಿಕೊಂಡು ಕಾರ್ಯಕ್ರಮ ಮಾಡಿದ್ದಾರೆ,
ಅವರಿಗೆ ಗೊತ್ತಾಗಿದೆ. ಕಾಂಗ್ರೆಸ್ ಶಾಲಿಗೆ ಬೆಲೆಯಿಲ್ಲ ಅಂತಾ. ಹಾಗಾಗಿ ಕಾಂಗ್ರೆಸ್ ಶಾಲು ಬಿಟ್ಟು, ರೈತರ ಶಾಲು ಹಾಕಿದ್ದರು ಎಂದು ಲೇವಡಿ ಮಾಡಿದರು.
ಒಂದು ಸಮುದಾಯದ ಮತ ಸೆಳೆದು ಜೆಡಿಎಸ್ ಮುಗಿಸುತ್ತೇವೆ ಅನ್ನುವುದು ಸುಳ್ಳು ಎಂದು ರಾಮನಗರ ಜಿಲ್ಲೆಯ ಬಿಡದಿಯ ಕೇತಗಾನಹಳ್ಳಿಯ ತೋಟದ ಮನೆಯಲ್ಲಿ ಕಾಂಗ್ರೆಸ್ ವಿರುದ್ಧ ಹಾಗೂ ಡಿ.ಕೆ.ಶಿವಕುಮಾರ್ ಹೆಸರು ಬಳಸದೇ ಮಾರ್ಮಿಕವಾಗಿ ಮಾತನಾಡಿದ್ದಾರೆ.