ಚಕ್ಕೆರೆ ಗ್ರಾಮದ ದೇಗುಲ ಉದ್ಘಾಟನೆಯಲ್ಲಿ ಎಚ್ ಡಿಕೆ- ಯೋಗೇಶ್ವರ್ ಮುಖಾಮುಖಿ
ಚನ್ನಪಟ್ಟಣ (ರಾಮನಗರ ಜಿಲ್ಲೆ), ಆಗಸ್ಟ್ 4: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಮೊದಲ ಬಾರಿಗೆ, ಆಗಸ್ಟ್ ಐದರ ಸೋಮವಾರದಂದು ಎಚ್. ಡಿ. ಕುಮಾರಸ್ವಾಮಿ ಅವರು ತವರು ಕ್ಷೇತ್ರ ರಾಮನಗರ ಜಿಲ್ಲೆಯ ಚನ್ನಪಟ್ಟಣಕ್ಕೆ ಭೇಟಿ ನೀಡಲಿದ್ದಾರೆ. ಅದರಲ್ಲೂ ಬಿಜೆಪಿ ಮುಖಂಡ ಸಿ. ಪಿ. ಯೋಗೇಶ್ವರ್ ಅವರ ಹುಟ್ಟೂರು ಚಕ್ಕೆರೆ ಗ್ರಾಮದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂಬುದು ಮತ್ತೂ ವಿಶೇಷ.
ಚಕ್ಕೆರೆ ಗ್ರಾಮದಲ್ಲಿನ ಪಟ್ಟಲದಮ್ಮ ದೇವಾಲಯದ ಉದ್ಘಾಟನಾ ಸಮಾರಂಭದಲ್ಲಿ ಕುಮಾರಸ್ವಾಮಿ ಅವರು ಭಾಗವಹಿಸುತ್ತಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ಸಿ. ಪಿ. ಯೋಗೇಶ್ವರ್ ಅವರು ಅಧ್ಯಕ್ಷತೆ ವಹಿಸಿದ್ದಾರೆ. ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರಕಾರ ಪತನ ಆಗಲು ರಣ ತಂತ್ರ ಹೆಣೆದವರಲ್ಲಿ ಸಿಪಿವೈ ಕೂಡ ಒಬ್ಬರು ಎಂಬ ಮಾತಿದೆ.
ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ : ಸಿ. ಪಿ. ಯೋಗೇಶ್ವರ
ಇನ್ನು ಸರಕಾರ ಬಿದ್ದಾಗ ಯೋಗೇಶ್ವರ್ ಬೆಂಬಲಿಗರು, 'ಸೈನಿಕನ ತಾಕತ್ತು ಜಗತ್ತಿಗೆ ಗೊತ್ತು' ಎಂಬ ವಾಕ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಅದಕ್ಕೆ ಪ್ರತಿಯಾಗಿ ಕುಮಾರಸ್ವಾಮಿ ಬೆಂಬಲಿಗರು, "ನಕಲಿ ಸೈನಿಕನ ಪಾತ್ರ ಇಲ್ಲ, ಕೇವಲ ವಾಚ್ ಮನ್ ಅಷ್ಟೇ" ಎಂದು ಎದುರೇಟು ನೀಡಿದ್ದರು.
ಇದೀಗ ಎಚ್. ಡಿ. ಕುಮಾರಸ್ವಾಮಿ ಹಾಗೂ ಸಿ. ಪಿ. ಯೋಗೇಶ್ವರ್ ಇಬ್ಬರೂ ದೇವಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖಾಮುಖಿ ಆಗಲಿದ್ದಾರೆ. ಅಷ್ಟೇ ಅಲ್ಲ, ಕಾರ್ಯಕ್ರಮ ಆಹ್ವಾನ ಪತ್ರಿಕೆಯಲ್ಲಿ ಡಿ. ಕೆ. ಶಿವಕುಮಾರ್ ಹಾಗೂ ಡಿ. ಕೆ. ಸುರೇಶ್ ಹೆಸರು ಸಹ ಇವೆ. ಈ ವೇಳೆ ಈ ನಾಯಕರು ಹೇಗೆ ಪ್ರತಿಕ್ರಿಯಿಸುತ್ತಾರೆ, ಹೇಗೆ ಮಾತಿನ ಜವಾಬು ನೀಡುತ್ತಾರೆ, ಅಭಿಮಾನಿಗಳು ಹಾಗೂ ಬೆಂಬಲಿಗರ ಪ್ರತಿಕ್ರಿಯೆಗಳು ಹೇಗೆ ಇರುತ್ತವೆ ಎಂಬುದನ್ನು ಕಾದು ನೋಡಬೇಕಿದೆ.