ಬಿಡದಿಯಲ್ಲಿ ಸ್ಥಳ ಪರಿಶೀಲನೆಗೆ ಬಂದ ಹಿರೇಮಠ್ ಮೇಲೆ ಮೊಟ್ಟೆ ಎಸೆದ ಗ್ರಾಮಸ್ಥರು
ಬಿಡದಿ, ಜನವರಿ 20: ಮಾಜಿ ಸಿ.ಎಂ. ಎಚ್.ಡಿ. ಕುಮಾರಸ್ವಾಮಿ ಹಾಗೂ ಡಿ.ಸಿ ತಮ್ಮಣ್ಣ ಅವರು ಜಮೀನು ಒತ್ತುವರಿ ಮಾಡಿದ್ದಾರೆ ಎಂದು ಆರೋಪಿಸಿ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿದ್ದ ಸಾಮಾಜಿಕ ಕಾರ್ಯಕರ್ತ ಎಸ್ ಆರ್ ಹಿರೇಮಠ್ ಅವರು ಇಂದು ಸ್ಥಳ ಪರಿಶೀಲನೆಗೆ ಬಂದಾಗ ಕೋಳಿ ಮೊಟ್ಟೆಯಿಂದ ಹೊಡೆದ ಘಟನೆ ಕೇತಿಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕೇತಿಗಾನಹಳ್ಳಿ ಗ್ರಾಮದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಜಮೀನು ಖರೀದಿಸಿದ್ದು, ಇದೇ ಜಮೀನಿಗೆ ಸಂಬಂಧಿಸಿದಂತೆ ಲೋಕಾಯುಕ್ತಕ್ಕೆ ಹಿರೇಮಠ್ ದೂರು ನೀಡಿದ್ದರು. ಹೀಗಾಗಿ ಸ್ಥಳ ಪರಿಶೀಲನೆಗೆ ಬಂದ ಹಿರೇಮಠ್ ಅವರ ಮೇಲೆ ಎಚ್ಡಿಕೆ ಬೆಂಬಲಿಗರು ಮತ್ತು ಗ್ರಾಮಸ್ಥರು ಕೋಳಿ ಮೊಟ್ಟೆ ಹೊಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಡಿಕೆ ಶಿವಕುಮಾರ್ ಜೈಲಿನಲ್ಲಿದ್ದು ವಿಚಾರಣೆ ಎದುರಿಸಲಿ: ಎಸ್ಆರ್ ಹಿರೇಮಠ್
ಎಚ್ಡಿಕೆಗೆ ಸೇರಿದ ಜಮೀನಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದ ಹಿರೇಮಠ್, ಸ್ವರಾಜ್ ಪಕ್ಷದ ರವಿ ಕೃಷ್ಞಾರೆಡ್ಡಿ ಸೇರಿದಂತೆ ಇತರರೊಂದಿಗೆ ಗ್ರಾಮಕ್ಕೆ ಬಂದಾಗ ಮೊಟ್ಟೆ ಹೊಡೆದಿದ್ದಾರೆ. ಕಾರಿನ ಚಕ್ರದ ಗಾಳಿಯನ್ನೂ ತೆಗೆದಿದ್ದಾರೆ.