ಚನ್ನಪಟ್ಟಣಕ್ಕೆ ನಾನೇ ಮಂತ್ರಿ, ನಾನೇ ಸರ್ಕಾರ: ಎಚ್.ಡಿ ಕುಮಾರಸ್ವಾಮಿ
ರಾಮನಗರ, ನವೆಂಬರ್ 27: ಚನ್ನಪಟ್ಟಣಕ್ಕೆ ನಾನೇ ಮಂತ್ರಿ, ನಾನೇ ಸರ್ಕಾರ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಚನ್ನಪಟ್ಟಣದಲ್ಲಿ ಮಾತನಾಡಿದ ಎಚ್.ಡಿ ಕುಮಾರಸ್ವಾಮಿ, ಬಿಜೆಪಿಯಲ್ಲಿ ಮಂತ್ರಿ ಮಾಡಬೇಡಿ ಎಂದು ನಾನು ಹೇಳಿದ್ದೀನಂತೆ. ಯಾರನ್ನೋ ಮಂತ್ರಿ ಮಾಡಿದರೆ ನಾನು ಹೆದರಿಕೊಳ್ಳುವ ವ್ಯಕ್ತಿಯಲ್ಲ ಎಂದು ಮಾಜಿ ಸಿಎಂ ಸಿ.ಪಿ ಯೋಗೇಶ್ವರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪದವಿ ಕಾಲೇಜು ತೆರೆಯುವ ವಿಚಾರವಾಗಿ ಸರ್ಕಾರಕ್ಕೆ ಎಚ್ಡಿಕೆ ಸಲಹೆ
ಕ್ಷೇತ್ರದ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಲು ಮಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದೇನೆ. ಅದರ ಹೊರತಾಗಿ ರಾಜಕೀಯವಾಗಿ ಯಾವುದೇ ವಿಚಾರವನ್ನು ಚರ್ಚೆ ಮಾಡಿಲ್ಲ ಎಂದರು.
ಎಂಥೆಂತವರನ್ನು ನಾವು ನೋಡಿಲ್ಲ, ಇಲ್ಯಾರೋ ಮಂತ್ರಿಯಾದರೆ ಹೆದರಿಕೊಂಡು ಹೋಗುತ್ತೀವಾ, ಅವರು 20 ಕೆರೆ ತುಂಬಿಸಿರೋದಕ್ಕೆ ಭಗೀರಥ ಆಗಿಬಿಟ್ಟರು, ನಾನು 128 ಕೆರೆ ತುಂಬಿಸಿದ್ದೇನೆ. ನಾನು ಪ್ರಾಮಾಣಿಕವಾಗಿ ಕೆಲಸ ಮಾಡಿರುವ ವ್ಯಕ್ತಿ ಎಂದು ವಾಗ್ದಾಳಿ ನಡೆಸಿದರು.
ರಾಮನಗರ ಜಿಲ್ಲೆಯಲ್ಲಿ ಬಡವರಿಗೆ ಅನ್ಯಾಯ ಹಾಗೂ ಅಕ್ರಮ ಚಟುವಟಿಕೆ ನಡೆಯಲು ಅವಕಾಶ ಮಾಡಿಕೊಡುವುದಿಲ್ಲ. ಯಡಿಯೂರಪ್ಪ ನಮ್ಮ ಜಿಲ್ಲೆಯವರನ್ನೇ ನಾಲ್ಕು ಜನ ಮಂತ್ರಿ ಮಾಡಲಿ. ಇವರನ್ನು ಮಂತ್ರಿ ಮಾಡಬೇಡಿ ಎಂದು ಕೀಳು ಮಟ್ಟಕ್ಕೆ ಇಳಿಯುವುದಿಲ್ಲ ಎಮದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಹೇಳಿದರು.
ಲಿಂಗಾಯತ ಸಮುದಾಯವನ್ನು ಒಬಿಸಿಗೆ ಸೇರ್ಪಡೆ ಮಾಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಮೀಸಲಾತಿ ಹಾಗೂ ಪ್ರಾಧಿಕಾರ ರಚನೆ ಮಾಡುವುದು ಅವರವರ ಇಚ್ಛೆ. ಪ್ರತಿ ಕುಟುಂಬಕ್ಕೂ ವಸತಿ, ಶಿಕ್ಷಣ, ಆರೋಗ್ಯ ಹಾಗೂ ಉದ್ಯೋಗ ಕಲ್ಪಿಸುವುದು ಸರ್ಕಾರದ ಕೆಲಸ. ಸ್ವಾರ್ಥಕ್ಕಾಗಿ ವಿವಾದಗಳ ವಿಚಾರಕ್ಕೆ ಫಲಾಪೇಕ್ಷೆ ಇಟ್ಟುಕೊಂಡು ನಾನು ತಲೆಹಾಕುವುದಿಲ್ಲ ಎಂದರು.