ಕನಿಷ್ಟ ವೇತನಕ್ಕೆ ಆಗ್ರಹ, ರಸ್ತೆಗಿಳಿದ ಗ್ರಾಮ ಪಂಚಾಯಿತಿ ನೌಕರರು
ರಾಮನಗರ, ಜುಲೈ 13: ರಾಜ್ಯಾದ್ಯಂತ ಗ್ರಾಮ ಪಂಚಾಯಿತಿಗಳಲ್ಲಿ ದುಡಿಯುತ್ತಿರುವ ಲಕ್ಷಾಂತರ ನೌಕರರಿಗೆ ಕನಿಷ್ಟ ವೇತನ ನಿಗದಿ ಮಾಡಬೇಕು, ಬಾಕಿ ವೇತನ ಮತ್ತು ಉಪಧನ ನೀಡದಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಗ್ರಾಮ ಪಂಚಾಯತಿ ನೌಕರರು ಸಾವಿರಾರು ಸಂಖ್ಯೆಯಲ್ಲಿ ರಸ್ತೆಗಿಳಿದು ಬುಧವಾರ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ.
ರಾಮನಗರದ ನಗರದ ಗಾಂಧಿ ಪಾರ್ಕ್ನಿಂದ ಬೃಹತ್ ಸಂಖ್ಯೆಯಲ್ಲಿ ಪತ್ರಿಭಟನಾ ಮೆರವಣಿಗೆ ಪ್ರಾರಂಭ ಮಾಡಿದ ಕರ್ನಾಟಕ ಗ್ರಾಮ ಪಂಚಾಯತ್ ನೌಕರರ ಸಂಘದ ರಾಮನಗರ ಜಿಲ್ಲಾ ಸಮಿತಿ ಜಿಲ್ಲಾ ಪಂಚಾಯತಿ ಕಚೇರಿವರೆಗೆ ಮೆರವಣಿಗೆ ನಡೆಸಿ ನಂತರ ಜಿಲ್ಲಾ ಕಾರ್ಮಿಕ ಅಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ನಡೆಸಿ, ನೌಕರರ ಬೇಡಿಕೆ ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಗ್ರಾಮ ಪಂಚಾಯಿತಿ ನಿರ್ಲಕ್ಷ್ಯ, ಗ್ರಾಮಸ್ಥರಿಂದಲೇ ಟಾರ್ಪಲ್ ಬಸ್ ತಂಗುದಾಣ ನಿರ್ಮಾಣ
ಗ್ರಾಮ ಪಂಚಾಯಿತಿ ನೌಕರರಾದ ಬಿಲ್ ಕಲೆಕ್ಟರ್, ಗುಮಾಸ್ತ, ಕ್ಲರ್ಕ್ ಕಂ ಡೇಟಾ ಎಂಟ್ರಿ ಆಪರೇಟರ್, ಅಟೆಂಡರ್, ವಾಟರ್ಮ್ಯಾನ್, ಸ್ವೀಪರ್ ಸೇರಿದಂತೆ ಗ್ರಾಮ ಪಂಚಾಯತಿಯಲ್ಲಿ ದುಡಿಯುತ್ತಿರುವ ನೌಕರರಿಗೆ 2016 ರಲ್ಲಿ ಸರ್ಕಾರ ಕನಿಷ್ಟ ವೇತನ ನಿಗದಿಮಾಡಿದೆ. ಆದರೆ ಕಾನೂನಿನ ಅನ್ವಯ ನಿಗದಿಯಾದ 5 ವರ್ಷಕ್ಕೆ ವೇತನ ಪರಿಷ್ಕರಣೆ ಮಾಡಬೇಕೆಂದು ಸರ್ಕಾರಕ್ಕೆ ಮನವಿಮಾಡಿ ಹೋರಾಟ ಮಾಡಿದ್ದಾರೆ.
