"ಟೊಯೊಟಾ ಕಾರ್ಖಾನೆ ಸರ್ಕಾರಕ್ಕೆ ಕಟ್ಟಬೇಕಿದೆ 4 ಸಾವಿರ ಕೋಟಿ ರುಪಾಯಿ ಟ್ಯಾಕ್ಸ್''
ರಾಮನಗರ, ಫೆಬ್ರವರಿ 17: ರಾಮನಗರದ ಬಿಡದಿ ಕೈಗಾರಿಕಾ ವಲಯದಲ್ಲಿರುವ ಟೊಯೊಟಾ ಕಿರ್ಲೋಸ್ಕರ್ ಕಾರು ತಯಾರಿಕಾ ಕಂಪನಿ ಸರ್ಕಾರಕ್ಕೆ ಸುಮಾರು 4 ಸಾವಿರ ಕೋಟಿ ರುಪಾಯಿ ಟ್ಯಾಕ್ಸ್ ಕಟ್ಟಬೇಕಿದೆ ಎಂದು ಮಾಗಡಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಎಚ್.ಸಿ.ಬಾಲಕೃಷ್ಣ ಆರೋಪಿಸಿದ್ದಾರೆ.
ಟೊಯೊಟಾ ಕಾರ್ಮಿಕರ ಹೋರಾಟ 100 ದಿನ ಪೂರೈಸಿದ ಹಿನ್ನೆಲೆಯಲ್ಲಿ ಮಾಗಡಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಎಚ್.ಸಿ.ಬಾಲಕೃಷ್ಣ ಮಂಗಳವಾರ ಮಾಗಡಿಯ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಟೊಯೊಟಾ ಕಂಪನಿಯ ಆಡಳಿತ ಮಂಡಳಿಯ ಹಠಮಾರಿ ಧೋರಣೆಯನ್ನು ಖಂಡಿಸಿದರು.
ಕಾರ್ಮಿಕರಿಗೆ ಸೇವಾ ಭದ್ರತೆ ನೀಡುವಂತಹ ಕಾಯ್ದೆ ತಿದ್ದುಪಡಿ ಮಾಡಿ: ನಂಜಾವದೂತ ಶ್ರೀ
ಟೊಯೊಟಾ ಕಂಪನಿಯು ಸರ್ಕಾರಕ್ಕೆ 4 ಸಾವಿರ ಕೋಟಿ ಟ್ಯಾಕ್ಸ್ ಬಾಕಿ ಉಳಿಸಿಕೊಂಡಿದೆ. ಈ ಬಗ್ಗೆ ಸದನದಲ್ಲೇ ಸಚಿವರಾಗಿದ್ದ ಜಾರ್ಜ್ ರವರು 3700 ಕೋಟಿ ರೂ. ಟ್ಯಾಕ್ಸ್ ಬಾಕಿ ಉಳಿಸಿಕೊಂಡಿದೆ ಎಂದು ಉತ್ತರ ನೀಡಿದ್ದ ದಾಖಲೆಯನ್ನು ಪ್ರದರ್ಶಿಸಿದ ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ, ಅಲ್ಲಿಂದ ಇಲ್ಲಿಯವರೆಗೆ 900 ಕೋಟಿ ಬಾಕಿ ಇದೆ. ಒಟ್ಟು ಸುಮಾರು 4 ಸಾವಿರ ಕೋಟಿಗೂ ಹೆಚ್ಚು ಟೊಯೊಟಾ ಟ್ಯಾಕ್ಸ್ ಬಾಕಿ ಉಳಿಸಿಕೊಂಡಿದೆ ಎಂದರು.
ಸರ್ಕಾರ ಟೊಯೊಟಾ ಕಂಪನಿಯಿಂದ ಟ್ಯಾಕ್ಸ್ ವಸೂಲಿ ಮಾಡಿದ್ದರೆ, ಕೊರೊನಾ ಸಂಕಷ್ಟದಲ್ಲಿ ಖಜಾನೆಯಾದರೂ ತುಂಬುತ್ತಿತ್ತು. ಸರಿಯಾಗಿ ಟ್ಯಾಕ್ಸ್ ಪಾವತಿಸದ ಕಾರ್ಖಾನೆ, ಕಾರ್ಮಿಕರ ಬೇಡಿಕೆ ಈಡೇರಿಸುವಂತೆ ಸರ್ಕಾರ ನೀಡಿದ ಅದೇಶವನ್ನು ಕಡೆಗಣಿಸಿದೆ. ಎಲ್ಲೋ ಒಂದು ಕಡೆ ಸರ್ಕಾರ ಕೂಡ ಟೊಯೊಟಾ ಆಡಳಿತ ಮಂಡಳಿಯವರಿಗೆ ಎದರುತ್ತಿದ್ದಾರಾ ಎಂಬ ಸಂಶಯ ಮೂಡುತ್ತಿದೆ ಎಂದು ಮಾಜಿ ಶಾಸಕ ಬಾಲಕೃಷ್ಣ ಟೀಕಿಸಿದರು.
ಕಾರ್ಮಿಕರ ಪ್ರತಿಭಟನೆ 100 ದಿನ ಪೂರೈಸಿದೆ, ಇಷ್ಟಾದರೂ ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಟೊಯೊಟಾ ಆಡಳಿತ ಮಂಡಳಿಯ ಹಠಮಾರಿ ಧೋರಣೆ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸಿ.ಎಂ.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಧ್ಯ ಪ್ರವೇಶ ಮಾಡುವಂತೆ ಒತ್ತಾಯಿಸುತ್ತೇವೆ ಎಂದರು.
Recommended Video
ನಮ್ಮ ಮನವಿಗೆ ಸ್ಪಂದನೆ ಸಿಗದೆ ಇದ್ದರೆ ನಮ್ಮ ಮುಂದಿನ ಹೋರಾಟದ ನಿಲುವನ್ನು ತಿಳಿಸುತ್ತೇವೆ ಎಂದು ಮಾಜಿ ಶಾಸಕ ಕಾಂಗ್ರೆಸ್ ಮುಖಂಡ ಎಚ್.ಸಿ.ಬಾಲಕೃಷ್ಣ ತಿಳಿಸಿದರು.