ಹದಗೆಟ್ಟ ಕಾನೂನು ಸುವ್ಯವಸ್ಥೆ: ವಿಧಾನಸಭೆ ಅಧಿವೇಶನ ಕರೆಯುವಂತೆ ಎಚ್ಡಿಕೆ ಆಗ್ರಹ
ರಾಮನಗರ, ಆಗಸ್ಟ್, 02: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ. ಒಂದು ಕಡೆ ಕೋಮುಸಂಘರ್ಷ ಹೆಚ್ಚಾಗಿದೆ. ಕರಾವಳಿಯಲ್ಲಿನ ಹತ್ಯೆ ಬಳಿಕ ಜನರ ಭಾವನೆಗಳಿಗೆ ದಕ್ಕೆಯಾಗಿದೆ. ಸರ್ಕಾರದ ನಡವಳಿಕೆ ಜನರ ಭಾವನೆಗಳಿಗೆ ದಕ್ಕೆ ತರುತ್ತಿದೆ. ಪೊಲೀಸ್ ಇಲಾಖೆ ಬಗ್ಗೆ ಭಯವೇ ಇಲ್ಲದಂತಾಗಿದೆ ಹಾಗಾಗಿ ಕೂಡಲೇ ವಿಧಾನಸಭಾ ಅಧಿವೇಶನ ಕರೆಯುವಂತೆ ಸರ್ಕಾರಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದರು.
ಬಿಡದಿ ಬಳಿಯ ತಮ್ಮ ತೋಟದ ಮನೆಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಚಿಕ್ಕಬಳ್ಳಾಪುರದಲ್ಲಿ ರಸ್ತೆಯಲ್ಲೇ ಅಘುಂತುಕನೊಬ್ಬ ಹಲ್ಲೆ ನಡೆಸಿದ್ದಾನೆ. ರಸ್ತೆಯಲ್ಲಿ ಓಡಾಡುವವರ ಮೇಲೆ ಹಲ್ಲೆ ನಡೆಸಿದ್ದಾನೆ. ಮನೆ ದರೋಡೆ, ಜೀವ ತೆಗೆಯುವ ಘಟನೆಗಳು ನಡೆಯುತ್ತಿವೆ. ಕಾನೂನು ಪಾಲನೆ ಮಾಡುವಲ್ಲಿ ಸರ್ಕಾರದ ವೈಫಲ್ಯ ಹೆಚ್ಚಾಗಿದೆ ಎಂದು ಆರೋಪಿಸಿದರು.
ನಾಡಿನಲ್ಲಿ ನಿರೀಕ್ಷೆ ಮಾಡದಷ್ಟು ಮಳೆ ಆಗಿದೆ. ಬೆಂಗಳೂರು-ಮೈಸೂರು ರಸ್ತೆ ನಿರ್ಮಾಣದ ವೇಳೆ ಅಂಡರ್ ಪಾಸ್ಗಳನ್ನು ವೈಜ್ಞಾನಿಕವಾಗಿ ನಿರ್ಮಾಣ ಮಾಡಿದ ಕಾರಣ ಸರ್ಕಾರದ ಕಳಪೆ ಕಾಮಗಾರಿ ಬಯಲಾಗಿದೆ. ಕೆರೆ ಏರಿಗಳು ಒಡೆಯುವ ಪರಿಸ್ಥಿತಿ ನಿರ್ಮಾಣ ಆಗಿದೆ. ಅಲ್ಲದೇ ಭಾರೀ ಮಳೆಯಿಂದ ರೈತರು ಕೂಡ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕೃಷಿ ಚಟುವಟಿಕೆಗಳನ್ನು ನಡೆಸಲು ಸಾಕಷ್ಟು ತೊಂದರೆಯಾಗಿದೆ. ಆದರೆ ಸರ್ಕಾರ ಇದಕ್ಕೂ ನಮಗೂ ಸಂಬಂಧವಿಲ್ಲ ಎಂಬಂತೆ ನಿರ್ಲಕ್ಷ್ಯವಹಿಸುತ್ತಿದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.
