ಮೊದಲು ನಮ್ಮ ರೈತರನ್ನು ಉಳಿಸಬೇಕಿದೆ: ಎಚ್.ಡಿ. ಕುಮಾರಸ್ವಾಮಿ
Recommended Video
ರಾಮನಗರ, ಜೂನ್.22 : ಮಂಡ್ಯ ಜಿಲ್ಲೆ ಸೇರಿದಂತೆ ಕೆಲವು ಕಡೆ ಬೆಳೆದು ನಿಂತಿರುವ ಪೈರು ಒಣಗುತ್ತಿರುವುದು ನನ್ನ ಗಮನಕ್ಕೆ ಬಂದಿದ್ದು, ಮೊದಲು ಬೆಳೆಗಳಿಗೆ ನೀರು ಬಿಡುವಂತೆ ಸೂಚಿಸಿರುವೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ತಾಲೂಕಿನ ಕುರುಬರಹಳ್ಳಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಜಲಾಶಯಗಳಿಂದ ನೀರು ಬಿಡದೇ ಇರುವುದರಿಂದ ಬೆಳೆಗಳೆಲ್ಲಾ ಒಣಗಿ ಹೋಗುತ್ತಿವೆ. ಮಂಡ್ಯ ಜಿಲ್ಲೆ ಸೇರಿದಂತೆ ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಒಣಗುತ್ತಿರುವ ಬೆಳೆಗೆ ಜಲಾಶಯಗಳಿಂದ ನೀರು ಬಿಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.
ಒತ್ತಡದ ನಡುವೆಯೂ ಅಂಧ ಮಕ್ಕಳ ಯೋಗಕ್ಷೇಮ ವಿಚಾರಿಸಿದ ಎಚ್ ಡಿಕೆ
ರೈತರು ಬೆಳೆದಿರುವ ಕಬ್ಬು ಮತ್ತು ಭತ್ತದ ಬೆಳೆ ಉಳಿಯಬೇಕಾಗಿದೆ. ಹಾಗಾಗಿ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ರಚನೆಯಾಗಿರುವ ಹಿನ್ನೆಲೆಯಲ್ಲಿ ಅದರ ಒಪ್ಪಿಗೆ ಪಡೆಯುವುದು ಸೇರಿದಂತೆ ಯಾವುದೆ ತಾಂತ್ರಿಕ ಸಮಸ್ಯೆ, ಕಾನೂನು ಸಮಸ್ಯೆ ಎದುರಾದರೂ, ಅದರ ಜವಾಬ್ದಾರಿಯನ್ನು ನಾನು ಹೊರುತ್ತೇನೆ ಎಂದು ಹೇಳಿದರು.
ತಮಿಳುನಾಡಿಗೆ ಈ ತಿಂಗಳು ಬಿಡಬೇಕಾದ ನೀರು ಬಿಟ್ಟಿದ್ದೇವೆ. ಈಗ ನಮ್ಮ ರೈತರನ್ನು ಉಳಿಸಬೇಕಾಗಿದೆ. ಇದಕ್ಕಾಗಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಕಾಯುತ್ತ ಕುಳಿತುಕೊಳ್ಳಲು ಸಾಧ್ಯವಿಲ್ಲ. ನ್ಯಾಯಾಧಿಕರಣ ನಿಗದಿ ಪಡಿಸಿರುವ ನೀರನ್ನು ಈಗಾಗಲೇ ತಮಿಳುನಾಡಿಗೆ ಬಿಟ್ಟಿರುವುದರಿಂದ, ಆದೇಶ ಪಾಲನೆಯಾದಂತಾಗಿದೆ ಎಂದರು.
ಸಚಿವ ಡಿ.ಕೆ. ಶಿವಕುಮಾರ್ ಅವರು ಸದ್ಯಕ್ಕೆ ರಾಜೀನಾಮೆ ನೀಡುವ ಅಗತ್ಯವಿಲ್ಲ. ಅಗತ್ಯ ಬಿದ್ದಾಗ ಹೇಳುತ್ತೇನೆ. ಐಟಿ ದಾಳಿ ಕುರಿತು ಕಾನೂನು ವ್ಯಾಪ್ತಿಯಲ್ಲಿ ಹೋರಾಟ ಮಾಡಲು ಅವಕಾಶವಿದೆ. ಡಿ.ಕೆ. ಶಿವಕುಮಾರ್ ಅವರು ಹೋರಾಟ ಮಾಡುತ್ತಿದ್ದಾರೆ.
ದ್ವೇಷದ ರಾಜಕಾರಣದಿಂದ ಇದೆಲ್ಲಾ ನಡೆಯುತ್ತಿದೆ. ಸದ್ಯಕ್ಕೆ ರಾಜೀನಾಮೆ ಬೇಕಿಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದರು.