ಅಕ್ರಮ ಮರಳುಗಾರಿಕೆ: ಸಂಸದ ಡಿಕೆ ಸುರೇಶ್ ವಿರುದ್ಧ ಮಾಜಿ ಸಿಎಂ ಎಚ್ಡಿಕೆ ಗುಡುಗು
ರಾಮನಗರ, ನವೆಂಬರ್ 5: ರಾಮನಗರದ ಹಲವೆಡೆ ಅಕ್ರಮ ಮರಳುಗಾರಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ, ಬೆಂಗಳೂರು ಗ್ರಾಮಾಂತರ ಸಂಸದ ಡಿಕೆ ಸುರೇಶ್ ವಿರುದ್ಧ ಕಿಡಿಕಾರಿದರು.
ಅವನ್ಯಾವನೋ ಸಂಸದ ಇದ್ದಾನಲ್ಲಾ ಅವನ ಚೇಲಾಗಳು ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದಾರೆ, ನನ್ನ ಪಕ್ಷದ ಕಾರ್ಯಕರ್ತರು ಅಕ್ರಮ ಮರಳುಗಾರಿಕೆಯಲ್ಲಿ ಭಾಗಿಯಾಗಿಲ್ಲ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ತಿಳಿಸಿದರು.
ಉಪಚುನಾವಣೆ ಫಲಿತಾಂಶ ನಂತರದ ಬಿಜೆಪಿ ಭವಿಷ್ಯ ನುಡಿದ ಡಿ.ಕೆ ಸುರೇಶ್
ಮರಳು ದಂಧೆ ಮಾಡುವುದಾದರೆ ನನ್ನ ಹತ್ತಿರ ಬರಬೇಡಿ ಎಂದಿದ್ದೇನೆ, ದಂಧೆ ನಡೆಸುವವರು ಇವರೇ, ಜನರಿಂದ ಪ್ರತಿಭಟನೆ ಮಾಡಿಸುವವರು ಇವರೇ. ಕಳೆದ ಬಾರಿ ಕಾಂಗ್ರೆಸ್ ಆಡಳಿತದಲ್ಲಿ ಈ ದಂಧೆ ಪ್ರಾರಂಭವಾಗಿದೆ ಎಂದು ಆರೋಪಿಸಿದರು.
ನಾನು ಮುಖ್ಯಮಂತ್ರಿ ಆಗಿದ್ದಾಗ ಅಕ್ರಮ ಮರಳುಗಾರಿಕೆ ನಿಲ್ಲಿಸಲು ಪ್ರಯತ್ನಪಟ್ಟರೂ ಆಗಲಿಲ್ಲ. ನನ್ನ ವಿರುದ್ಧ ಮಾತನಾಡುವವರು ನನ್ನ ಎದುರಿಗೆ ಬರಲಿ, ಚರ್ಚೆಗೆ ಸಿದ್ಧ ಎಂದು ಪರೋಕ್ಷವಾಗಿ ಸಂಸದ ಡಿ.ಕೆ ಸುರೇಶ್ ಅವರಿಗೆ ಸವಾಲೆಸೆದರು.
ಅವರ ತೆವಲಿಗೆ ನಮ್ಮ ವಿರುದ್ಧ ಈ ರೀತಿಯ ರಾಜಕಾರಣ ಮಾಡುತ್ತಿದ್ದಾರೆ ಎಂದು ಸಂಸದ ಡಿ.ಕೆ ಸುರೇಶ್ ಅವರ ಹೆಸರು ಬಳಸದೇ
ರಾಮನಗರದ ಕೂನಗಲ್ಲು ಗ್ರಾಮದಲ್ಲಿ ಎಚ್ಡಿಕೆ ಕೆಂಡಾಮಂಡಲರಾದರು.
ಆರ್.ಆರ್.ನಗರ ಹಾಗೂ ಶಿರಾ ಉಪ ಚುನಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಶಿರಾ ಕ್ಷೇತ್ರದಲ್ಲಿ ನಾವು ಗೆಲ್ತೇವೆ, ಏನು ಸಮಸ್ಯೆ ಇಲ್ಲ. ಬಿಜೆಪಿಯವರು ಹಣದ ಹೊಳೆ ಹರಿಸಿದ್ದಾರೆ, ಅದರಿಂದ ಗೆಲ್ತೇವೆ ಅಂದುಕೊಂಡಿದ್ದಾರೆ, ಆದರೆ ಅದು ನಡೆಯುವುದಿಲ್ಲವೆಂದರು.
ರಾಜರಾಜೇಶ್ವರಿ ನಗರದಲ್ಲಿ ಈಗಿನ ಚುನಾವಣಾ ವೆಚ್ಚದ ಕೊರತೆ ಇದೆ. ಅದರಿಂದ ಸ್ವಲ್ಪ ಎಡವಟ್ಟಾಗಿದೆ, ಆದರೆ ಎರಡೂ ಕಡೆ ಪಕ್ಷದ ಗೌರವ ಉಳಿಯಲಿದೆ ಎಂದು ತಿಳಿಸಿದರು.
ಮಾಜಿ ಸಚಿವ ವಿನಯ್ ಕುಲಕರ್ಣಿ ಸಿಬಿಐ ವಶಕ್ಕೆ ಪಡೆದಿರುವ ಬಗ್ಗೆ ಮಾತನಾಡಿ, ಅಧಿಕಾರಿಗಳು ಯಾವುದೇ ತನಿಖೆ ನಡೆಸಿದರೂ, ನಿಷ್ಪಕ್ಷಪಾತವಾಗಿ ನಡೆಸಲಿ. ರಾಜಕಾರಣಿಗಳ ಒತ್ತಡಕ್ಕೆ ಮಣಿದು ಕೆಲಸ ಮಾಡದಿರಲಿ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಹೇಳಿದರು.