ಕಾಂಗ್ರೆಸ್ ನಾಯಕರಿಂದ ನನಗೆ ತೊಂದರೆಯಾಗಿಲ್ಲ: ಕುಮಾರಸ್ವಾಮಿ
ರಾಮನಗರ, ಜುಲೈ.17: ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ಎಚ್.ಡಿ.ಕುಮಾರಸ್ವಾಮಿ ಅವರು ಸೋಮವಾರ ಸಂಜೆ ರಾಮನಗರಕ್ಕೆ ಭೇಟಿ ನೀಡಿ, ಸುಮಾರು 50 ಕೋಟಿಗೂ ಅಧಿಕ ಮೊತ್ತದ ವಿವಿಧ ಕಾಮಗಾರಿ ಹಾಗೂ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು.
ಸಿಎಂಗೆ ಸಚಿವ ಡಿ.ಕೆ.ಶಿವಕುಮಾರ್ ಸಹ ಸಾಥ್ ನೀಡಿದರು. ರೇಷ್ಮೆ ನಗರಿ ರಾಮನಗರ ಜಿಲ್ಲೆ ಕುಮಾರಸ್ವಾಮಿ ಅವರ ಕರ್ಮ ಭೂಮಿ. ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಚಿಂತನೆ ನಡೆಸಿರುವ ಕುಮಾರಸ್ವಾಮಿ, ಬಜೆಟ್ ನಲ್ಲಿ ರಾಮನಗರ ಅಭಿವೃದ್ಧಿಗಾಗಿ 47 ಕೋಟಿ ಹಣ ಮೀಸಲಿಟ್ಟಿದ್ದಾರೆ.
ಸಿಎಂ ಕುಮಾರಸ್ವಾಮಿಗೆ ಕಿರುಕುಳ ನೀಡುತ್ತಿರುವ ಕಾಂಗ್ರೆಸ್ ನಾಯಕರ್ಯಾರು?!
ಈ ಹಿನ್ನೆಲೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಜಿಲ್ಲಾ ಕಚೇರಿ ಆವರಣದಲ್ಲಿ ಚಾಲನೆ ನೀಡಿ, ಶಿಲಾ ವಿನ್ಯಾಸ ನೆರವೇರಿಸಿದರು. ನಂತರ ಜಿಲ್ಲಾ ತಾಲೂಕು ಕಚೇರಿಯಲ್ಲಿ ಎಲ್ಲಾ ವರ್ಗದ ಅಧಿಕಾರಿಗಳ ಸಭೆ ನಡೆಸಿ, ರೇಷ್ಮೆ ಬೆಳೆಗಾರರ ಬಗ್ಗೆ ಪ್ರಮುಖವಾಗಿ ಚರ್ಚೆ ನಡೆಸಿದರು.
ನಂತರ ಮಾತನಾಡಿದ ಅವರು, ಕುಮಾರಣ್ಣ ಬಂದಾಗಲೇ ಎಲ್ಲರಿಗೂ ಹೊಟ್ಟೆ ನೋವು ಪ್ರಾರಂಭವಾಗುತ್ತೆ. ಈಗ ತಾನೇ ರೈತರ ಸಾಲಮನ್ನಾ ಮಾಡಿದ್ದೇನೆ. ಇನ್ನೂ ರೇಷ್ಮೆ ಗೂಡಿಗೆ ಆರು ತಿಂಗಳು ಬೆಂಬಲ ಬೆಲೆ ಕೊಡಬೇಕು.
ಇದೀಗ ಒಂದರ ಮೇಲೆ ಒಂದು ಸಮಸ್ಯೆ ಬರುತ್ತಿದೆ. ಹಾಲಿನ ಉತ್ಪಾದನೆ ಜಾಸ್ತಿ ಆಗಿದೆ. ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ನಾನು ಈಗಲೇ ಮುಳ್ಳಿನ ದಾರಿಯಲ್ಲಿ ನಡೆಯುತ್ತಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಅರುಣ್ ಜೇಟ್ಲಿ ಅವರ ಟ್ವೀಟ್ ಗೆ ತಿರುಗೇಟು ನೀಡಿದ ಕುಮಾರಸ್ವಾಮಿ, ಖಾರವಾಗಿ ಪ್ರತಿಕ್ರಿಯೆ ನೀಡಿದರು. "ನಾನು ಕಣ್ಣೀರು ಹಾಕಿದ್ದು ಕಾಂಗ್ರೆಸ್ ನವರು ತೊಂದರೆ ಕೊಡುತ್ತಿದ್ದಾರೆ ಎಂದಲ್ಲ. ಕಾಂಗ್ರೆಸ್ ನವರು ಮುಕ್ತವಾಗಿ ಸಹಕಾರ ನೀಡಿದ್ದಾರೆ. ಹೀಗಾಗಿ ರಾಹುಲ್ ಗಾಂಧಿಯವರನ್ನು ಶ್ಲಾಘಿಸುತ್ತೇನೆ.
ಕಾಂಗ್ರೆಸ್ ನಾಯಕರಿಂದ ನನಗೆ ಯಾವುದೇ ತೊಂದರೆಯಾಗಿಲ್ಲ. ಕಾಂಗ್ರೆಸ್ ನಿಂದ ತೊಂದರೆಯಾಗಿದೆ ಎಂದು ತಿರುಚಿ ಅಪಪ್ರಚಾರ ಮಾಡಿದ್ದಾರೆ ಮಾಧ್ಯಮದವರು" ಎಂದು ಮಾಧ್ಯಮಗಳ ವಿರುದ್ಧ ಹರಿಹಾಯ್ದರು.