ಕಲಾಪ ನಡೆಸುವಂತೆ ಹೆಚ್.ಡಿಕೆ ಆಗ್ರಹ
2019ರ ಮಳೆ ಅನಾಹುತದಲ್ಲೂ ಸರ್ಕಾರ ದೊಡ್ಡದೊಡ್ಡ ಘೋಷಣೆ ಮಾಡಿತ್ತು. ಆದರೆ ಸಮರ್ಪಕವಾಗಿ ಪರಿಹಾರ ನೀಡುವಲ್ಲಿ ವಿಫಲವಾಗಿದೆ. ಅಲ್ಲದೇ ಕೋವಿಡ್ ಸಂದರ್ಭದಲ್ಲೂ ಸತ್ತವರಿಗೆ ಪರಿಹಾರ ಸಿಕ್ಕಿಲ್ಲ. ಅಧಿಕಾರಿಳನ್ನು ಕೇಳಿದರೆ ಸ್ಕ್ರೀಂ ನಿಲ್ಲಿಸಿದ್ದಾರೆ ಅಂತಾರೆ. ಸರ್ಕಾರದ ಯಾವುದೇ ಭರವಸೆಗಳೂ ಈಡೇರುತ್ತಿಲ್ಲ. ಇಂತಹ ಸಂದರ್ಭದಲ್ಲಿ ಚರ್ಚೆಯ ಅವಶ್ಯಕತೆ ಇದೆ. ಸರ್ಕಾರ ಸಮಯ ವ್ಯರ್ಥ ಮಾಡದೇ ವಿಧಾನಸಭಾ ಕಲಾಪ ಮಾಡಬೇಕು. ಕೂಡಲೇ ಕಲಾಪ ನಡೆಸುವಂತೆ ಸ್ಪೀಕರ್ ಸರ್ಕಾರಕ್ಕೆ ಕಿವಿ ಹಿಂಡಬೇಕು ಎಂದು ಹೆಚ್.ಡಿ.ಕುಮಾರಸ್ವಾಮಿ ಸಲಹೆ ನೀಡಿದರು.
ಅಮಿತ್ ಶಾ ವಿರುದ್ದ ಆಕ್ರೋಶ
ಅವರು ಕೇಂದ್ರ ಗೃಹ ಸಚಿವರು ಇನ್ನೊಂದಷ್ಟು ಹೆಣ ಬೀಳಿಸಲು ರಾಜ್ಯಕ್ಕೆ ಬರುತ್ತಿರಬೇಕು.
ಗುಜರಾತ್ ಮಾದರಿಯಲ್ಲಿ ಹತ್ಯೆಗಳನ್ನು ಇಲ್ಲಿ ಮುಂದುವರಿಸಲು ಅಮಿತ್ ಶಾ ಇಲ್ಲಿಗೆ ಬರುತ್ತಿದ್ದಾರಾ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದರು. ಚುನಾವಣೆ ಸಮಯದಲ್ಲಿ ನರಬಲಿಗಳನ್ನು ನಡೆಸಿ ರಾಜಕೀಯ ಮಾಡುವುದೇ ಬಿಜೆಪಿಯ ಗುಣ. ಬಿಜೆಪಿ ಅಧಿಕಾರಕ್ಕೆ ಬರಲು ಹಿಂದುತ್ವದ ಹೆಸರಿನಲ್ಲಿ ಮನೆಯಲ್ಲಿದ್ದ ಅಮಾಯಕ ಯುವಕರನ್ನು ಕರೆತಂದರು. ಈಗ ನಾವು ಹೇಳಿದ ಹಾಗೆ ಕೇಳಬೇಕು ಎಂದು ಅಪ್ಪಣೆ ಮಾಡುತ್ತಿದ್ದಾರೆ. ಅಧಿಕಾರದ ಮದದಲ್ಲಿ ತಿಂದು ತೇಗಿದ್ದಾರೆ. ಈಗ ಯುವಕರನ್ನು ಬಲಿ ಪಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿಯ ವಿರುದ್ಧ ಹರಿಹಾಯ್ದರು.
ರಾಜ್ಯದಲ್ಲಿನ ಪೊಲೀಸ್ ಆಡಳಿತ ವ್ಯವಸ್ಥೆಯ ವಿವರಣೆ
ನಾಚಿಕೆಯಾಗಬೇಕು ಗೃಹ ಮಂತ್ರಿಗೆ, ಹಿಂದೂ ಯುವಕ ಹತ್ಯೆಯಾದಾಗ ಯಾಕೆ 50 ಲಕ್ಷ ಕೊಟ್ಟರು? ಈಗ ಮುಸ್ಲಿಂ ಯುವಕನಿಗೆ ಪರಿಹಾರ ಕೊಡಲು ತನಿಖೆ ಮುಗಿಯಲಿ ಅಂತಾರೆ. ಇವರು ಗೃಹ ಸಚಿವರಾಗಲು ಸಮರ್ಥರಿದ್ದಾರಾ? ಗೃಹ ಸಚಿವರಾಗಲು ಆರಗ ಜ್ಞಾನೇಂದ್ರ ಯೋಗ್ಯರಲ್ಲ ಎಂದು ಆಕ್ರೋಶ ಹೊರಹಾಕಿದರು. ರಕ್ತದಾನದ ಮೂಲಕ 18 ಜನರ ಜೀವ ಉಳಿಸಿದ ಯುವಕ ಫಾಜೀಲ್, ಆತನನ್ನ ಬರ್ಬವಾಗಿ ಹತ್ಯೆ ಮಾಡಿದ್ದಾರೆ. ಸ್ಥಳೀಯ ಪೊಲೀಸರು ಮನಸ್ಸು ಮಾಡಿದ್ದರೆ ಯುವಕರ ಹತ್ಯೆಯಾಗದಂತೆ ತಡೆಯಬಹುದಿತ್ತು. ಫಾಜೀಲ್ ಹತ್ಯೆ ಬಗ್ಗೆ ಮಾಹಿತಿ ಇದ್ದರೂ ಪೊಲೀಸರು ತಲೆಕೆಡಸಿಕೊಂಡಿಲ್ಲ. ಸರ್ಕಾರದಲ್ಲಿರುವ ಪೋಲೀಸರ ವೈಫಲ್ಯ ಇದಕ್ಕೆ ಕಾರಣ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಅಶ್ವತ್ಥ್ ನಾರಾಯಣ್ ಹೇಳಿಕೆಗೆ ತಿರುಗೇಟು
ಮನೆಗೆ ಬೆಂಕಿ ಬಿದ್ದಾಗ ಹೆಚ್.ಡಿ.ಕುಮಾರಸ್ವಾಮಿ ಅವರು ಅಡುಗೆ ಮಾಡಿಕೊಳ್ಳುತ್ತಾರೆ ಎಂಬ ಅಶ್ವತ್ಥ್ ನಾರಾಯಣ್ ಹೇಳಿಕೆಗೆ ತಿರುಗೇಟು ಕೊಟ್ಟಿದ್ದಾರೆ. ಅಶ್ವತ್ಥ್ ನಾರಾಯಣ್ ತಲೆಯಲ್ಲಿ ಪ್ರಜ್ಞೆ ಇಟ್ಟುಕೊಂಡು ಮಾತನಾಡಲಿ. ಡಿಕೆ ಸಹೋದರರ ಜೊತೆ ಆಡಿದ ಹಾಗಲ್ಲ. ಕುಮಾರಸ್ವಾಮಿ ಹತ್ತಿರ ಇದೆಲ್ಲ ನಡೆಯುವುದಿಲ್ಲ. ದುಡ್ಡಿನ ಮದದಿಂದ ಅಶ್ವತ್ಥ್ ನಾರಾಯಣ್ ಹೀಗೆ ಮಾತನಾಡುತ್ತಿದ್ದಾರೆ ಗುಡುಗಿದರು.
ರಾಜ್ಯದಲ್ಲಿ ಅನೇಕ ಜ್ವಲಂತ ಸಮಸ್ಯೆಗಳಿದ್ದರೂ ಸರ್ಕಾರ ಲಘುವಾಗಿ ಪರಿಗಣಿಸಿದೆ. ಹೀಗಾಗಿ ಕೂಡಲೇ ವಿಧಾನಸಭೆಯ ಅಧಿವೇಶನ ಕರೆಯಬೇಕು. ಎಲ್ಲದರ ಈ ಬಗ್ಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. 2019ರಿಂದ ಉಂಟಾದ ಮಳೆ ಅನಾಹುತದ ಬಗ್ಗೆ ಸರ್ಕಾರ ದೊಡ್ಡ ಘೋಷಣೆಗಳನ್ನೇ ಮಾಡಿದೆ. 5 ಲಕ್ಷ ಪರಿಹಾರ ನೀಡಿದ ಉದಾಹರಣೆಗಳೇ ಇಲ್ಲ. ಗೊಬ್ಬರದ ಸಮಸ್ಯೆಯೇ ಇಲ್ಲ ಎನ್ನುವ ಸರ್ಕಾರ ರೈತರನ್ನು ಶೋಷಿಸಿದೆ ಎಂದು ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದರು. ರೈತರು ಬೆಳೆ ನಷ್ಟಕ್ಕೆ ಹಾಕಿದ್ದ ಅರ್ಜಿಗಳು ಅಧಿಕಾರಿಗಳ ಕಚೇರಿಯಿಂದ ಮುಂದೆ ಹೊಗಿಲ್ಲ. ಸರ್ಕಾರ ಜಾಹಿರಾತುಗಳ ಮೂಲಕ ಬಿಟ್ಟಿ ಪ್ರಚಾರ ಪಡೆಯುತ್ತಿದೆ. ಇದೇ ರೀತಿ ಸರ್ಕಾರ ಮುಂದುವರಿದರೆ, ಆಡಳಿತ ಪಕ್ಷಕ್ಕೆ ಮಾತ್ರವಲ್ಲ, ವಿರೋಧ ಪಕ್ಷವು ಸಹ ಜನರ ನಂಬಿಕೆ ಕಳೆದು ಕೊಳ್ಳುತ್ತದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.