ಮಾಗಡಿಯಲ್ಲಿ ಡಿಕೆಶಿ ಬೆಂಬಲಕ್ಕೆ ನಿಂತ ಎಚ್.ಡಿ.ದೇವೇಗೌಡ
ಮಾಗಡಿ, ನವೆಂಬರ್ 07: ಕನಕಪುರ ಶಾಸಕ ಡಿ.ಕೆ.ಶಿವಕುಮಾರ್ ಅವರು ಬೇರೆ ಪಕ್ಷದಲ್ಲಿರಬಹುದು. ಆದರೆ ಅವರಿಗೆ ತೊಂದರೆಯಾದಾಗ ನಾವು ಅವರ ಬೆಂಬಲಕ್ಕೆ ನಿಂತೆವು. ಅವರೊಂದಿಗೆ ನಾನು ಉತ್ತಮ ಬಾಂಧವ್ಯ ಹೊಂದಿದ್ದೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಡಿಕೆಶಿ ಪರ ಬ್ಯಾಟ್ ಬೀಸಿದರು.
ರಾಮನಗರ ಜಿಲ್ಲೆ ಮಾಗಡಿಯ ಜೆಡಿಎಸ್ ಭವನದಲ್ಲಿ ಗುರುವಾರ ಮಾತನಾಡುತ್ತಿದ್ದ ಜೆಡಿಎಸ್ ಸುಪ್ರಿಮೋ ಎಚ್.ಡಿ.ದೇವೇಗೌಡ, ಉಪಚುನಾವಣೆಯಲ್ಲಿ ನಾವು ಏಕಾಂಗಿಯಾಗಿ ಸ್ಪರ್ಧಿಸುತ್ತೇವೆ. ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದರು.
ರಾಜಕೀಯದಲ್ಲಿ ಶಾಶ್ವತ ಶತ್ರು ಅಂತ ಯಾರೂ ಇರೋದಿಲ್ಲ: ದೇವೇಗೌಡ
"ಪಕ್ಷದಿಂದ ಹೊರಗೆ ಹಾಕಿದ್ದವರಿಗೆ, ಪಕ್ಷ ಕಟ್ಟಲು ನಾನೇ ಬೇಕಾಯ್ತು. ಒಂದು ಜಾತಿಗೆ ಸೀಮಿತವಾದ ರಾಜಕಾರಣವನ್ನು ನಾನು ಎಂದಿಗೂ ಮಾಡಿಲ್ಲ" ಎಂದು ಗೌಡರು ಕಾಂಗ್ರೆಸ್ ನ ಕೆಲವು ನಾಯಕರಿಗೆ ಟಾಂಗ್ ನೀಡಿದರು.
"ಇಲ್ಲೊಬ್ಬ ಅಹಿಂದ ಅಹಿಂದ ಅಂತಾನೆ, ಇಬ್ಬರ ವಿರುದ್ದವೂ ನಾನು ಹೋರಾಟ ಮಾಡಿದ್ದೇನೆ" ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡರು.
ದೇವೇಗೌಡರ ಫೋನ್ ಕರೆ ಸ್ವೀಕರಿಸಲಿಲ್ಲವೇ ಯಡಿಯೂರಪ್ಪ?
"ಕನಕಪುರದಲ್ಲಿ ನಮ್ಮ ಶಕ್ತಿ ಕಡಿಮೆ ಇದೆ. ಡಿಕೆಶಿ ಅಲ್ಲಿ ಪ್ರಬಲರಾಗಿರುವ ಹಿನ್ನಲೆ ನಾವು 4 ಕಡೆ ಸ್ಪರ್ಧೆ ಮಾಡಿದ್ದೇವೆ. ಸ್ಥಳೀಯ ಕಾರ್ಯಕರ್ತರು ಬಿಜೆಪಿಗೆ ಅವಕಾಶ ಕೊಡಬಾರದು ಎಂದು ನಿರ್ಧರಿಸಿದ್ದಾರೆ. ಎಚ್ಡಿಕೆಗೆ ಡಿಕೆಶಿ ಬಲ ಕೊಟ್ಟು ಸಿಎಂ ಆಗುವಂತೆ ಬೆಂಬಲಿಸಿದ್ದರು. ರಾಜ್ಯದ ಬೇರೆ ಬೇರೆ ಜಿಲ್ಲೆಯ ಎಲ್ಲ ಕಡೆ ನಾವು ಸ್ಪರ್ಧೆ ಮಾಡಿದ್ದೇವೆ, ಇದರಲ್ಲಿ ಬೇರೇನು ಅರ್ಥ ಕಲ್ಪಿಸುವ ಅಗತ್ಯ ಇಲ್ಲ.ನಮ್ಮ ಶಕ್ತಿ ಎಷ್ಟಿದೆಯೋ ಅಷ್ಟಕ್ಕೆ ಸ್ಪರ್ಧೆ ಮಾಡಿದ್ದೇವೆ" ಎಂದು ಎಚ್ ಡಿಡಿ ಹೇಳಿದದರು.
"ಇಬ್ಬರ ಜೊತೆ ಮೈತ್ರಿ ಮಾಡಿ ನೋಡಿ ಆಯ್ತು. ಈಗ ಮತ್ತೆ ಆ ವಿಷಯ ಬೇಡ, ಇನ್ನು ಅನರ್ಹರ ತೀರ್ಪು ಸುಪ್ರೀಂ ಕೋರ್ಟಿನಿಂದ ಹೊರಬರಬೇಕಿದೆ. ಏನಾಗುತ್ತೆ ನೋಡೋಣ" ಎಂದರು.