ಎಚ್ಡಿಕೆ ಮತ್ತು ಡಿಕೆಶಿ ಇಬ್ಬರೂ ರಿಟೈರ್ಡ್ ಕುದುರೆಗಳು; ಸಿ.ಪಿ.ಯೋಗೇಶ್ವರ್
ರಾಮನಗರ, ಜುಲೈ 24: ಎಚ್ಡಿಕೆ ಹಾಗೂ ಡಿಕೆಶಿ ಇಬ್ಬರೂ ರಿಟೈರ್ಡ್ ಕುದುರೆಗಳು ಎಂದು ಬಿಜೆಪಿ ನೂತನ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ವಾಗ್ದಾಳಿ ನಡೆಸಿದರು. ಎಂಎಲ್ಸಿ ಆದ ಬಳಿಕ ಚನ್ನಪಟ್ಟಣಕ್ಕೆ ಮೊದಲ ಭೇಟಿ ನೀಡಿದ ಸಿಪಿವೈ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸುದ್ದಿಗೋಷ್ಟಿ ನಡೆಸಿ ವಾಗ್ದಾಳಿ ನಡೆಸಿದರು.
Recommended Video
ಎಚ್ಡಿಕೆ ಮತ್ತು ಡಿಕೆಶಿ ಎರಡು ರಿಟೈರ್ಡ್ ಕುದುರೆಗಳು. ಅವರಿಂದ ಪಕ್ಷ ಸಂಘಟನೆ ಸಾಧ್ಯವಿಲ್ಲ. ನಾನು ನನ್ನದೇ ಆದ ರೀತಿ ನನ್ನ ಸಾಮರ್ಥ್ಯದ ಇತಿಮಿತಿಯಲ್ಲಿ ಪಕ್ಷ ಸಂಘಟನೆ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಜವಾಬ್ದಾರಿಯನ್ನೂ ಪಕ್ಷ ಕೊಡಬಹುದು, ಕಾದು ನೋಡೋಣ ಎಂದು ಸಿ.ಪಿ.ಯೋಗೇಶ್ವರ್ ಮಂತ್ರಿ ಭಾಗ್ಯದ ಸುಳಿವು ನೀಡಿದರು.
ಪರಿಷತ್ತಿಗೆ ಸೈನಿಕ ಯೋಗೇಶ್ವರ್ ಎಂಟ್ರಿ: ಬಿಎಸ್ವೈ ಸರಕಾರದೊಳಗಿನ ಅಸಲಿ ಗೇಂ ಇನ್ನು ಶುರು?
"ಕ್ಷೇತ್ರದ ಜನರು ನನ್ನ ಕೈಬಿಟ್ಟರೂ ಪಕ್ಷ ಕೈಹಿಡಿದಿದೆ. ಸಾರ್ವಜನಿಕ ಜೀವನ ಕೊನೆಯಾಗಬಾರದು ಎಂದು ಬಿಜೆಪಿ ಪಕ್ಷ ಆಶ್ರಯ ನೀಡಿದೆ. ಮುಂದಿನ ದಿನಗಳಲ್ಲಿ ಚನ್ನಪಟ್ಟಣ ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನಕೊಡುತ್ತೇನೆ, ಕಳೆದ ಎರಡು ವರ್ಷಗಳಲ್ಲಿ ಕುಮಾರ ಸ್ವಾಮಿಯವರು ಕ್ಷೇತ್ರಕ್ಕೆ ಎಷ್ಟು ಅನುದಾನ ತಂದಿದ್ದಾರೆ, ಯಾವೆಲ್ಲ ಕೆಲಸ ಕಾರ್ಯ ಆಗಿವೆ ಎಂದು ಪರಿಶೀಲನೆ ಮಾಡ್ತೇನೆ" ಎಂದು ಹೇಳಿದರು.
ಬಿಜೆಪಿ ಸರ್ಕಾರದಲ್ಲಿ ಎಚ್ಡಿಕೆ ಕ್ಷೇತ್ರದ ಅಭಿವೃದ್ಧಿ ಎಷ್ಟು ಮಾಡಿದ್ದಾರೆಂದು ಮಾಹಿತಿ ಪಡೆಯುತ್ತೇನೆ. ಅಭಿವೃದ್ಧಿ ವಿಚಾರದಲ್ಲಿ ನಾನು ಯಾವ ಹಸ್ತಕ್ಷೇಪ ಮಾಡಲ್ಲ. ಅವರಿಗೆ ಸಹಕಾರ ಕೊಡುತ್ತೇನೆ. ಒಟ್ಟಾರೆ ತಾಲ್ಲೂಕು ಅಭಿವೃದ್ಧಿಯಾಗಬೇಕು ಎನ್ನುವುದು ನನ್ನ ಗುರಿ ಅಷ್ಟೇ. ಡಿ.ಕೆ.ಶಿವಕುಮಾರ್ ಹಿಂದೆಯೂ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದರು. ಈಗ ಅಧ್ಯಕ್ಷರಾಗಿದ್ದಾರೆ. ಆದರೆ ಅವರಿಂದ ಪಕ್ಷ ಕಟ್ಟಲು ಸಾಧ್ಯವಿಲ್ಲ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಅವರಿಗೆ ರಾಜಕೀಯವಾಗಿ ಆಶ್ರಯ ಕೊಡಲಿದೆ ಅಷ್ಟೇ ಎಂದು ಡಿಕೆಶಿ ವಿರುದ್ಧ ಯೋಗೇಶ್ವರ್ ವ್ಯಂಗ್ಯವಾಡಿದರು.