ಗ್ರಾಮ ಪಂಚಾಯತಿ ನೌಕರರ ಹೋರಾಟದ ಫಲವಾಗಿ ಸರ್ಕಾರ 2021ರಲ್ಲಿ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ನೀಡಬೇಕಾದ ಕನಿಷ್ಠ ವೇತನ ಕರಡು ಅಧಿಸೂಚನೆಗಳಿಗೆ ಸಲಹೆ/ ಆಕ್ಷೇಪಣೆಗಳನ್ನು ಸಲ್ಲಿಸಲು ಸೂಚಿಸಿ, ಕಲೆಕ್ಟರ್, ಗುಮಾಸ್ತ, ಕ್ಲರ್ಕ್ ಕಂ ಡೇಟಾ ಎಂಟ್ರಿ - ಆಪರೇಟರ್ಗಳಿಗೆ ರೂ 15196. ವಾಟರ್ ಮ್ಯಾನ್, ಪಂಪ್ ಆಪರೇಟರ್ಗಳಿಗೆ ರೂ.13,509. ಅಟೆಂಡರ್ಗಳಿಗೆ ರೂ 12,873. ಹಾಗೂ ಸ್ವೀಪರ್ಗಳಿಗೆ ರೂ.16109 ಎಂದು ಸರಕಾರ ತನ್ನ ಕರಡಿನಲ್ಲಿ ತಿಳಿಸಿದೆ.
ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕೆಲಸಗಳಲ್ಲಿ ದುಡಿಯುವ ನೌಕರರಿಗೆ ಕುಶಲತೆಯ ಆಧಾರದಲ್ಲಿ ಸಮಾನ ಕೆಲಸಕ್ಕೆ ಸಮಾನ ವೇತನ ನಿಗದಿಪಡಿಸಬೇಕು. ಅದೇ ರೀತಿಯಲ್ಲಿ ನೌಕರರ ಸೇವಾ ಅವಧಿಗೆ ಮಾನ್ಯತೆ ನೀಡುವ ರೀತಿಯಲ್ಲಿ ನಿಗದಿಪಡಿಸಲಾಗಿರುವ ಮೂಲ ವೇತನದಲ್ಲಿ ಹೆಚ್ಚಳವಾಗಬೇಕು ಎಂದು ಗ್ರಾಮ ಪಂಚಾಯತಿ ನೌಕರರ ಒಕ್ಕೂಟ ಸರ್ಕಾರವನ್ನು ಒತ್ತಾಯಿಸಿದೆ.
ದೇಶದ ಹಣದುಬ್ಬರ ಶೇ. 7.8 ರಷ್ಟಾಗಿದ್ದು, ಅಗತ್ಯ ವಸ್ತುಗಳ ಬೆಲೆಗಳೆಲ್ಲಾ ಹೆಚ್ಚಾಗಿ ಜೀವನ ನಡೆಸುವುದೆ ದುಸ್ತರವಾಗಿದೆ. ಕಾನೂನಾತ್ಮಕ ಅಂಶಗಳನ್ನು ಪರಿಗಣಿಸಿ ಗ್ರಾಮ ಪಂಚಾಯಿತಿ ನೌಕರರಾದ ಬಿಲ್ ಕಲೆಕ್ಟರ್, ಗುಮಾಸ್ತ, ಗುಮಾಸ್ತ, ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ಗಳಿಗೆ ರೂ. 38,021. ವಾಟರ್ಮ್ಯಾನ್, ಪಂಪ್ ಆಪರೇಟರ್ಗಳಿಗೆ ರೂ.33062, ಅಟೆಂಡರ್ಗಳಿಗೆ ರೂ. 28750, ಸ್ವಚ್ಛತಾಗಾರರಿಗೆ ರೂ. 25000. ನೀಡಬೇಕೆಂದು ಆಗ್ರಹಿಸಿದ್ದಾರೆ.
ತಮ್ಮ ಎಲ್ಲಾ ಬೇಡಿಕೆಗಳನ್ನು ತುರ್ತಾಗಿ ಈಡೇರಿಸಬೇಕೆಂದು ಆಗ್ರಹಿಸಿ ಕರ್ನಾಟಕ ಗ್ರಾಮ ಪಂಚಾಯತ್ ನೌಕರರ ಸಂಘದ ಕಾರ್ಯಕರ್ತರು ಜಿಲ್ಲಾ ಪಂಚಾಯತ್ ಸಿಇಒ ಅವರ ಮೂಲಕ ಕಾರ್ಮಿಕ ಇಲಾಖೆಯ ಅಪರಾ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದರು.