"ನನ್ನ ವೈಯಕ್ತಿಕ ಆಸೆಗಾಗಿ ಸರ್ಕಾರಕ್ಕೆ ನಾನು ಹೀಗೆ ಮಾಡಲ್ಲ" ಎಂದು ಮತ್ತೊಮ್ಮ ಸ್ಪಷ್ಟನೆ ನೀಡಿದ ಎಚ್ ಡಿಕೆ
ಚನ್ನಪಟ್ಟಣ, ಫೆಬ್ರವರಿ 26: "ರಾಜ್ಯದಲ್ಲಿ ಯಾವುದೇ ಸರ್ಕಾರವನ್ನು ಅಸ್ಥಿರ ಮಾಡಲ್ಲ ಎಂದು ವಿಧಾನಸಭೆಯಲ್ಲೇ ತಿಳಿಸಿದ್ದೇನೆ. ಸರ್ಕಾರ ಕೆಡವಿ ರಾಜ್ಯದ ಹಿನ್ನಡೆಗೆ ನಾನು ಕಾರಣನಾಗುವುದಿಲ್ಲ" ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಉಚಿತ ಲ್ಯಾಪ್ಟಾಪ್ ವಿತರಣೆ ಕಾರ್ಯಕ್ರಮದಲ್ಲಿ ನಿನ್ನೆ ಭಾಗವಹಿಸಿ ಮಾತನಾಡಿದರು.
ಬಿಜೆಪಿ ಶಾಸಕ ಉಮೇಶ್ ಕತ್ತಿ ಭೇಟಿ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, "ಉಮೇಶ್ ಕತ್ತಿ ನಮ್ಮ ಸ್ನೇಹಿತರು. ಅವರ ಭೇಟಿಗೆ ಅಷ್ಟು ಮಹತ್ವ ಕೊಡಬೇಕಾಗಿಲ್ಲ. ನಮಗೆ ರಾಜ್ಯದ ಅಭಿವೃದ್ಧಿ ಮುಖ್ಯ. ನನ್ನ ವೈಯಕ್ತಿಕ ಆಸೆ ಆಕಾಂಕ್ಷೆಗಳಿಗಾಗಿ ಸರ್ಕಾರವನ್ನು ಅಸ್ಥಿರಗೊಳಿಸುವಂತಹ ಕೆಲಸದಲ್ಲಿ ಪಾಲುದಾರನಾಗುವುದಿಲ್ಲ. ನನಗೆ ಅದರ ಅವಶ್ಯಕತೆ ಇಲ್ಲ" ಎಂದರು.
ಯಡಿಯೂರಪ್ಪ ಬಗ್ಗೆ ಲೇವಡಿ
ರಾಜ್ಯದ ಬಜೆಟ್ ಬಗ್ಗೆ ಮಾತನಾಡಿದ ಮಾಜಿ ಸಿಎಂ ಎಚ್ಡಿಕೆ, "ಮೈಸೂರಿನಲ್ಲಿ ಸಿಎಂ ಯಡಿಯೂರಪ್ಪ ನಮಗೆ 6 ತಿಂಗಳು ಸಮಯಾವಕಾಶ ಕೊಡಿ, ನಾನು ತೆಗೆದುಕೊಳ್ಳುವ ನಿರ್ಧಾರದಿಂದ ಜನರು ವಿರೋಧ ಪಕ್ಷಗಳಿಗೆ ಬಡಿಗೆಯಲ್ಲಿ ಹೊಡೆಯುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ. ನಾನು ಕಾಯುತ್ತಿದ್ದೇನೆ. ಮುಂದಿನ ತಿಂಗಳ 5 ರಂದು ಯಡಿಯೂರಪ್ಪನವರು ಮಂಡಿಸುವ ಬಜೆಟ್ ನಲ್ಲಿ ಯಾವೆಲ್ಲಾ ಕ್ರಾಂತಿಕಾರಿ ಅಭಿವೃದ್ಧಿ ಮಾಡುತ್ತಾರೆ" ಎಂದು ಲೇವಡಿ ಮಾಡಿದರು.
"ಜನ ಬಡಿಗೇಲಿ ಯಾರಿಗೆ ಹೊಡೀತಾರೆ ಆರು ತಿಂಗಳಲ್ಲಿ ಗೊತ್ತಾಗುತ್ತೆ"
"ಟ್ರಂಪ್ ಭೇಟಿಗೆ ಖರ್ಚು ಮಾಡಿರುವ ಹಣ ಯಾರದ್ದು?"
ಅಮೆರಿಕಾ ಅಧ್ಯಕ್ಷ ಟ್ರಂಪ್ ಸ್ವಾಗತಕ್ಕೆ ಈ ಹಿಂದೆ ಯಾರೂ ಇಷ್ಟು ಹಣ ಖರ್ಚು ಮಾಡಿರಲಿಲ್ಲ ಎಂಬ ಡಿಸಿಎಂ ಅಶ್ವಥ್ ನಾರಾಯಣ್ ಹೇಳಿಕೆಗೆ ಪ್ರತಿಕ್ರಿಯಿಸಿದ ಎಚ್ಡಿಕೆ, "ಅಮೆರಿಕಾ ಅಧ್ಯಕ್ಷರು ಬಂದಿರುವುದಕ್ಕೆ ಖರ್ಚು ಮಾಡಿರುವ ಹಣ ಯಾರದ್ದು? ಅವರಿಗೆ ಖರ್ಚು ಮಾಡಿರುವ ಹಣದಲ್ಲಿ ಗುಜರಾತಿನ ಹತ್ತು ಹಳ್ಳಿಗಳನ್ನು ಅಭಿವೃದ್ಧಿ ಮಾಡಬಹುದಿತ್ತು. ಟ್ರಂಪ್ ಅವರಿಗೆ ಸ್ಲಂ ಕಾಣಬಾರದು ಅಂತ ಗೋಡೆ ಕಟ್ಟುವ ಬದಲು ಅದೇ ಸ್ಲಂ ಅಭಿವೃದ್ಧಿ ಮಾಡಬಹುದಿತ್ತು" ಎಂದು ಟೀಕಿಸಿದರು.
"ಮುಂದಿನ ವರ್ಷದಿಂದ ಲ್ಯಾಪ್ ಟಾಪ್ ವಿತರಣೆ ಇರಲ್ಲ"
ರಾಜ್ಯದ ಹಲವು ಇಲಾಖೆಗಳಲ್ಲಿ ಒಂದು ಲಕ್ಷ ಕಡತಗಳು ವಿಲೇವಾರಿ ಆಗಿಲ್ಲ ಎಂದು ಸದನದಲ್ಲಿ ಸುದೀರ್ಘ ಚರ್ಚೆಯಾಗಿದೆ. ಸರ್ಕಾರದ ಮಂತ್ರಿಗಳು ತಮ್ಮ ಕಚೇರಿಯಲ್ಲಿ ಕುಳಿತು ಕಡತಗಳ ವಿಲೇವಾರಿ ಮಾಡಬೇಕು. ಭ್ರಷ್ಟ ವ್ಯವಸ್ಥೆಗೆ ಉತ್ತೇಜನ ನೀಡಲು ಸರ್ಕಾರ ಕಡತಗಳನ್ನು ವಿಲೇವಾರಿ ಮಾಡಿಲ್ವಾ ಎಂದು ಯಡಿಯೂರಪ್ಪಗೆ ಪ್ರಶ್ನೆ ಮಾಡಿದ ಎಚ್ ಡಿಕೆ, "ಕಾಂಗ್ರೆಸ್ ಸರ್ಕಾರ ಈ ಹಿಂದೆ ಒಂದು ವರ್ಗದ ವಿದ್ಯಾರ್ಥಿಗಳಿಗೆ ಮಾತ್ರ ಲ್ಯಾಪ್ಟಾಪ್ ನೀಡಿತ್ತು. ಆದರೆ ನಾನು ಅಧಿಕಾರಕ್ಕೆ ಬಂದಾಗ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೂ ಲ್ಯಾಪ್ಟಾಪ್ ನೀಡಿದ್ದೇನೆ. ಈಗಾಗಲೇ ಬಿಜೆಪಿಯವರು ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಣೆಯನ್ನು ಕೈಬಿಡುವ ನಿರ್ಧಾರ ಮಾಡಿದ್ದಾರೆ. ಹಾಗಾಗಿ ಮುಂದಿನ ವರ್ಷದಿಂದ ಲ್ಯಾಪ್ ಟಾಪ್ ವಿತರಣೆ ಇರುವುದಿಲ್ಲ" ಎಂದರು.
ನಿಖಿಲ್-ರೇವತಿ ವಿವಾಹ ಸಿದ್ಧತಾ ಕಾರ್ಯ; ಎಚ್ ಡಿಕೆ ದಂಪತಿ ವಿಶೇಷ ಪೂಜೆ
ಮಾಧ್ಯಮಗಳ ವಿರುದ್ಧ ಮತ್ತೆ ಹರಿಹಾಯ್ದ ಎಚ್ ಡಿಕೆ
ಕುಮಾರಸ್ವಾಮಿ ಸಾಲ ಮನ್ನಾ ಮಾಡಲು ಹೋಗಿ ಸರ್ಕಾರದ ಆರ್ಥಿಕ ಪರಿಸ್ಥಿತಿಯನ್ನು ಹಾಳು ಮಾಡಿದ್ದಾರೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ನಾನು ರಾಜ್ಯದ ಯಾವುದೇ ಆರ್ಥಿಕ ಪರಿಸ್ಥಿತಿಯನ್ನು ಬದಲಾಯಿಸಿಲ್ಲ ಎಂದು ತಿರುಗೇಟು ನೀಡಿದರು. ಮಾಧ್ಯಮದವರು ನನ್ನ ಒಳ್ಳೆ ಯೋಜನೆಗಳನ್ನು ಜನರಿಗೆ ತೋರಿಸಲೇ ಇಲ್ಲ. ನನ್ನನ್ನು ಹೊರದಬ್ಬುವ ಕೆಲಸವನ್ನಷ್ಟೆ ಮಾಡಿದರು ಎಂದು ಮಾಧ್ಯಮದವರ ವಿರುದ್ಧ ಹರಿಹಾಯ್ದರು. ಕೆಲ ಯೋಜನೆಗಳಿಗೆ ಮೀಸಲಿಟ್ಟಿದ್ದ ಹಣವನ್ನು ಹಿಂಪಡೆದಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ ನೆರೆ ಪರಿಹಾರ ನೀಡಲು ಹಣ ಬಳಸಿದ್ದೇವೆ ಎನ್ನುವ ಉತ್ತರ ನೀಡುತ್ತಾರೆ. ಆದರೆ ಅಲ್ಲೂ ಸಮರ್ಪಕವಾಗಿ ಪರಿಹಾರ ನೀಡದೇ ನೆರೆ ಹಾವಳಿಯ ಪರಿಹಾರ ವಿತರಣೆಯ ಹೆಸರಲ್ಲಿ ಸರ್ಕಾರ ಹಣ ಲೂಟಿ ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.