ಜೆಡಿಎಸ್ ರೆಬೆಲ್ ಶಾಸಕರಿಗೆ ಟಾಂಗ್ ನೀಡಿದ ಎಚ್ಡಿಕೆ
ರಾಮನಗರ, ಜನವರಿ 19: ಜೆಡಿಎಸ್ ಕೋರ್ ಕಮಿಟಿಯಲ್ಲಿ ಶಾಸಕ ಜಿ.ಟಿ ದೇವೇಗೌಡ ಅವರ ಹೆಸರು ಕೈಬಿಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಚನ್ನಪಟ್ಟಣದಲ್ಲಿ ಮಾತನಾಡಿದ ಮಾಜಿ ಸಿಎಂ ಎಚ್ಡಿಕೆ, ಜೆಡಿಎಸ್ ಕೋರ್ ಕಮಿಟಿಯಲ್ಲಿ ಹೆಸರು ಕೈಬಿಟ್ಟ ಏಕೆಂದರೆ, ಅವರಿಗೆ ಪಕ್ಷದ ಸಂಘಟನೆ ಬಗ್ಗೆ ಆಸಕ್ತಿಯಿಲ್ಲ. ಅವರೇ ಹೇಳಿದ್ದಾರೆ, ನನಗೆ ನನ್ನ ಕ್ಷೇತ್ರ ಮುಖ್ಯ ಎಂದಿದ್ದಾರೆ ಎಂದರು.
"ನಟನೆ ಮಾಡುವುದನ್ನು ಎಚ್.ಡಿ ಕುಮಾರಸ್ವಾಮಿ ನೋಡಿ ಕಲಿಯಬೇಕು''
ರೆಬೆಲ್ ಜೆಡಿಎಸ್ ಶಾಸಕರಿಗೆ ಎಚ್.ಡಿ ಕುಮಾರಸ್ವಾಮಿ ಟಾಂಗ್ ನೀಡಿದ್ದು, ಪಕ್ಷದ ಸಂಘಟನೆಗೆ ಸಮಯ ಕೊಡಲು ಆಗಲ್ಲ ಎಂದಿದ್ದಾರೆ. ಈಗ ಅವರಿಗೆ ಕ್ಷೇತ್ರದ ಬಗ್ಗೆ ಗಮನ ಬಂದಿದೆ. ಹಾಗಾಗಿ ಕೇವಲ ವಿಸಿಟಿಂಗ್ ಕಾರ್ಡ್ ಗಾಗಿ ನಾನು ಅವಕಾಶ ಕೊಡಬೇಕಾ ಎಂದು ಎಚ್ಡಿಕೆ ಪ್ರಶ್ನಿಸಿದರು.
ಹೊರಟ್ಟಿಯವರಿಗೆ ವಯಸ್ಸಾಗಿಲ್ಲವಾ?
ಇಲ್ಲಿ ವಯಸ್ಸಿನ ವಿಚಾರ ಬರಲ್ಲ, ಹೊರಟ್ಟಿಯವರಿಗೆ ವಯಸ್ಸಾಗಿಲ್ಲವಾ? ಜೆಪಿ ಭವನದಲ್ಲಿ ಬಂದು ದೇವೇಗೌಡರ ಜೊತೆಗೆ ಬಂದು ಚರ್ಚೆ ಮಾಡಲಿ. ಇಲ್ಲಿ ಕೆಲಸ ಮಾಡುವವರಿಗೆ ಅವಕಾಶ ಕೊಡಲಾಗಿದೆ. ಮಾಧ್ಯಮಗಳ ಮೂಲಕ ನನಗೆ ಸಂದೇಶ ಕೊಡುವುದು ಬೇಡ ಎಂದು ತಿರುಗೇಟು ನೀಡಿದರು. ಮುಂದಿನ ಚುನಾವಣೆ ಬಂದಾಗ ಯಾರ್ಯಾರು ಎಲ್ಲಿರುತ್ತಾರೋ ಗೊತ್ತಿಲ್ಲ. ಇವತ್ತು ಪಕ್ಷ ನಿಷ್ಠೆಗಿಂತಲೂ ಅವರ ಸ್ಥಾನಮಾನಗಳೇ ಮುಖ್ಯ. ಕಾರ್ಯಕರ್ತರ ಶ್ರಮ, ಕಷ್ಟ-ಸುಖದ ಬಗ್ಗೆ ಯಾರಿಗೂ ಅರಿವಿಲ್ಲ. ಕಾರ್ಯಕರ್ತರನ್ನು ನಂಬಿ ರಾಜಕಾರಣ ಮಾಡ್ತೇವೆ ಎಂದರು.
ಹೊಸ ಪದಾಧಿಕಾರಿಗಳ ನೇಮಕ
30 ಜಿಲ್ಲೆಗಳಲ್ಲೂ ಪಕ್ಷದ ಹೊಸ ಪದಾಧಿಕಾರಿಗಳ ನೇಮಕ ಮಾಡಲಾಗುತ್ತಿದ್ದು, ಈಗಾಗಲೇ ಎಲ್ಲಾ ರೀತಿಯ ತಯಾರಿ ನಡೆದಿದೆ. ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಮುಂದಾಗಿದ್ದೇವೆ ಎಂದು ತಿಳಿಸಿದರು.
ಈಗ ಮಂತ್ರಿಯಾದವರು ಇನ್ನು ಪೊಗರ್ ದಸ್ತಾಗಿ ಕೆಲಸ ಮಾಡಲು ಅನುಕೂಲವಾಯ್ತು ಎಂದು ಹೇಳುವ ಮೂಲಕ ಲೆಟರ್ ಹೆಡ್ ವಿಚಾರವಾಗಿ ಸಿಪಿ ಯೋಗೇಶ್ವರ್ ಗೆ ಎಚ್ಡಿಕೆ ಟಾಂಗ್ ನೀಡಿದರು. ಪ್ರಾಮಾಣಿಕ ಅಧಿಕಾರಿಗಳ ಮೂಲಕ ಕೆಲಸ ಮಾಡಲಿ, ಅವರೇ ಹೆಸರು ಪಡೆಯಲಿ. ಈಗ ಹಣ ಮಾಡಲು ರಾಜ್ಯ ಮಟ್ಟದಲ್ಲಿ ಅಧಿಕಾರ ಕೊಟ್ಟಿದ್ದಾರೆ, ಮೊದಲು ತಾಲೂಕು ಮಟ್ಟದಲ್ಲಿ ನಡೆಯುತ್ತಿತ್ತು ಎಂದು ಲೇವಡಿ ಮಾಡಿದರು.
ಮಂತ್ರಿಗೆ ಏನ್ ಕೊಂಬಿರುತ್ತಾ?
ನಾನು ರಾಜಕೀಯಕ್ಕೆ ಬಂದಾಗಿನಿಂದಲೂ ಮಂತ್ರಿಗಳನ್ನು ನೋಡಿದ್ದೇನೆ. ಮಂತ್ರಿಗೆ ಏನ್ ಕೊಂಬಿರುತ್ತಾ? ನನಗೆ ಯಾವ ರೀತಿಯ ಭಯವಿಲ್ಲ.
ನಾನು ಸಿಎಂ ಆಗಿದ್ದೆ, ಮಂತ್ರಿಗಳನ್ನು ನೋಡಿದ್ದೇನೆ, ಸಿಎಂ ಗಳನ್ನೂ ನೋಡಿದ್ದೇನೆ. ಜನ ನಮಗೆ ದೆಹಲಿಯನ್ನು ತೋರಿಸಿದ್ದಾರೆ. ಅಧಿಕಾರ ಬಂದಾಗ ಬಡವರ ಬಗ್ಗೆ ಚಿಂತನೆ ಮಾಡಲಿ, ಬಡವರ ಪರವಾಗಿ ಕೆಲಸ ಮಾಡಲಿ. ಬಡವರಿಂದ ಹಣ ಲೂಟಿ ಮಾಡಬಾರದು ಹಾಗೂ ನನ್ನನ್ನು ಯಾರೂ ಕಟ್ಟಿಹಾಕಲು ಸಾಧ್ಯವಿಲ್ಲವೆಂದು ಹರಿಹಾಯ್ದರು.
Recommended Video
ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿರುವುದು ಅದನ್ನೇ
ಸಚಿವ ಸಿಪಿ ಯೋಗೇಶ್ವರ್ ವೈಯಕ್ತಿಕವಾಗಿ ಸ್ನೇಹಿತರು, ಆದರೆ ಕಾರ್ಯಕರ್ತರ ಕುತ್ತಿಗೆ ಕೊಯ್ದು ಸ್ನೇಹ ಉಳಿಸಿಕೊಳ್ಳಲು ಆಗಲ್ಲ. ವೈಯಕ್ತಿಕ ಸ್ನೇಹ ಬೇರೆ, ರಾಜಕೀಯ ಬೇರೆ. ಯಡಿಯೂರಪ್ಪನವರೂ ನನಗೆ ಸ್ನೇಹಿತರು, ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿರುವುದು ಅದನ್ನೇ ಎಂದು ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಎಚ್ಡಿಕೆ ಹೇಳಿದರು.